ಚಂಡೀಗಢ, ಪಟಿಯಾಲದಲ್ಲಿ ಮೊಳಗಿದ ಸೈರನ್ : ಜನರಿಗೆ ಮನೆಯಿಂದ ಹೊರಬರದಂತೆ ಸೂಚನೆ

Photo | hindustantimes
ಚಂಡೀಗಢ: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಶುಕ್ರವಾರ ಬೆಳಿಗ್ಗೆ ಚಂಡೀಗಢ ಮತ್ತು ಪಟಿಯಾಲದಲ್ಲಿ ಅಧಿಕಾರಿಗಳು ಎಚ್ಚರಿಕೆಯ ಏರ್ ಸೈರನ್ ಮೊಳಗಿಸಿದರು. ಜನರಿಗೆ ಒಳಾಂಗಣದಲ್ಲಿರುವಂತೆ ಮತ್ತು ಬಾಲ್ಕನಿಗಳಿಂದ ದೂರವಿರುವಂತೆ ಸೂಚಿಸಿದರು.
ಪಾಕಿಸ್ತಾನ ಗುರುವಾರ ರಾತ್ರಿ ಭಾರತದ ಕೆಲ ನಗರವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಯತ್ನಿಸಿತ್ತು. ಆದರೆ, ಭಾರತ ಇದನ್ನು ವಿಫಲಗೊಳಿಸಿತ್ತು.
ಪಾಕ್ನಿಂದ ಸಂಭವನೀಯ ದಾಳಿ ಬಗ್ಗೆ ವಾಯುಸೇನೆಯ ಎಚ್ಚರಿಕೆ ಹಿನ್ನೆಲೆ ಚಂಡೀಗಢದಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು ಒಂದು ಗಂಟೆಗಳ ಕಾಲ ಸೈರನ್ ಮೊಳಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನರಿಗೆ ರಸ್ತೆಗಳಲ್ಲಿ ಓಡಾಡದಂತೆ ಮತ್ತು ಬಾಲ್ಕನಿಗಳಿಂದ ದೂರ ಇರುವಂತೆ ಸೂಚಿಸಲಾಗಿದೆ.
ಗುರುವಾರ ರಾತ್ರಿ ಜಮ್ಮುಕಾಶ್ಮೀರದ ಕೆಲವು ಭಾಗಗಳಲ್ಲಿ ಪಾಕಿಸ್ತಾನ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿ ಯತ್ನ ಮತ್ತು ಪಂಜಾಬ್ನ ಪಠಾಣ್ಕೋಟ್ನಲ್ಲಿ ಶೆಲ್ ದಾಳಿ ಯತ್ನದ ನಂತರ ಇದೇ ರೀತಿಯ ವಾಯು ಸೈರನ್ ಮೊಳಗಿಸಲಾಗಿತ್ತು ಮತ್ತು ಬ್ಲಾಕ್ಔಟ್ ಜಾರಿಗೊಳಿಸಲಾಗಿತ್ತು.
ಚಂಡೀಗಢದ ಎಲ್ಲಾ ಖಾಸಗಿ ಮತ್ತು ಸರಕಾರಿ ಶಾಲೆಗಳಿಗೆ ಶುಕ್ರವಾರ ಮತ್ತು ಶನಿವಾರ ರಜೆ ನೀಡಲಾಗಿದೆ ಎಂದು ಚಂಡೀಗಢ ಉಪ ಆಯುಕ್ತ ನಿಶಾಂತ್ ಕುಮಾರ್ ಯಾದವ್ ಹೇಳಿದ್ದಾರೆ.