ಸಂಸತ್ ನಲ್ಲಿ ಗದ್ದಲಕ್ಕೆ ಕಾರಣವಾದ ಮಹಾ ಕುಂಭ ಮೇಳದಲ್ಲಿನ ಕಾಲ್ತುಳಿತ ಫಟನೆ
ವಿರೋಧ ಪಕ್ಷಗಳ ಸಂಸದರಿಂದ ಸದನದ ಬಾವಿಗೆ ಇಳಿದು ಪ್ರತಿಭಟನೆ

Photo credit: PTI
ಹೊಸದಿಲ್ಲಿ: ಕಳೆದ ವಾರ ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸಂಸದರು ತೀವ್ರ ಪ್ರತಿಭಟನೆ ನಡೆಸಿದ ನಂತರ ಸೋಮವಾರ ಬೆಳಿಗ್ಗೆ ಸಂಸತ್ತಿನ ಬಜೆಟ್ ಅಧಿವೇಶನ ಮತ್ತೆ ಆರಂಭವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗೆ ಧಾವಿಸಿದ ಆಕ್ರೋಶಿತ ಸಂಸದರು ಕುಂಭ ಮೇಳದ ಬಗ್ಗೆ ಉತ್ತರ ನೀಡಿ ಎಂದು ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದರು.
ಉತ್ತರ ಪ್ರದೇಶ ಸರ್ಕಾರವು ನಿಜವಾದ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದೆ ಎಂದ ಅವರು ಕಾಲ್ತುಳಿತದಲ್ಲಿ ಮೃತಪಟ್ಟವರ ನಿಖರ ಪಟ್ಟಿಯನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಘಟನೆಯ ನಂತರ ಗಂಟೆಗಳ ಕಾಲ ಸಾವುಗಳನ್ನು ದೃಢೀಕರಿಸಲು ಸರ್ಕಾರ ಸಮಯ ತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ವಿರೋಧ ಪಕ್ಷವು ಸದನ ಕಾರ್ಯನಿರ್ವಹಿಸುವುದನ್ನು ಬಯಸುವುದಿಲ್ಲ. ಈ ಕುರಿತು ಆದೇಶ ಹೊರಡಿಸುತ್ತೇನೆ ಎಂದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡ ಸಂಸದರಿಗೆ ಮನವಿ ಮಾಡಿದರು.
ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2025 ಮಂಡಿಸುತ್ತಿದ್ದಾಗ ಘೋಷಣೆ ಕೂಗುವ ಮೂಲಕ ಗದ್ದಲ ಉಂಟಾಗಿತ್ತು. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಆ ಪ್ರತಿಭಟನೆಯ ನೇತೃತ್ವ ವಹಿಸಿತ್ತು. ಸೋಮವಾರ ಬೆಳಿಗ್ಗೆಯೂ ಪ್ರತಿಭಟನೆ ಮುಂದುವರಿಯಿತು.







