ದುರ್ಬಲಗೊಂಡ ‘ಮೊಂಥಾ’ ಚಂಡಮಾರುತ

Photo Credit : PTI
ಮುಂಬೈ, ಅ. 29: ತೀವ್ರ ಚಂಡಮಾರುತ ‘ಮೊಂಥಾ’ ಆಂಧ್ರಪ್ರದೇಶದ ಕರಾವಳಿ ದಾಟಿದ ಬಳಿಕ ದುರ್ಬಲಗೊಂಡು ಬಿರುಗಾಳಿಯಾಗಿ ಮಾರ್ಪಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಬುಧವಾರ ತಿಳಿಸಿದೆ.
ಚಂಡಮಾರುತದಿಂದಾಗಿ ಹಲವು ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಸಂಜೆ ಭಾರೀ ಮಳೆ ಸುರಿದಿದೆ. ಬಲವಾದ ಗಾಳಿ ಬೀಸಿದೆ ಎಂದು ಐಎಂಡಿ ತಿಳಿಸಿದೆ.
‘‘ತೀವ್ರ ಚಂಡಮಾರುತ ಮೊಂಥಾ ಆಂಧ್ರಪ್ರದೇಶದ ಕರಾವಳಿ ಮೇಲಿನಿಂದ ವಾಯುವ್ಯಕ್ಕೆ ಗಂಟೆಗೆ 10 ಕಿ.ಮೀ. ವೇಗದಲ್ಲಿ ಚಲಿಸಿ, ದುರ್ಬಲಗೊಂಡು ಬಿರುಗಾಳಿಗಾಲಿಯಾಗಿ ಪರಿವರ್ತನೆಗೊಂಡಿದೆ’’ ಎಂದು ಐಎಂಡಿ ತಿಳಿಸಿದೆ.
ತೀವ್ರ ಚಂಡಮಾರುತ ‘ಮೊಂಥಾ’ದಿಂದ ರಾಜ್ಯದಲ್ಲಿ ಸಂಭವಿಸಿದ ದುರ್ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮುನ್ನೆಚ್ಚರಿಕೆ ವಹಿಸಿರುವುದರಿಂದ ನಷ್ಟದ ಪ್ರಮಾಣ ಕಡಿಮೆಯಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ಚಂಡಮಾರುತ ಸಂತ್ರಸ್ತ ಜನರಿಗೆ ಇನ್ನಷ್ಟು ಪರಿಹಾರ ನೀಡಲು ಇನ್ನೂ ಎರಡು ದಿನಗಳ ಕಾಲ ತಮ್ಮ ಪ್ರಯತ್ನವನ್ನು ಮುಂದುವರಿಸುವಂತೆ ಆಂಧ್ರಪ್ರದೇಶದ ಸಿಎಂ ಆಗಿರುವ ಅವರು ಆಡಳಿತಕ್ಕೆ ಸೂಚಿಸಿದ್ದಾರೆ.
‘‘ನಾವು ಇನ್ನೂ ಎರಡು ದಿನ ಇದೇ ರೀತಿ ಕೆಲಸ ಮಾಡಿದರೆ, ಜನರಿಗೆ ಹೆಚ್ಚಿನ ಪರಿಹಾರ ನೀಡಬಹುದು’’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







