ದಿಲ್ಲಿ ಸ್ಫೋಟ ಪ್ರಕರಣ | ಎನ್ಐಎಯಿಂದ ಮತ್ತೆ ನಾಲ್ವರು ಶಂಕಿತರ ಬಂಧನ

Photo Credit : PTI
ಹೊಸದಿಲ್ಲಿ, ನ. 20: ದಿಲ್ಲಿಯ ಕೆಂಪು ಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಹಾಗೂ ಕಾಶ್ಮೀರ ಮತ್ತು ಉತ್ತರಪ್ರದೇಶದಿಂದ ಮತ್ತೆ ನಾಲ್ವರು ಶಂಕಿತರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಬಂಧಿಸಿದೆ.
ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದ ಶಂಕಿತರ ಸಂಖ್ಯೆ 6ಕ್ಕೆ ತಲುಪಿದೆ ಎಂದು ಎನ್ಐಎಯ ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪುಲ್ವಾಮದ ಡಾ. ಮುಝಾಮಿಲ್ ಶಕೀಲ್ ಗನಾಯಿ, ಅನಂತ್ ನಾಗ್ ನ ಡಾ. ಅದೀಲ್ ಅಹ್ಮದ್ ರಾಥರ್, ಲಕ್ನೋದ ಡಾ. ಶಹೀನ್ ಸಯೀದ್, ಶೋಪಿಯಾನದ ಮುಫ್ತಿ ಇರ್ಫಾನ್ ಅಹ್ಮದ್ ವಾಗೆಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ನಾಲ್ವರು ಸ್ಫೋಟವನ್ನು ಯೋಜಿಸುವಲ್ಲಿ ಹಾಗೂ ಕಾರ್ಯಗತಗೊಳಿಸುವಲ್ಲಿ ನೇರ ಪಾತ್ರ ವಹಿಸಿರುವುದಾಗಿ ಶಂಕಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದ ಬಳಿಕ ಈ ಬಂಧನಗಳು ಅತ್ಯಂತ ಮುಖ್ಯವಾದವು ಎಂದು ಅವರು ತಿಳಿಸಿದ್ದಾರೆ.
‘‘ಈ ಹಿಂದೆ ಸ್ಫೋಟದಲ್ಲಿ ಬಳಸಿದ ಕಾರಿನ ನೋಂದಾಯಿತ ಮಾಲಕ ಅಮೀರ್ ರಶೀದ್ ಅಲಿ, ಬಾಂಬರ್ ಗೆ ತಾಂತ್ರಿಕ ಬೆಂಬಲ ಹಾಗೂ ಸಾಗಾಟದ ನೆರವು ನೀಡಿದ್ದಾನೆ ಎನ್ನಲಾದ ಜಾಸಿರ್ ಬಿಲಾಲ್ ವಾನಿ ಆಲಿಯಾಸ್ ದಾನಿಶ್ ನನ್ನು ಬಂಧಿಸಿದ್ದೇವೆ’’ ಎಂದು ಅಧಿಕಾರಿ ತಿಳಿಸಿದ್ದಾರೆ.







