ಕೇರಳ: ಬಿಜೆಪಿ ಕಾರ್ಯಕರ್ತನ ನಿವಾಸದಲ್ಲಿ ಸ್ಫೋಟಕಗಳನ್ನು ಪತ್ತೆ ಹಚ್ಚಿದ ಪೊಲೀಸರು; ವರದಿ

ಸಾಂದರ್ಭಿಕ ಚಿತ್ರ
ಪಾಲಕ್ಕಾಡ್: ಕೇರಳದ ಕಲ್ಲೆಕ್ಕಾಡ್ ಮೂಲದ ಬಿಜೆಪಿ ಕಾರ್ಯಕರ್ತ ಸುರೇಶ್ ನಿವಾಸದಲ್ಲಿ ಸ್ಫೋಟಕಗಳು ಪತ್ತೆಯಾಗಿದೆ. ಪಾಲಕ್ಕಾಡ್ನಲ್ಲಿರುವ ಆರೆಸ್ಸೆಸ್ ನಿಯಂತ್ರಿತ ವ್ಯಾಸ ವಿದ್ಯಾಪೀಠದಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಮತ್ತು ಸುರೇಶ್ಗೆ ನಂಟು ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು mediaoneonline.com ವರದಿ ಮಾಡಿದೆ.
ಬಿಜೆಪಿ ಕಾರ್ಯಕರ್ತ ಸುರೇಶ್ ನಿವಾಸದಲ್ಲಿ 24 ವಿದ್ಯುತ್ ಡಿಟೋನೇಟರ್ಗಳು ಮತ್ತು 12 ಅಕ್ರಮವಾಗಿ ತಯಾರಿಸಿದ ಸ್ಫೋಟಕಗಳು ಪತ್ತೆಯಾಗಿದೆ. ಸುರೇಶ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಯಮಗಳ ಪ್ರಕಾರ ಡಿಟೋನೇಟರ್ ಹೊಂದಲು ಪರವಾನಗಿ ಅಗತ್ಯವಿದೆ. ಆದರೆ ಸುರೇಶ್ ಪರವಾನಗಿ ಹೊಂದಿರಲಿಲ್ಲ. ಪೊಲೀಸರು ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಪಾಲಕ್ಕಾಡ್ನ ವಡಕಾಂತರದಲ್ಲಿರುವ ಆರೆಸ್ಸೆಸ್ ನಿರ್ವಹಿಸುತ್ತಿರುವ ವ್ಯಾಸ ವಿದ್ಯಾ ಪೀಠಂ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಂಜೆ ಸ್ಫೋಟ ಸಂಭವಿಸಿತ್ತು. ವಿದ್ಯಾರ್ಥಿಯೋರ್ವ ಶಾಲಾ ಆವರಣದಲ್ಲಿ ಕಂಡುಬಂದ ವಸ್ತುವನ್ನು ಸ್ಫೋಟಕ ಎಂದು ತಿಳಿಯದೆ ಎಸೆದ ವೇಳೆ ಸ್ಪೋಟ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಮತ್ತು ವೃದ್ಧ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿತ್ತು.







