Maharashtra | 3 ತಿಂಗಳಲ್ಲಿ 766ಕ್ಕೂ ಅಧಿಕ ರೈತರು ಆತ್ಮಹತ್ಯೆ: ಎನ್ಸಿಪಿ-ಎಸ್ಸಿಪಿ ಸಂಸದೆ ಫೌಝಿಯಾ ಖಾನ್

ಫೌಝಿಯಾ ಖಾನ್ | Photo Credit : @DrFauziaKhanNCP
ಹೊಸದಿಲ್ಲಿ, ಡಿ. 11: ಮಹಾರಾಷ್ಟ್ರದಲ್ಲಿ ಕಳೆದ ಮೂರು ತಿಂಗಳಲ್ಲಿ 766ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್ಸಿಪಿ-ಎಸ್ಸಿಪಿ ಸಂಸದೆ ಫೌಝಿಯಾ ಖಾನ್ ರಾಜ್ಯಸಭೆಯಲ್ಲಿ ಗುರುವಾರ ಹೇಳಿದ್ದಾರೆ. ಸರಕಾರ ರೈತರ ಬಗ್ಗೆ ಕಾಳಜಿ ವಹಿಸಲು ಆರಂಭಿಸುವುದು ಯಾವಾಗ? ಎಂದು ಅವರ ಪ್ರಶ್ನಿಸಿದ್ದಾರೆ.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಶ್ನಿಸಿದ ಖಾನ್, ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು. ಕೇವಲ ಮೂರು ತಿಂಗಳಲ್ಲಿ 766 ಸಾವುಗಳು ಸಂಭವಿಸಿವೆ ಎಂದು ರಾಜ್ಯ ಸರಕಾರ ವಿಧಾನ ಸಭೆಗೆ ತಿಳಿಸಿದೆ ಎಂದು ಅವರು ಹೇಳಿದರು.
ಇದರಲ್ಲಿ 676 ಕುಟುಂಬಗಳು ಸರಕಾರದ ಪರಿಹಾರ ಸ್ವೀಕರಿಸಿವೆ. 200 ಕುಟುಂಬಗಳು ಪರಿಹಾರ ನಿರಾಕರಿಸಿವೆ ಎಂದು ಅವರು ಹೇಳಿದರು.
ಸರಕಾರ 31,628 ಕೋ. ರೂ. ಪರಿಹಾರ ಪ್ಯಾಕೇಜ್ ಘೋಷಿಸಿದೆ. ಈ ವರ್ಷ ಭಾರೀ ಮಳೆ ಹಾಗೂ ವ್ಯಾಪಕ ನೆರೆಯ ಹಿನ್ನೆಲೆಯಲ್ಲಿ ನೆರವು ನೀಡುವ ಉದ್ದೇಶವನ್ನು ಈ ಪ್ಯಾಕೇಜ್ ಹೊಂದಿತ್ತು. ಆದರೆ, ವಾಸ್ತವ ಭಿನ್ನವಾಗಿತ್ತು ಎಂದು ಅವರು ಹೇಳಿದ್ದಾರೆ.
ಹೆಚ್ಚುವರಿ ನೆರವು ಕೋರಿ ಮಹಾರಾಷ್ಟ್ರ ದಿಂದ ಯಾವುದೇ ಪ್ರಸ್ತಾವವನ್ನು ಸಚಿವಾಲಯ ಸ್ವೀಕರಿಸಿಲ್ಲ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಲೋಕಸಭೆಗೆ ತಿಳಿಸಿದ್ದಾರೆ ಎಂದು ಅವರು ಗಮನ ಸೆಳೆದರು.
ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ಡಿಆರ್ಎಫ್) ಅಡಿಯಲ್ಲಿ ರೈತರಿಗೆ 4,176 ಕೋ.ರೂ. ಮಂಜೂರು ಮಾಡಲಾಗಿದೆ. ಇದರಲ್ಲಿ ಕೇಂದ್ರದ ಪಾಲು 3,180 ಕೋ.ರೂ. 1,13,455 ರೈತರ ಬ್ಯಾಂಕ್ ಖಾತೆಗಳಿಗೆ 82 ಕೋ. ರೂ. ಜಮೆ ಮಾಡಲಾಗಿದೆ ಎಂದು ಖಾನ್ ಅವರು ಚೌಹಾಣ್ ಅವರ ಪ್ರತಿಕ್ರಿಯೆ ಉಲ್ಲೇಖಿಸಿ ಹೇಳಿದರು.







