ಮಹಾಕುಂಭ ಮೇಳದಲ್ಲಿ 'ಹಿಂದೂ ರಾಷ್ಟ್ರ ಸಂವಿಧಾನ' ಮಂಡನೆ : ವರದಿ

Photo | PTI
ಲಕ್ನೋ: ಅಖಂಡ ಹಿಂದೂ ರಾಷ್ಟ್ರದ ಸಂವಿಧಾನವನ್ನು ಸಿದ್ಧ ಪಡಿಸಲಾಗಿದ್ದು, ಪಂಚಮಿ ಸಂದರ್ಭದಲ್ಲಿ ಫೆಬ್ರವರಿ 3ರಂದು ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜನರ ಮುಂದೆ ಅದನ್ನು ಪ್ರಸ್ತುತ ಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿರುವ ಬಗ್ಗೆ Deccanherald ವರದಿ ಮಾಡಿದೆ.
501 ಪುಟಗಳ ದಾಖಲೆಯನ್ನು ಉತ್ತರ ಮತ್ತು ದಕ್ಷಿಣ ಭಾರತದ 25 ವಿದ್ವಾಂಸರ ಸಮಿತಿಯು 12 ತಿಂಗಳು ಮತ್ತು 12 ದಿನಗಳಲ್ಲಿ ರಚಿಸಿದ್ದು, ರಾಮರಾಜ್ಯ, ಕೃಷ್ಣನ ರಾಜ್ಯ, ಮನುಸ್ಮೃತಿ ಮತ್ತು ಚಾಣಕ್ಯನ ಅರ್ಥಶಾಸ್ತ್ರದಿಂದ ಸ್ಫೂರ್ತಿ ಪಡೆದ ಅಂಶಗಳನ್ನು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ. ನಾಲ್ವರು ಶಂಕರಾಚಾರ್ಯರು ಒಪ್ಪಿಗೆ ನೀಡಿದ ನಂತರ ಕೇಂದ್ರ ಸರ್ಕಾರಕ್ಕೆ ಇದನ್ನು ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.
ಈ ಸಂವಿಧಾನದ ಪ್ರಕಾರ, ಸನಾತನ ಧರ್ಮದ ಅನುಯಾಯಿಗಳು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಹೊಂದಿರುತ್ತಾರೆ ಮತ್ತು ಜೈನ, ಸಿಖ್, ಬೌದ್ಧ ಧರ್ಮದ ಅನುಯಾಯಿಗಳು ಮಾತ್ರ ಮತ ಚಲಾಯಿಸುವ ಅವಕಾಶ ಹೊಂದಿರುತ್ತಾರೆ. ಧರ್ಮ ಸಂಸದ್(ಸಂಸತ್ತು) ಸದಸ್ಯರು ಕ್ಷೇತ್ರ ಭತ್ಯೆ, ಸರಳ ಭದ್ರತೆ ಮತ್ತು ವಾಹನ ಪಡೆಯಲು ಅರ್ಹರಾಗಿರುತ್ತಾರೆ. ಧರ್ಮ ಸಂಸದ್ ನ ಅಭ್ಯರ್ಥಿಗಳು ವೈದಿಕ ಗುರುಕುಲದ(ಶಾಲೆ) ವಿದ್ಯಾರ್ಥಿಯಾಗಿರಬೇಕು ಎಂದು ‘ಸಂವಿಧಾನ’ ಸಿದ್ಧಪಡಿಸಿದ ಸಮಿತಿಗೆ ಸೇರಿದ ವ್ಯಕ್ತಿಯೋರ್ವರು ತಿಳಿಸಿರುವ ಬಗ್ಗೆ Deccanherald ವರದಿ ಮಾಡಿದೆ.
'ಹಿಂದೂ ರಾಷ್ಟ್ರದ ಸಂವಿಧಾನ'ದಲ್ಲಿ 'ಹಿಂಪಡೆಯುವ ಹಕ್ಕು' ಎಂಬ ಅಂಶಗಳಿವೆ. ಧರ್ಮ ಸಂಸದ್ ಕ್ಷೇತ್ರದಲ್ಲಿ ಕನಿಷ್ಠ 50 ಸಾವಿರ ಜನರು ಸಹಿ ಮಾಡಿದ ಪ್ರಸ್ತಾವನೆಯನ್ನು ಕಳುಹಿಸಿದರೆ ಕ್ಷೇತ್ರದಲ್ಲಿ ಪ್ರತಿನಿಧಿಯನ್ನು ಹಿಂಪಡೆಯವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗುತ್ತದೆ. ‘ಸಂವಿಧಾನ’ವು ‘ಹಿಂದೂ’ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೆ ತರಲು ಅವಕಾಶ ನೀಡುತ್ತದೆ. 'ಪ್ರತಿಯೊಬ್ಬರಿಗೂ ಶೀಘ್ರ ನ್ಯಾಯದ ಭರವಸೆ ನೀಡಲಾಗುತ್ತದೆ. ಶಿಕ್ಷೆಯು ವ್ಯಕ್ತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿರುತ್ತದೆ. ಸುಳ್ಳು ಆರೋಪಗಳನ್ನು ಹೊರಿಸುವವರಿಗೆ ಶಿಕ್ಷೆಯಾಗಲಿದೆ. ಸಂವಿಧಾನದ ಪ್ರಕಾರ, ದೇಶದಲ್ಲಿ ಪ್ರಾಚೀನ ವೈದಿಕ ಗುರುಕುಲ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲಾಗುತ್ತದೆ. ಎಲ್ಲಾ ಆಂಗ್ಲ ಮಾಧ್ಯಮ ಶಾಲೆಗಳನ್ನು ಗುರುಕುಲಗಳಾಗಿ ಪರಿವರ್ತಿಸಲಾಗುತ್ತದೆ. ರಾಜ್ಯದಿಂದ ಆರ್ಥಿಕ ನೆರವನ್ನು ಪಡೆಯುವ ಎಲ್ಲಾ ಮದರಸಾಗಳನ್ನು ಬಂದ್ ಮಾಡಲಾಗುತ್ತದೆ.







