Tamil Nadu | ನಾಲ್ವರು ಮಾಜಿ ಸಚಿವರು TVK ಸೇರ್ಪಡೆ

Photo Credit : PTI
ಚೆನ್ನೈ, ಜೂ. 6: ವಿಧಾನಸಭೆ ಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಬಳಿಕ ಆಂತರಿಕ ಭಿನ್ನಮತ ಮತ್ತು ಸರಣಿ ಪಕ್ಷಾಂತರಗಳಿಂದ ತತ್ತರಿಸಿರುವ ಎಐಎಡಿಎಂಕೆಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.
ಎಐಎಡಿಎಂಕೆಯ ನಾಲ್ವರು ಮಾಜಿ ಸಚಿವರು ಮತ್ತು ಹಿರಿಯ ನಾಯಕರೊಬ್ಬರು ಶನಿವಾರ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಉಡುಮಲೈ ಕೆ. ರಾಧಾಕೃಷ್ಣನ್, ಎಂ.ಸಿ. ಸಂಪತ್, ಕಂಡಬೂರ್ ಸಿ. ರಾಜು ಮತ್ತು ಎನ್.ಆರ್. ಶಿವಪತಿ ಅವರು ಚೆನ್ನೈಯಲ್ಲಿರುವ ಟಿವಿಕೆ ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಹಾಗೂ ಚುನಾವಣಾ ಪ್ರಚಾರ ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಆದವ್ ಅರ್ಜುನ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಟಿವಿಕೆ ಸೇರಿದರು.
ವಿಜಯ್ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬಳಿಕ ಎಐಎಡಿಎಂಕೆಯಿಂದ ನಡೆದ ಅತ್ಯಂತ ಗಮನಾರ್ಹ ಪಕ್ಷಾಂತರಗಳಲ್ಲಿ ಇದೂ ಒಂದಾಗಿದೆ.
ಶನಿವಾರ ಟಿವಿಕೆ ಸೇರಿದ ನಾಲ್ವರು ನಾಯಕರು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸೋಲನುಭವಿಸಿದವರು. ಉಡುಮಲೈ ರಾಧಾಕೃಷ್ಣನ್ ಉಡುಮಲಪೇಟ ಕ್ಷೇತ್ರದಲ್ಲಿ, ಎಂ.ಸಿ. ಸಂಪತ್ ಕಡಲೂರಿನಲ್ಲಿ ಹಾಗೂ ಕಂಡಬೂರ್ ರಾಜು ಕೋವಿಲ್ಪಟ್ಟಿ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು.




