ಜೈಪುರ-ಮುಂಬೈ ಎಕ್ಸ್ ಪ್ರೆಸ್ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ಆರ್ ಪಿಎಫ್ ಕಾನ್ ಸ್ಟೆಬಲ್ ಚೇತನ್ ಸಿಂಗ್ ಪೊಲೀಸ್ ಕಸ್ಟಡಿಗೆ

ಮುಂಬೈ: ರೈಲಿನಲ್ಲಿ ಹಿರಿಯ ಅಧಿಕಾರಿ ಹಾಗೂ ಮೂವರು ಪ್ರಯಾಣಿಕರನ್ನು ಹತ್ಯೆಗೈದ ಪ್ರಕರಣದ ಆರೋಪಿ ಆರ್ಪಿಎಫ್ ಕಾನ್ಸ್ಟೇಬಲ್ ಚೇತನ್ ಸಿಂಗ್ನನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮಂಗಳವಾರ ಆಗಸ್ಟ್ 7ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಚೇತನ್ ಸಿಂಗ್ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಜುಲೈ 31ರಂದು ಬೆಳಗ್ಗೆ 5 ಗಂಟೆಗೆ ತನ್ನ ಆಟೊಮ್ಯಾಟಿಕ್ ಗನ್ನಿಂದ ಆರ್ಪಿಎಫ್ನ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಟಿಕಾ ರಾಮ್ ಮೀನಾ (58), ಮೂವರು ಪ್ರಯಾಣಿಕರಾದ ಅಬ್ದುಲ್ ಖಾದಿರ್ ಭಾಯ್ ಮುಹಮ್ಮದ್ ಹುಸೈನ್ ಭಾನುಪುರ್ವಾಲ (62), ಅಖ್ತರ್ ಅಬ್ಬಾಸ್ ಅಲಿ (48) ಹಾಗೂ ಸದಾರ್ ಮುಹಮ್ಮದ್ ಹುಸೈನ್ (48) ಅವರನ್ನು ಹತ್ಯೆಗೈದಿದ್ದರು.
ಚೇತನ್ ಸಿಂಗ್ನನ್ನು ಬೋರಿವಲಿ ಪೊಲೀಸರು ಮಂಗಳವಾರ ಅಪರಾಹ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಚೇತನ್ ಸಿಂಗ್ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಅಮಿತ್ ಮಿಶ್ರಾ, ಅವರು ಅನಾರೋಗ್ಯ ಪೀಡಿತರಾಗಿದ್ದಾರೆ ಹಾಗೂ ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಹೇಳಿದರು. ಪ್ರಾಸಿಕ್ಯೂಷನ್ ಆರೋಪಿಯನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿತು. ಈ ಹಿನ್ನೆಲೆಯಲ್ಲಿ ಮಾಜಿಸ್ಟ್ರೇಟ್ ಅವರು ಚೇತನ್ ಸಿಂಗ್ನನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದರು.
ಪ್ರಯಾಣಿಕರು ಚೈನ್ ಎಳೆದ ಬಳಿಕ ರೈಲು ಮಿರಾ ರಸ್ತೆ ಹಾಗೂ ದಹಿಸರ್ ನಿಲ್ದಾಣಗಳ ನಡುವೆ ನಿಂತಾಗ ಪರಾರಿಯಾಗಲು ಯತ್ನಿಸಿದ ಚೇತನ್ ಸಿಂಗ್ನನ್ನು ಸರಕಾರದ ರೈಲ್ವೆ ಪೊಲೀಸ್ ಸಿಬ್ಬಂದಿ ಬಂಧಿಸಿದ್ದರು. ಅಲ್ಲದೆ, ಅವರ ಕೈಯಲ್ಲಿದ್ದ ಗನ್ ಅನ್ನು ವಶಪಡಿಸಿಕೊಂಡಿದ್ದರು.
ಉತ್ತರಪ್ರದೇಶದ ಹಾಥರಸ್ ಮೂಲದ ಚೇತನ್ ಸಿಂಗ್ ನನ್ನು ಕಳೆದ ಮಾರ್ಚ್ನಲ್ಲಿ ಭಾವನಗರ ವಿಭಾಗದಿಂದ ಮುಂಬೈಗೆ ವರ್ಗಾವಣೆ ಮಾಡಲಾಗಿತ್ತು. ಅವರು ಇತ್ತೀಚೆಗೆ ಹಾಥರಸ್ಗೆ ಭೇಟಿ ನೀಡಿದ್ದರು ಹಾಗೂ ಜುಲೈ 17ರಂದು ಊರಿಗೆ ಹಿಂದಿರುಗಿದ್ದ. ಆತನನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷೆನ್ 302, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಭಾರತೀಯ ರೈಲ್ವೆ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿತ್ತು.
ಘಟನೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ ಚೇತನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಪ್ರಶಂಸಿಸುತ್ತಿರುವುದು ಕೇಳಿ ಬಂದಿದೆ.
“ಅವರು (ಮುಸ್ಲಿಮರು) ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿದ್ದಾರೆ. ಇದನ್ನೇ ಮಾಧ್ಯಮಗಳು ತೋರಿಸುತ್ತಿರುವುದು’’ ಎಂದು ಸಿಂಗ್ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿ ಬಂದಿದೆ. ‘‘ನೀವು ಭಾರತದಲ್ಲಿ ಬದುಕಲು ಬಯಸುವುದಾದರೆ ಮೋದಿ, ಯೋಗಿ ಹಾಗೂ ನಿಮ್ಮ ಠಾಕ್ರೆಗೆ ಮತ ಚಲಾಯಿಸಿ’’ ಎಂದು ಹೇಳಿರುವುದು ಕೂಡ ವೀಡಿಯೊದಲ್ಲಿ ದಾಖಲಾಗಿದೆ.
ಘಟನೆಯ ಕುರಿತು ಸಮಗ್ರ ತನಿಖೆಗೆ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರೈಲ್ವೆ ಮಂಡಳಿ ರೂಪಿಸಿದೆ. ಈ ಉನ್ನತ ಮಟ್ಟದ ಸಮಿತಿ ಮಂಗಳವಾರ ಮುಂಬೈಗೆ ತಲುಪಿದೆ ಹಾಗೂ ತನಿಖೆ ಆರಂಭಿಸಿದೆ.







