Gujarat | ಬಾತ್ರೂಮ್ನಲ್ಲಿ ನೀರು ಸುರಿದ ವಿಚಾರಕ್ಕೆ ವಾಗ್ವಾದ : ತಂದೆಯನ್ನು ಕೊಂದ ಮಗ

ಜೀತು ಲಾಮೋಡೆ, ಸುಖ್ಲಾಲ್ ಓಂಕಾರ್ ಲಾಮೋಡೆ | Photo credit : indiatoday
ಗಾಂಧಿನಗರ : ಬಾತ್ರೂಮ್ನಲ್ಲಿ ನೀರು ಸುರಿದ ವಿಷಯಕ್ಕೆ ಸಂಬಂಧಿಸಿದ ಮಾತುಕತೆ ವಿಕೋಪಕ್ಕೆ ತಿರುಗಿ, ಮಗನೇ ತನ್ನ ತಂದೆಯನ್ನು ಕಬ್ಬಿಣದ ರಾಡ್ನಿಂದ ಹೊಡೆದು ಕೊಂದ ಘಟನೆ ಗುಜರಾತ್ ನ ಸೂರತ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಸುಖ್ಲಾಲ್ ಓಂಕಾರ್ ಲಾಮೋಡೆ ಎಂದು ಗುರುತಿಸಲಾಗಿದೆ. ಆರೋಪಿ ಜೀತು ಲಾಮೋಡೆಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಜು.12 ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಬಾತ್ರೂಮ್ನಲ್ಲಿ ನೀರು ವ್ಯರ್ಥವಾಗಿ ಸುರಿಯುತ್ತಿದ್ದ ವಿಚಾರವಾಗಿ ಸುಖ್ಲಾಲ್ ಮತ್ತು ಅವರ ಮಗನ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಜೀತು, ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಅಡುಗೆ ಮನೆಯಲ್ಲಿ ಇಟ್ಟಿದ್ದ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಬ್ಬಿಣದ ರಾಡ್ ಅನ್ನು ಎತ್ತಿಕೊಂಡು ತಂದೆಯ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದಾಗಿ ಸುಖ್ಲಾಲ್ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಕೃತ್ಯ ಎಸಗಿದ ತಕ್ಷಣ ಆರೋಪಿ ಜೀತು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಮೃತರ ಪತ್ನಿ ಆಶಾಬೆನ್ ಅವರು, ತನ್ನ ಪತಿಯನ್ನು ಮಗನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅದೇ ದಿನದಂದು ಆರೋಪಿ ಜೀತು ಲಾಮೋಡೆಯನ್ನು ಬಂಧಿಸಿದ್ದಾರೆ.




