ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ರೈತರ ಜೀವನೋಪಾಯವನ್ನು ನಾಶಗೊಳಿಸಲಿದೆ: ಕಾಂಗ್ರೆಸ್

ರಣದೀಪ್ ಸುರ್ಜೆವಾಲಾ | Photo Credit : PTI
ಹೊಸದಿಲ್ಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ‘‘ಮಂಡಿಯೂರಿದ್ದಾರೆ’’ ಎಂದು ಕಾಂಗ್ರೆಸ್ ಪಕ್ಷ ಸೋಮವಾರ ಆರೋಪಿಸಿದೆ. ಈ ಒಪ್ಪಂದವು ದೇಶದ ಕೋಟ್ಯಂತರ ರೈತರ ಜೀವನೋಪಾಯವನ್ನು ಧ್ವಂಸಗೊಳಿಸಲಿದೆ ಎಂದು ಅದು ಹೇಳಿದೆ.
ವ್ಯಾಪಾರ ಒಪ್ಪಂದಗಳು ದೇಶವೊಂದರ ಸಾರ್ವಭೌಮತೆಯನ್ನು ತ್ಯಾಗ ಮಾಡಿ ಗುಲಾಮಗಿರಿಯತ್ತ ತೆರಳುವ ದಾರಿಯಾಗಬಾರದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಹೇಳಿದರು. ‘‘ವ್ಯಾಪಾರ ಒಪ್ಪಂದಗಳು ಆರ್ಥಿಕ ಪ್ರಗತಿಗೆ ದಾರಿಯಾಗಬೇಕು. ವ್ಯಾಪಾರ ಒಪ್ಪಂದಗಳ ಮುಖ್ಯ ಉದ್ದೇಶವೇ ಪರಸ್ಪರರ ಸಾರ್ವಜನಿಕ ಹಿತಾಸಕ್ತಿಗಳನ್ನು ಸಮಾನವಾಗಿ ಕಾಯ್ದುಕೊಳ್ಳುವುದು. ಅವುಗಳು ದೇಶವೊಂದರ ಸಾರ್ವಭೌಮತೆಯನ್ನು ತ್ಯಾಗ ಮಾಡಿ ಗುಲಾಮಗಿರಿಯತ್ತ ಹೋಗುವ ದಾರಿಯಾಗಬಾರದು. ವ್ಯಾಪಾರ ಒಪ್ಪಂದಗಳ ಸೋಗಿನಲ್ಲಿ ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡುವಂತಿಲ್ಲ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುರ್ಜೆವಾಲಾ ಹೇಳಿದರು.
ಸುರ್ಜೆವಾಲಾರ ಹೇಳಿಕೆಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ಈ ವ್ಯಾಪಾರ ಒಪ್ಪಂದವು ಭಾರತದ ಕೋಟ್ಯಂತರ ರೈತರ ಜೀವನೋಪಾಯವನ್ನು ಹೇಗೆ ಧ್ವಂಸಗೊಳಿಸುತ್ತದೆ ಎನ್ನುವುದನ್ನು ಸುರ್ಜೆವಾಲಾ ವಿವರಿಸಿದ್ದಾರೆ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘‘ನಮ್ಮ ಪ್ರಧಾನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಎದುರು ಸಂಪೂರ್ಣವಾಗಿ ಶರಣಾಗಿದ್ದಾರೆ. ಇದಕ್ಕೂ ಮೊದಲು ಅವರು 2025 ಮೇ 10ರಂದು ಅವರು ಅಮೆರಿಕಕ್ಕೆ ಶರಣಾಗಿದ್ದರು. ಅಂದು ಅವರು ಆಪರೇಶನ್ ಸಿಂಧೂರವನ್ನು ಅನಿರೀಕ್ಷಿತವಾಗಿ ದಿಢೀರನೆ ನಿಲ್ಲಿಸಿದ್ದರು’’ ಎಂದು ರಮೇಶ್ ಆರೋಪಿಸಿದ್ದಾರೆ.







