ಸುಪ್ರೀಂನಿಂದ ರಿಲಾಯನ್ಸ್ ವನತಾರ ಪ್ರಕರಣ ಇತ್ಯರ್ಥ | ಎಲ್ಲಾ ಪ್ರಕರಣಗಳು ಇಷ್ಟು ಬೇಗ ಇತ್ಯರ್ಥವಾಗುವುದೇ...: ಜೈರಾಮ್ ರಮೇಶ್

ಜೈರಾಮ್ ರಮೇಶ್ | PTI
ಹೊಸದಿಲ್ಲಿ, ಸೆ. 17: ಅಂಬಾನಿ ಕುಟುಂಬದ ಒಡೆತನದ ಪ್ರಾಣಿ ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ವನತಾರ ವಿರುದ್ಧದ ಪ್ರಕರಣದಲ್ಲಿ ಎಸ್ಐಟಿ ಕ್ಲೀನ್ ಚಿಟ್ ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಇದಾದ ಒಂದು ದಿನದ ಬಳಿಕ ಮಂಗಳವಾರ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಎಲ್ಲಾ ಪ್ರಕರಣಗಳನ್ನು ಇಷ್ಟೇ ಶೀಘ್ರವಾಗಿ ಹಾಗೂ ಸ್ಪಷ್ಟವಾಗಿ ಇತ್ಯರ್ಥಪಡಿಸಲಾಗುವುದೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಪರಿಸರ ಖಾತೆ ಸಚಿವರೂ ಆಗಿರುವ ಜೈರಾಮ್ ರಮೇಶ್, ಭಾರತದ ನ್ಯಾಯಾಂಗ ವ್ಯವಸ್ಥೆ ಅತ್ಯಂತ ವಿಳಂಬ ಎಂದು ಹೇಳಲಾಗುತ್ತಿದೆ. ಆದರೆ, ಈ ಒಂದು ಪ್ರಕರಣವನ್ನು ಅತ್ಯಧಿಕ ತ್ವರಿತವಾಗಿ ಇತ್ಯರ್ಥಪಡಿಸಿದೆ ಎಂದಿದ್ದಾರೆ.
ರಿಲಾಯನ್ಸ್ ಪ್ರತಿಷ್ಠಾನ ಜಾಮ್ ನಗರದಲ್ಲಿ ಸ್ಥಾಪಿಸಿದ ವನ್ಯಜೀವಿ ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ವನತಾರದ ವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ 2025 ಆಗಸ್ಟ್ 25ರಂದು ಆದೇಶಿಸಿತ್ತು ಎಂದಿದ್ದಾರೆ. ನಾಲ್ವರು ಸದಸ್ಯರನ್ನು ಒಳಗೊಂಡ ಎಸ್ಐಟಿಗೆ ತನ್ನ ವರದಿಯನ್ನು 2025 ಸೆಪ್ಟಂಬರ್ 12ರಂದು ಸಲ್ಲಿಸಲು ಅದು ನಿರ್ದೇಶಿಸಿತ್ತು ಎಂದು ಅವರು ಹೇಳಿದ್ದಾರೆ.
ಎಸ್ಐಟಿ ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ 2025 ಸೆಪ್ಟಂಬರ್ 15ರಂದು ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಎಸ್ಐಟಿಯ ಶಿಫಾರಸನ್ನು ಅಂಗೀಕರಿಸಿತು. ಅಲ್ಲದೆ, 2025 ಆಗಸ್ಟ್ 7ರಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ಮುಕ್ತಾಯಗೊಳಿಸಿತು ಎಂದು ಅವರು ಗಮನ ಸೆಳೆದಿದ್ದಾರೆ.
‘‘ಖಂಡಿತ, ಈ ನಿಗೂಢ ಮುಚ್ಚಿದ ಲಕೋಟೆಯ ವ್ಯವಹಾರವಿಲ್ಲದೆ, ಎಲ್ಲಾ ಪ್ರಕರಣಗಳನ್ನು ಇಷ್ಟೇ ಶೀಘ್ರವಾಗಿ ಹಾಗೂ ಇಷ್ಟೇ ಸ್ಪಷ್ಟವಾಗಿ ಇತ್ಯರ್ಥವಾದರೆ, ಇನ್ನೇನು ಬೇಕು’’ ಎಂದು ಜೈ ರಾಮ್ ರಮೇಶ್ ಹೇಳಿದ್ದಾರೆ.







