ಭಾರತ-ಪಾಕ್ ಮಧ್ಯೆ ಕದನ ವಿರಾಮ | ನಿಟ್ಟುಸಿರು ಬಿಟ್ಟ ಕುಪ್ವಾರಾ, ಬಾರಾಮುಲ್ಲಾ ಸೇರಿದಂತೆ ಗಡಿ ಜಿಲ್ಲೆಗಳ ಜನ

Credit: Reuters Photo
ಶ್ರೀನಗರ: ಭಾರತ- ಪಾಕಿಸ್ತಾನ ಕದನ ವಿರಾಮ ಕೊನೆಗೂ ಘೋಷಿಸಿದೆ. ಇದರಿಂದ ಕುಪ್ವಾರಾ, ಬಾರಾಮುಲ್ಲಾ, ಪೂಂಚ್ ಮತ್ತು ರಾಜೌರಿ ಗಡಿ ಜಿಲ್ಲೆಗಳಲ್ಲಿ ಭೀತಿಯಿಂದ ಬದುಕುತ್ತಿದ್ದ ಜನರು ನಿಟ್ಟುಸಿರು ಬಿಡುವಂತಾಯಿತು.
ʼಅಮೆರಿಕದ ಮಧ್ಯಸ್ಥಿಕೆಯಲ್ಲಿ ಸುದೀರ್ಘ ಮಾತುಕತೆಯ ನಂತರ ಭಾರತ- ಪಾಕ್ ತಕ್ಷಣದ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆʼ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲು ಘೋಷಿಸಿದ್ದರು.
ಇದರ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ಬೆಳವಣಿಗೆಯನ್ನು ದೃಢಪಡಿಸಿದರು. ಭಾರತ ಮತ್ತು ಪಾಕಿಸ್ತಾನ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿವೆ ಎಂದು ಹೇಳಿದರು.
ʼಭಾರತ ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ದೃಢ ಮತ್ತು ರಾಜಿಯಿಲ್ಲದ ನಿಲುವನ್ನು ನಿರಂತರವಾಗಿ ಕಾಯ್ದುಕೊಂಡಿದೆ. ಅದು ಹಾಗೆಯೇ ಮುಂದುವರಿಯುತ್ತದೆʼ ಎಂದು ಜೈಶಂಕರ್ ಹೇಳಿದರು.
ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನತೆಯ ಸನ್ನಿವೇಶವನ್ನು ಅಲ್ಲಿನ ಜನರು ಭಯದಿಂದ ನೆನಪಿಸಿಕೊಂಡರು. ʼನಾವು ನರಕವನ್ನು ಕಂಡೆವು. ಮೂರು ದಿನ ರಾತ್ರಿ ನಿದ್ರೆ ಮಾಡಲಿಲ್ಲ, ಮಕ್ಕಳು ನಡುಗುತ್ತಿದ್ದರು, ನಮ್ಮ ಮನೆಗಳು ಶೆಲ್ ದಾಳಿ ಭೀತಿಯಲ್ಲಿತ್ತು. ಸೂರ್ಯೋದಯವನ್ನು ನಾವು ನೋಡುತ್ತೇವೆಯೇ ಎಂದು ನಮಗೆ ತಿಳಿದಿರಲಿಲ್ಲ. ಈಗ ಈ ಶಾಂತಿ ಶಾಶ್ವತವಾಗಿ ಉಳಿಯಲಿ ಎಂದು ನಾವು ಪ್ರಾರ್ಥಿಸುತ್ತೇವೆʼ ಎಂದು ಕುಪ್ವಾರಾದ ತಂಗ್ಧರ್ ನಿವಾಸಿ ಇರ್ಷಾದ್ ಅಹ್ಮದ್ ಹೇಳಿದರು.
ʼನನ್ನ ಮಕ್ಕಳು ಹಲವು ದಿನಗಳಿಂದ ನಗುತ್ತಿರಲಿಲ್ಲ, ಪ್ರತಿ ರಾತ್ರಿ ಇದು ನಮ್ಮ ಕೊನೆಯ ರಾತ್ರಿಯಾಗುತ್ತಾ ಎಂದು ಹೆದರಿ ಅವರು ಅಳುತ್ತಿದ್ದರುʼ ಎಂದು ಶಾಝಿಯಾ ಬೇಗಂ ಹೇಳಿದರು.
ಈ ಹಿಂದೆ ಹಲವು ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದೆ. ನಾವು ಈ ಹಿಂದೆ ಭರವಸೆಗಳನ್ನು ಕೇಳಿದ್ದೇವೆ. ಆದರೆ, ಇದೇನೋ ವಿಭಿನ್ನವೆನಿಸುತ್ತದೆ. ಬಹುಶಃ ಅದು ಪ್ರಾರ್ಥನೆಗಳಾಗಿರಬಹುದು. ನಮ್ಮ ಮಕ್ಕಳು ಭಯವಿಲ್ಲದೆ ಬದುಕಬೇಕೆಂದು ನಾವು ಬಯಸುತ್ತೇವೆ ಎಂದು ಶಾಝಿಯಾ ಬೇಗಂ ಹೇಳಿದರು.
ʼಉರಿ ಮತ್ತು ಪೂಂಚ್ ನಿಯಂತ್ರಣ ರೇಖೆಯ ಬಳಿಯ ಹಳ್ಳಿಗಳಿಂದ ಜನರು ಪಲಾಯನಗೈಯ್ಯುತ್ತಿದ್ದಂತೆ ಪಟ್ಟಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ನಾವು ಮನೆಗಳನ್ನು ದುರಸ್ತಿ ಮಾಡಬಹುದು. ಆದರೆ, ಮೃತರನ್ನು ವಾಪಾಸ್ಸು ಕರೆತರಲು ಸಾಧ್ಯವಿಲ್ಲ. ರಾಷ್ಟ್ರಗಳ ನಡುವಿನ ಉದ್ವಿಗ್ನತೆಯಿಂದ ನಾವು ದಣಿದಿದ್ದೇವೆ. ನಮಗೆ ಶಾಂತಿ ಬೇಕುʼ ಎಂದು ಉರಿಯ ಅಬ್ದುಲ್ ರಶೀದ್ ಹೇಳಿದರು.
ದಶಕಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಉಂಟಾಗಿದೆ. ಫಿರಂಗಿ, ಡ್ರೋನ್ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆದಿದೆ. ಸಾವು ನೋವುಗಳು ಸಂಭವಿಸಿದೆ.
ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಕಣಿವೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ, ಮುಸ್ಸಂಜೆ ಆವರಿಸಿದಾಗ ಮಸೀದಿಗಳಿಂದ ಸಂಜೆಯ ಅಝಾನ್ ಪ್ರತಿಧ್ವನಿಸಿತು. ಜನರು ಪ್ರಾರ್ಥನೆಗಾಗಿ ಒಟ್ಟುಗೂಡಿದರು.