Jharkhand | JPSC ಪ್ರತಿಭಟನೆ: 9 ದಿನಗಳ ಉಪವಾಸದ ಬಳಿಕ ದೇವೇಂದ್ರ ನಾಥ್ ಮಹ್ತೊ ಆಸ್ಪತ್ರೆಗೆ ದಾಖಲು

ದೇವೇಂದ್ರ ನಾಥ್ ಮಹ್ತೊ | Photo Credit : PTI
ರಾಂಚಿ, ಆ.10: ಜಾರ್ಖಂಡ್ ನ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾ (JLKM) ನಾಯಕ ದೇವೇಂದ್ರ ನಾಥ್ ಮಹ್ತೊ ಅವರು 9 ದಿನಗಳ ಉಪವಾಸ ಸತ್ಯಾಗ್ರಹದ ಬಳಿಕ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಧಾನಸಭೆಗೆ ಮುತ್ತಿಗೆ ಹಾಕಲು ವಿದ್ಯಾರ್ಥಿಗಳು ನಡೆಸಿದ ಮೆರವಣಿಗೆಯಲ್ಲಿ ಮಹ್ತೊ ಪಾಲ್ಗೊಂಡಿದ್ದರು. ಈ ವೇಳೆ ಅವರ ಆರೋಗ್ಯ ಹದಗೆಟ್ಟಿತು. ರಕ್ತದಲ್ಲಿನ ಸಕ್ಕರೆ ಮಟ್ಟ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ಅವರನ್ನು ರಾಂಚಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ನ್ಯಾನ್ಸಿ ಪ್ರಿಯಾ PTIಗೆ ತಿಳಿಸಿದ್ದಾರೆ.
ವಿಧಾನಸಭೆ ಬಳಿ ನಡೆದ ಪೊಲೀಸ್ ಲಾಠಿ ಚಾರ್ಜ್ ನಲ್ಲಿ ಮಹ್ತೊ ಗಾಯಗೊಂಡಿದ್ದಾರೆ ಎಂದು ಅವರ ಸಹಾಯಕ ಪಂಕಜ್ ಕುಮಾರ್ ಹೇಳಿದ್ದಾರೆ.
ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಉದ್ಯೋಗಾಕಾಂಕ್ಷಿಗಳು ಸೋಮವಾರ ವಿಧಾನಸಭೆ ಮುತ್ತಿಗೆ ಹಾಕಲು ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿ ಚಾರ್ಜ್ ಬಳಸಿದರು. ಈ ವೇಳೆ ಹಲವಾರು ಪ್ರತಿಭಟನಾಕಾರರು ಹಾಗೂ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಸಭೆ ಬಳಿ ಘರ್ಷಣೆ
ಬೆಳಿಗ್ಗೆ 10.30ರ ಸುಮಾರಿಗೆ ಹಳೆಯ ವಿಧಾನಸಭೆ ಕಟ್ಟಡದ ಹೊರಗಿನಿಂದ ಮೆರವಣಿಗೆ ಆರಂಭವಾಯಿತು. ವಿಧಾನಸಭೆಯತ್ತ ಸಾಗುತ್ತಿದ್ದ ಪ್ರತಿಭಟನಾಕಾರರು ಹಲವು ಬ್ಯಾರಿಕೇಡ್ಗಳನ್ನು ದಾಟಿ ಸಾಗಿದರು.
ಪ್ರತಿಭಟನಾಕಾರರು ಜಗನ್ನಾಥಪುರ ದೇವಸ್ಥಾನದ ಬಳಿ ತಲುಪಿದಾಗ ಪೊಲೀಸರು ಜಲಫಿರಂಗಿ ಬಳಸಿದರು. ಅಂತಿಮ ಬ್ಯಾರಿಕೇಡ್ ದಾಟಲು ಪ್ರತಿಭಟನಾಕಾರರು ಪ್ರಯತ್ನಿಸಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಪ್ರತಿಭಟನಾಕಾರರು ವಿಧಾನಸಭೆಯಿಂದ ಸುಮಾರು 200 ಮೀಟರ್ ದೂರಕ್ಕೆ ಬಂದಾಗ ಪೊಲೀಸರು ಹಲವು ಸುತ್ತು ಅಶ್ರುವಾಯು ಶೆಲ್ ಗಳನ್ನು ಸಿಡಿಸಿದರು.
ನಂತರ ಪ್ರತಿಭಟನಾಕಾರರು ಅಂತಿಮ ಬ್ಯಾರಿಕೇಡ್ ಗಳನ್ನು ದಾಟಿ ವಿಧಾನಸಭೆಯ ಗೇಟ್ ಸಂಖ್ಯೆ 1ರ ಬಳಿ ತಲುಪಿದರು. ಅಲ್ಲಿ ಧರಣಿ ನಡೆಸಿ, ತಮ್ಮ ಬೇಡಿಕೆಗಳು ಈಡೇರುವವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು. ಪೊಲೀಸರು ಮತ್ತೆ ಲಾಠಿ ಚಾರ್ಜ್ ನಡೆಸಿದರು.
ಪ್ರತಿಭಟನಾಕಾರರು, ಪೊಲೀಸರಿಗೆ ಗಾಯ
ಮಹಿಳಾ ಪ್ರತಿಭಟನಾಕಾರರು ಸೇರಿದಂತೆ ಹಲವು ಮಂದಿ ಪೊಲೀಸ್ ಕ್ರಮದಲ್ಲಿ ಗಾಯಗೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘ಲಾಠಿ ಚಾರ್ಜ್ ನಡೆಸಿದ್ದು ಅನಾಗರಿಕವಾಗಿತ್ತು. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ ಸರಕಾರ ನಮ್ಮ ವಿರುದ್ಧ ಲಾಠಿ ಚಾರ್ಜ್ ಮಾಡಿತು. ಅವರು ನಮ್ಮ ದೇಹಕ್ಕೆ ಗಾಯ ಮಾಡಬಹುದು; ನಮ್ಮ ಆಲೋಚನೆಗಳಿಗೆ ಹಾನಿ ಮಾಡಲು ಸಾಧ್ಯವಿಲ್ಲ’ ಎಂದು ಪ್ರತಿಭಟನಾಕಾರ ಪಿಯೂಷ್ ಕುಮಾರ್ ಸೋನಿ ಹೇಳಿದರು.
ಹಲವು ವಿದ್ಯಾರ್ಥಿನಿಯರು ಗಾಯಗೊಂಡಿದ್ದು, ಪೊಲೀಸರು ಅವರ ತಲೆ, ತೋಳು ಹಾಗೂ ಮುಖದ ಮೇಲೆ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದರು.
ಹಜಾರಿಬಾಗ್ ಜಿಲ್ಲೆಯಿಂದ ಬಂದಿರುವ ವಿಕ್ರಮ್ ಕುಮಾರ್ ಕೂಡ ತಲೆಗೆ ಗಾಯವಾಗಿದೆ ಎಂದು ಹೇಳಿದರು.
ಆದರೂ, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ವೇಳೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ರಾಂಚಿ ನಗರ ಎಸ್ಪಿ ಪರಾಸ್ ರಾಣಾ ಹೇಳಿದರು. ಗಾಯಗೊಂಡವರಲ್ಲಿ ಮೂವರ ತಲೆಗೆ ಗಾಯಗಳಾಗಿವೆ. ಹೆಚ್ಚಿನ ಪ್ರತಿಭಟನಾಕಾರರು ಶಾಂತಿಯುತವಾಗಿದ್ದರು. ಆದರೆ, ಸುಮಾರು ಶೇ 15ರಷ್ಟು ಮಂದಿ ಅಶಿಸ್ತಿನಿಂದ ವರ್ತಿಸಿದರು ಎಂದು ಅವರು ಹೇಳಿದರು.
‘ಹೋರಾಟ ಮುಂದುವರಿಸುತ್ತೇನೆ’
ಆಸ್ಪತ್ರೆಗೆ ದಾಖಲಾಗುವ ಮುನ್ನ ಮಾತನಾಡಿದ ಮಹ್ತೊ, ವಿದ್ಯಾರ್ಥಿಗಳ ಚಳವಳಿಯನ್ನು ಹತ್ತಿಕ್ಕಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
‘ಲಾಠಿ, ಗುಂಡು ಮತ್ತು ಬಂದೂಕುಗಳಿಂದ ಸರಕಾರ ನಡೆಸಲು ಸಾಧ್ಯವಿಲ್ಲ. ಜನರನ್ನು ತೃಪ್ತಿಪಡಿಸುವ ಮೂಲಕ ಸರಕಾರ ನಡೆಸಬೇಕು. ಇಂದು ಸತ್ಯಾಗ್ರಹದ 17ನೇ ದಿನ. ನಾನು ಒಂಭತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ. ಅವರು ನನ್ನ ಮೇಲೂ ಹಲ್ಲೆ ನಡೆಸಿ, ಬಲವಂತವಾಗಿ ಆಂಬ್ಯುಲೆನ್ಸ್ಗೆ ಕರೆದೊಯ್ದರು. ಆದರೂ, ನಾನು ಈ ಹೋರಾಟ ಮುಂದುವರಿಸುತ್ತೇನೆ’ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಲ್ಲಿ ಅನ್ಯಾಯದ ಆರೋಪದ ಕುರಿತು ಆಕ್ರೋಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಮೆರವಣಿಗೆ ಮಾರ್ಗದಲ್ಲಿ ಮುಳ್ಳುತಂತಿ ಬ್ಯಾರಿಕೇಡ್ ಗಳನ್ನು ಅಳವಡಿಸಿರುವುದಕ್ಕೂ ಮಹ್ತೊ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ‘ನಾವು ಈಗ ಯಾವುದೇ ಮಾತುಕತೆ ನಡೆಸುವುದಿಲ್ಲ’ ಎಂದು ಹೇಳಿದ್ದ ಅವರು, ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.
ಉಪವಾಸ ಸತ್ಯಾಗ್ರಹ ಆರಂಭವಾದ ಒಂದು ದಿನದ ಬಳಿಕ ಆಂದೋಲನಕ್ಕೆ ಸೇರಿದ JLKM ಶಾಸಕ ಜೈರಾಮ್ ಮಹ್ತೊ ಕೂಡ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದರು.
‘ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ತಡೆಯಲು ಪೊಲೀಸರು ಏಕೆ ಪ್ರಯತ್ನಿಸುತ್ತಿದ್ದಾರೆ? ಅವರ ಕೈಯಲ್ಲಿ ಲಾಠಿಗಳೇನೂ ಇರಲಿಲ್ಲ’ ಎಂದು ಅವರು ಪ್ರಶ್ನಿಸಿದ್ದರು.
ಪರೀಕ್ಷೆ ರದ್ದು, ಸ್ವತಂತ್ರ ತನಿಖೆಗೆ ಆಗ್ರಹ
ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (JSSC) ಕಾರ್ಯನಿರ್ವಹಣೆಯಲ್ಲಿ ಸಮಗ್ರ ಸುಧಾರಣೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಅಕ್ರಮದ ಆರೋಪವಿರುವ ಹಲವು ನೇಮಕಾತಿ ಪರೀಕ್ಷೆಗಳನ್ನು ರದ್ದುಪಡಿಸಬೇಕು. ಅಕ್ರಮಗಳ ಕುರಿತು CBI ಅಥವಾ ರಾಜ್ಯದ ಹೊರಗಿನ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸಬೇಕು ಎಂಬುದು ಅವರ ಬೇಡಿಕೆಯಾಗಿದೆ.
ಸರಕಾರ ರದ್ದುಪಡಿಸಲು ಬಯಸಿರುವ 13 ಪರೀಕ್ಷೆಗಳಲ್ಲಿ ಮೂರನ್ನು ಮಾತ್ರ ರದ್ದುಪಡಿಸಲು ಒಪ್ಪಿಕೊಂಡಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಈ ಕುರಿತು ಸರಕಾರ ಪ್ರತಿಭಟನಾಕಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆದರೆ, ಇದುವರೆಗೆ ಬಿಕ್ಕಟ್ಟು ಬಗೆಹರಿದಿಲ್ಲ.






