ಕೇರಳ | ಭಾರತ ಮಾತೆಯದ್ದು ಧಾರ್ಮಿಕ ಚಿತ್ರ; ಸಂವಿಧಾನದ ಉಲ್ಲಂಘನೆ: ರಾಜ್ಯಪಾಲರ ವಿರುದ್ಧ ಸಚಿವ ಶಿವನ್ ಕುಟ್ಟಿ ವಾಗ್ದಾಳಿ
ರಾಜಭವನದ ಕಾರ್ಯಕ್ರಮಗಳಲ್ಲಿ ಭಾರತ ಮಾತೆಯ ಚಿತ್ರ ಪ್ರದರ್ಶನ ವಿವಾದ

File Photo | Express
ಕೋಯಿಕ್ಕೋಡ್: ರಾಜಭವನದ ಅಧಿಕೃತ ಕಾರ್ಯಕ್ರಮದ ವೇಳೆ ಭಾರತ ಮಾತೆಯ ಚಿತ್ರವನ್ನು ಪ್ರದರ್ಶಿಸಿದ್ದ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ರನ್ನು ಶನಿವಾರ ಕಟುವಾಗಿ ಟೀಕಿಸಿದ ಕೇರಳ ರಾಜ್ಯ ಸಾಮಾನ್ಯ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ, ಈ ನಡೆಯು ಸಾಂವಿಧಾನಿಕ ರೂಢಿಯ ನಿರ್ಲಜ್ಜ ಉಲ್ಲಂಘನೆಯಾಗಿದೆ ಎಂದು ಬಣ್ಣಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿ.ಶಿವನ್ ಕುಟ್ಟಿ, “ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯೊಬ್ಬರು ಅಧಿಕೃತ ಕಾರ್ಯಕ್ರಮಗಳಲ್ಲಿ ಇಂತಹ ಚಿತ್ರಗಳನ್ನು ಪೂಜಿಸುವುದು ಸಂವಿಧಾನದ ಮೂಲಭೂತ ತತ್ವಗಳನ್ನು ಉಲ್ಲಂಘಿಸಿದ್ದಕ್ಕೆ ಸಮವಾಗಿದೆ” ಎಂದು ಕಿಡಿ ಕಾರಿದರು.
ಕೇಸರಿ ಧ್ವಜವನ್ನು ಹಿಡಿದಿರುವ ಮಹಿಳೆಯ ಚಿತ್ರವು ಧಾರ್ಮಿಕ ಚಿತ್ರವಾಗಿದೆ ಎಂದೂ ಅವರು ದೂರಿದರು.
ರಾಜಭವನದ ಕಾರ್ಯಕ್ರಮಗಳ ವೇಳೆ ಭಾರತ ಮಾತೆಯ ಚಿತ್ರವನ್ನು ಪ್ರದರ್ಶಿಸಲಾಗುವುದು ಎಂಬ ರಾಜಭವನದ ನಿರ್ಣಯದ ವಿರುದ್ಧ ಕೇರಳದಾದ್ಯಂತ ವ್ಯಾಪಕ ವಾಕ್ಸಮರ ಹಾಗೂ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಶಿವನ್ ಕುಟ್ಟಿಯವರಿಂದ ಈ ಹೇಳಿಕೆ ಹೊರಬಿದ್ದಿದೆ.





