ಗೋವಾ ನೈಟ್ಕ್ಲಬ್ ಅಗ್ನಿ ದುರಂತ ಪ್ರಕರಣ: ದಿಲ್ಲಿಗೆ ಬಂದಿಳಿದ ಲೂತ್ರಾ ಸಹೋದರರ ಬಂಧನ

Photo credit: indiatoday.in
ಹೊಸದಿಲ್ಲಿ: ಗೋವಾದಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ ನೈಟ್ಕ್ಲಬ್ ಮಾಲಕರಾದ ಸೌರಭ್ ಮತ್ತು ಗೌರವ್ ಲೂತ್ರಾ ಅವರನ್ನು ಥಾಯ್ಲೆಂಡ್ನಿಂದ ಗಡೀಪಾರು ಮಾಡಿದ ಹಿನ್ನೆಲೆ ಅವರು ದಿಲ್ಲಿಗೆ ಬಂದಿಳಿದಿದ್ದಾರೆ. ಅವರನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಗೋವಾ ಪೊಲೀಸರು ಬಂಧಿಸಿದ್ದಾರೆ.
ಗೋವಾ ಪೊಲೀಸರ ತಂಡ ದಿಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ವಿಮಾನ ನಿಲ್ದಾಣದೊಳಗೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿತು. ಲೂತ್ರಾ ಸಹೋದರರನ್ನು ದಿಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ. ಅಲ್ಲಿ ತನಿಖಾಧಿಕಾರಿಗಳು ಅವರನ್ನು ಗೋವಾಕ್ಕೆ ಕರೆದೊಯ್ಯಲು ಟ್ರಾನ್ಸಿಟ್ ರಿಮಾಂಡ್ ಕೋರಲಿದ್ದಾರೆ.
ವಿಚಾರಣೆಗಾಗಿ ಗೋವಾಗೆ ಕರೆತಂದ ನಂತರ ಡಿಸೆಂಬರ್ 17ರಂದು ಅವರನ್ನು ಮಾಪುಸಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.
25 ಮಂದಿಯ ಸಜೀವ ದಹನಕ್ಕೆ ಕಾರಣವಾಗಿದ್ದ ದುರಂತ ಸಂಭವಿಸಿದ ಬೆನ್ನಲ್ಲೇ ಮಾಲಕರಾದ ಲೂತ್ರಾ ಸಹೋದರರು ಥಾಯ್ಲೆಂಡ್ಗೆ ಪಲಾಯನ ಮಾಡಿದ್ದರು. ಅವರ ಭಾರತೀಯ ಪಾಸ್ಪೋರ್ಟ್ಗಳನ್ನು ಅಮಾನತುಗೊಳಿಸಿರುವುದರಿಂದ ಅವರನ್ನು ಗಡೀಪಾರು ಮಾಡಲಾಗಿದೆ.





