ಮಧ್ಯಪ್ರದೇಶ: ಚಾಂಪಿಯನ್ಸ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ವೇಳೆ ಅತಿರೇಕದ ವರ್ತನೆ; ಯುವಕರ ತಲೆ ಬೋಳಿಸಿದ ಪೊಲೀಸರು

ಪೊಲೀಸರು ಯುವಕರ ತಲೆ ಬೋಳಿಸಿರುವುದು PC: x.com/htTweets
ಭೋಪಾಲ್: ಭಾರತ ಕ್ರಿಕೆಟ್ ತಂಡ ರವಿವಾರ ರಾತ್ರಿ ದುಬೈನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಂಭ್ರಮವನ್ನು ಆಚರಿಸಿದ ಯುವಕರ ತಂಡವನ್ನು ಮಧ್ಯಪ್ರದೇಶ ಪೊಲೀಸರು ಶಿಕ್ಷಿಸಿದ ಅಪರೂಪದ ಘಟನೆ ವರದಿಯಾಗಿದೆ.
ಘಟನೆ ಹಿಂಸಾತ್ಮಕ ರೂಪ ಪಡೆದು ಪೊಲೀಸರ ಮೇಲೆ ಯುವಕರು ದಾಳಿ ನಡೆಸಿದ ಆರೋಪದಲ್ಲಿ ಇಬ್ಬರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಎನ್ಎಸ್ಎ ಅಡಿಯಲ್ಲಿ ಆರೋಪಿಗಳನ್ನು 12 ತಿಂಗಳ ವರೆಗೆ ಬಂಧನದಲ್ಲಿಡಲು ಅವಕಾಶವಿದೆ.
ತಡರಾತ್ರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಯುವಕರ ತಲೆ ಬೋಳಿಸಿ ಅವರನ್ನು ಪೊಲೀಸರು ಮೆರವಣಿಗೆ ನಡೆಸಿದರು ಎಂದು ಆಪಾದಿಸಲಾಗಿದೆ. ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಬೆಂಗಾವಲಿನಲ್ಲಿ ಯುವಕರನ್ನು ಕರೆದೊಯ್ಯುತ್ತಿರುವ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ. ಈ ವಿವಾದದ ಬೆನ್ನಲ್ಲೇ ಬಿಜೆಪಿ ಶಾಸಕಿ ಗಾಯತ್ರಿ ರಾಜೇ ಪವಾರ್ ದೇವಾಸ್ ಎಸ್ಪಿ ಪುನೀತ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ.
"ದೇಶದ ಇತರೆಡೆ ಸಂಭ್ರಮಿಸಿದಂತೆ ಈ ಯುವಕರು ಕೂಡಾ ಭಾರತದ ಗೆಲುವನ್ನು ಸಂಭ್ರಮಿಸಿದ್ದರು. ಇವರು ಅಪರಾಧಿಗಳಲ್ಲ; ಅವರನ್ನು ಸಾರ್ವಜನಿಕವಾಗಿ ಮೆರವಣಿಗೆ ನಡೆಸಿರುವುದು ನ್ಯಾಯಸಮ್ಮತವಲ್ಲ. ಅವರ ಕುಟುಂಬದ ಸದಸ್ಯರು ಎಸ್ಪಿ ಕಚೇರಿಗೆ ನನ್ನ ಜತೆಗೆ ಬಂದಿದ್ದು, ಈ ಅಸಮಂಜಸ ಶಿಕ್ಷೆಯನ್ನು ನಾವು ಬಲವಾಗಿ ಖಂಡಿಸಿದ್ದೇವೆ. ಘಟನೆ ಬಗ್ಗೆ ಸಮಗ್ರ ತನಿಖೆಯ ಭರವಸೆಯನ್ನು ಎಸ್ಪಿ ನೀಡಿದ್ದಾರೆ" ಎಂದು ಶಾಸಕಿ ವಿವರಿಸಿದ್ದಾರೆ. ರವಿವಾರ ರಾತ್ರಿಯ ಸಂಭ್ರಮಾಚರಣೆ ಮತ್ತು ಸೋಮವಾರದ ಘಟನಾವಳಿಗಳ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ದುಬೈನಲ್ಲಿ ಭಾರತ ಗೆಲ್ಲುತ್ತಿದ್ದಂತೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಭ್ರಮಾಚರಣೆ ನಡೆದಿದ್ದು, ಸಯ್ಯಾಜಿ ಗೇಟ್ ಬಳಿ ಅಪಾಯಕಾರಿ ರೀತಿಯಲ್ಲಿ ಪಟಾಕಿಗಳನ್ನು ಸಿಡಿಸದಂತೆ ಠಾಣಾಧಿಕಾರಿ ಅಜಯ್ ಸಿಂಗ್ ಗುಜ್ರಾರ್ ನೇತೃತ್ವದ ಪೊಲೀಸರ ತಂಡ ಯುವಕರಿಗೆ ತಾಕೀತು ಮಾಡಿದಾಗ ಸಂಘರ್ಷ ಆರಂಭವಾಯಿತು ಎನ್ನಲಾಗಿದೆ. ಯುವಕರು ಅಧಿಕಾರಿಗಳ ಜತೆ ದುರ್ವರ್ತನೆ ನಡೆಸಿರುವುದು ವಿಡಿಯೊ ತುಣುಕಿನಲ್ಲಿ ಕಾಣಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕೆಲವರು ಪೊಲೀಸ್ ವಾಹನಗಳನ್ನು ಬೆನ್ನಟ್ಟಿಕೊಂಡು ಹೋಗಿ ಕಲ್ಲು ತೂರಾಟ ನಡೆಸುತ್ತಿರುವುದೂ ಕಂಡುಬಂದಿದೆ.







