ದಲಿತ, ಆದಿವಾಸಿಗಳ ಮೇಲಿನ ಅಪರಾಧ ಹೆಚ್ಚಳ : ಬಿಜೆಪಿ, ಆರೆಸ್ಸೆಸ್ಗೆ ಖರ್ಗೆ ತರಾಟೆ

ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ, ಅ. 10: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಬಿಜೆಪಿ ಹಾಗೂ ಅದರ ಸೈದ್ಧಾಂತಿಕ ಪೋಷಕ ಸಂಘಟನೆ ಆರ್ಎಸ್ಎಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದು, ಅವರು ‘‘ಊಳಿಗಮಾನ್ಯ ಮನಸ್ಥಿತಿ’’ಯನ್ನು ಬೆಳಸುತ್ತಿದ್ದಾರೆ ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಜಾತಿ ಆಧಾರಿತ ಹಿಂಸಾಚಾರವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದಿದ್ದಾರೆ.
2013ರಿಂದ 2023ರ ವರೆಗಿನ ಎನ್ಸಿಆರ್ಬಿ ದತ್ತಾಂಶವನ್ನು ಉಲ್ಲೇಖಿಸಿದ ಖರ್ಗೆ, ದಲಿತರ ವಿರುದ್ಧದ ಅಪರಾಧಗಳು ಶೇ. 46ರಷ್ಟು ಹೆಚ್ಚಾಗಿವೆ, ಇದೇ ಅವಧಿಯಲ್ಲಿ ಆದಿವಾಸಿಗಳ ವಿರುದ್ಧ ಅಪರಾಧಗಳು ಶೇ. 91ರಷ್ಟು ಏರಿಕೆಯಾಗಿವೆ ಎಂದಿದ್ದಾರೆ.
‘ಎಕ್ಸ್’ನ ಪೋಸ್ಟ್ನಲ್ಲಿ ಖರ್ಗೆ, ಬಿಜೆಪಿ ಅಂಚಿನಲ್ಲಿರುವ ಸಮುದಾಯಗಳ ವಿರುದ್ಧ ಹಿಂಸೆ ಮತ್ತು ತಾರತಮ್ಯಕ್ಕೆ ಕಾರಣವಾಗುವ ಊಳಿಗಮಾನ್ಯ ಹಾಗೂ ಜಾತಿ ಆಧಾರಿತ ಮನಸ್ಥಿತಿಗೆ ಸಹಾಯ ಮಾಡುತ್ತಿದೆ ಹಾಗೂ ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರಪ್ರದೇಶದ ರಾಯ್ಬರೇಲಿ ಜಿಲ್ಲೆಯಲ್ಲಿ ದಲಿತ ವ್ಯಕ್ತಿ ಹರಿಓಂ ವಾಲ್ಮೀಕಿಯನ್ನು ಥಳಿಸಿ ಹತ್ಯೆಗೈದ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಹಾಗೂ ಇತ್ತೀಚೆಗೆ ಹರ್ಯಾಣದ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೇರಿದಂತೆ ಇತ್ತೀಚೆಗಿನ ಜಾತಿ ಆಧಾರಿತ ಹಿಂಸಾಚಾರವನ್ನು ಹಾಗೂ ದೌರ್ಜನ್ಯದ ಘಟನೆಗಳನ್ನು ಖರ್ಗೆ ಉಲ್ಲೇಖಿಸಿದ್ದಾರೆ.
‘‘ಇವು ಪ್ರತ್ಯೇಕ ಘಟನೆಗಳಲ್ಲ’’ ಎಂದು ಖರ್ಗೆ ಬರೆದಿದ್ದಾರೆ. ‘‘ಇದು ಊಳಿಗಮಾನ್ಯ ಮನಸ್ಥಿತಿಯ ಆರ್ಎಸ್ಎಸ್-ಬಿಜೆಪಿಯ ಅಪಾಯಕಾರಿ ಪ್ರದರ್ಶನವಾಗಿದೆ ಹಾಗೂ ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಸಿದ್ಧಾಂತಗಳ ಮೇಲಿನ ನೇರ ದಾಳಿಯಾಗಿದೆ’’ ಎಂದು ಖರ್ಗೆ ಹೇಳಿದ್ದಾರೆ.
ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಇತರ ಅಂಚಿಗೆ ತಳ್ಳಲ್ಪಟ್ಟ ಗುಂಪುಗಳನ್ನು ದಮನಿಸುವ ಉದ್ದೇಶದಿಂದ ಆಡಳಿತಾರೂಢ ಬಿಜೆಪಿ ಬೆದರಿಕೆಯ ರಾಜಕೀಯದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದ್ದಾರೆ.
‘‘ಭಾರತವು ಸಂವಿಧಾನವನ್ನು ಅನುಸರಿಸುತ್ತದೆ. ಯಾವುದೇ ತೀವ್ರವಾದಿ ಸಿದ್ಧಾಂತಗಳ ಆದೇಶಗಳನ್ನಲ್ಲ’’ ಎಂದು ಖರ್ಗೆ ಹೇಳಿದ್ದಾರೆ.







