ಮಹಾರಾಷ್ಟ್ರ | ದೇವಸ್ಥಾನದ ಆವರಣಕ್ಕೆ ಮಾಂಸ ಎಸೆದ ಪ್ರಕರಣ: ಆರೋಪಿ ನಂದಕಿಶೋರ್ ಬಂಧನ

Screengrab:X/@zoo_bear
ಜಲ್ನಾ: ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅನ್ವಾ ಗ್ರಾಮದಲ್ಲಿರುವ ಹೇಮದ್ಪಂತಿ ಮಹಾದೇವ್ ದೇವಸ್ಥಾನಕ್ಕೆ ಮಾಂಸ ಎಸೆದು ಅಪವಿತ್ರಗೊಳಿಸಿದ ಆರೋಪದಲ್ಲಿ ನಂದಕಿಶೋರ್ ವಡ್ಗಾಂವ್ಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಂದಕಿಶೋರ್ ವಡ್ಗಾಂವ್ಕರ್ ದೇವಸ್ಥಾನದ ಪಕ್ಕದಲ್ಲೇ ಮನೆ ನಿರ್ಮಿಸಲು ಅನುಮತಿ ನಿರಾಕರಿಸಿದ ನಂತರ ದೇವಾಲಯದ ಆವರಣಕ್ಕೆ ಮಾಂಸ ಮತ್ತು ಮೂಳೆಗಳನ್ನು ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.
ದೇವಾಲಯದ ದ್ವಾರದಲ್ಲಿ ಮಾಂಸ ಪತ್ತೆಯಾದ ನಂತರ ಸೆಪ್ಟೆಂಬರ್ 21ರಂದು ದೇವಾಲಯದ ಸಿಬ್ಬಂದಿ ದೂರು ನೀಡಿದ್ದರು. ಹೆಚ್ಚಿನ ತನಿಖೆಯ ವೇಳೆ ದೇವಾಲಯದ ಆವರಣದಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ವಡ್ಗಾಂವ್ಕರ್ ನನ್ನು ಬಂಧಿಸಿದ್ದಾರೆ.
ಸುದರ್ಶನ್ ನ್ಯೂಸ್ ಈ ಘಟನೆಯನ್ನು ಮುಸ್ಲಿಮರನ್ನು ಗುರಿಯಾಗಿಸಲು ಬಳಸಿಕೊಂಡಿತ್ತು. ಮುಸ್ಲಿಮರು ದೇವಾಲಯವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕೋಮು ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸಿತ್ತು. ಆದರೆ, ಪೊಲೀಸರು ಈ ಕೃತ್ಯವು ಕೋಮು ಪಿತೂರಿಯಲ್ಲ, ವೈಯಕ್ತಿಕ ಕಾರಣದಿಂದ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಾಚೀನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ಹೇಮದ್ಪಂತಿ ಮಹಾದೇವ್ ದೇವಾಲಯವು ಮಹಾರಾಷ್ಟ್ರದ ಪ್ರಮುಖ ಆಧ್ಯಾತ್ಮಿಕ ತಾಣವಾಗಿದೆ. ಘಟನೆಯಿಂದ ಸ್ಥಳೀಯ ಜನರಲ್ಲಿ ಅಸಮಾಧಾನ ಉಂಟು ಮಾಡಿದ್ದರೂ, ನಿಜವಾದ ಕಾರಣ ಪೊಲೀಸರು ಬಹಿರಂಗಪಡಿಸಿರುವುದರಿಂದ ತಪ್ಪು ಮಾಹಿತಿ ಮತ್ತು ಕೋಮು ಪ್ರಚಾರವನ್ನು ತಡೆದಂತಾಗಿದೆ.







