ಮೋದಿ ಸರಕಾರ ವಿದ್ಯಾರ್ಥಿಗಳನ್ನು 'ರಾಷ್ಟ್ರದ ಶತ್ರುಗಳು' ಎಂದು ಪರಿಗಣಿಸುತ್ತಿದೆ: ಸೋನಿಯಾ ಗಾಂಧಿ ಆರೋಪ

ಸೋನಿಯಾ ಗಾಂಧಿ (Photo: PTI)
ಹೊಸದಿಲ್ಲಿ, ಜು. 24: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಆಗ್ರಹಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ನರೇಂದ್ರ ಮೋದಿ ಸರಕಾರ ದಮನದ ಮೂಲಕ ಪ್ರತಿಕ್ರಿಯಿಸುತ್ತಿದ್ದು, ವಿದ್ಯಾರ್ಥಿಗಳನ್ನು ದೇಶದ ಭವಿಷ್ಯದ ಉತ್ತರಾಧಿಕಾರಿಗಳಾಗಿ ಅಲ್ಲ, ರಾಷ್ಟ್ರದ ಶತ್ರುಗಳಂತೆ ಪರಿಗಣಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
'The Hindu' ಪತ್ರಿಕೆಯಲ್ಲಿ ಪ್ರಕಟವಾದ 'ಒಂದು ಶಿಕ್ಷಣ ವ್ಯವಸ್ಥೆಯ ಕುಸಿತ, ಯುವ ಭಾರತದ ಆಘಾತ' ಶೀರ್ಷಿಕೆಯ ಲೇಖನದಲ್ಲಿ ಅವರು ಈ ಆರೋಪಗಳನ್ನು ಮಾಡಿದ್ದಾರೆ.
ಜುಲೈ 20, 2026 ಅನ್ನು 'ಅಪಖ್ಯಾತಿಯ ದಿನ' ಎಂದು ಬಣ್ಣಿಸಿರುವ ಅವರು, ಶಾಂತಿಯುತ ಪ್ರತಿಭಟನಾಕಾರರನ್ನು ಚದುರಿಸಲು ದಿಲ್ಲಿ ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಸಿಬ್ಬಂದಿ ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದರು ಎಂದು ಆರೋಪಿಸಿದ್ದಾರೆ. ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದು, ಮನೆಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿಗಳ ಮೇಲೂ ಪೊಲೀಸರು ವಿವೇಚನೆಯಿಲ್ಲದೆ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಹೇಳಿದ್ದಾರೆ.
"ಪೆಲ್ಲೆಟ್ಗಳಿಂದ ಗಾಯಗೊಂಡ ಯುವಕರ ಅತ್ಯಂತ ನೋವಿನ ದೃಶ್ಯಗಳನ್ನು ದೇಶ ಕಂಡಿದೆ. ಇಂತಹ ಪೆಲ್ಲೆಟ್ಗಳ ಬಳಕೆಯನ್ನು ನಿಸ್ಸಂದೇಹವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಅನುಮೋದಿಸಿರಬಹುದು" ಎಂದು ಅವರು ಲೇಖನದಲ್ಲಿ ಬರೆದಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಸರಕಾರ ನಿರ್ವಹಿಸಿದ ರೀತಿ, ಯುವಜನರ ಕಳವಳಗಳೊಂದಿಗೆ ತೊಡಗಿಸಿಕೊಳ್ಳಲು ಸರಕಾರಕ್ಕೆ ಇಷ್ಟವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
"ಆ ದಿನದ ವೀಡಿಯೊಗಳು ನಮ್ಮ ನೆನಪುಗಳಲ್ಲಿ ಅಚ್ಚೊತ್ತಲ್ಪಟ್ಟಿವೆ ಮತ್ತು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಧಕ್ಕೆ ಮಾಡಿದೆ. ಸರಕಾರ ಮತ್ತು ಅದರ ಪರವಾಗಿರುವ ಮಾಧ್ಯಮಗಳು ಮಾತ್ರ ಸ್ವಯಂಪ್ರೇರಿತವಾಗಿ ವಿಸ್ತರಿಸುತ್ತಿರುವ ಈ ಪ್ರತಿಭಟನೆಯ ಅಲೆಯ ಸುತ್ತ ಕಥನಗಳನ್ನು ಹೆಣೆಯುತ್ತಿವೆ. "ನಿಲ್ಲಿಸಿ, ಇವರು ನಮ್ಮ ಪುತ್ರರು ಮತ್ತು ಪುತ್ರಿಯರು, ನಮ್ಮ ಯುವಕರು ಮತ್ತು ಯುವತಿಯರು'" ಎಂದು ಅವರು ಹೇಳಿದ್ದಾರೆ.
ದೇಶದಾದ್ಯಂತ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆಗೆ ಹೊಣೆಗಾರಿಕೆ ನಿಗದಿಪಡಿಸುವುದು ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದರು. ಆದರೆ, ಕೇಂದ್ರ ಸರಕಾರ ಸಂವಾದದ ಬದಲು ದಮನದ ಮಾರ್ಗವನ್ನು ಆರಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
"ಇಂದಿನ ಹದಗೆಟ್ಟ ಶಿಕ್ಷಣ ವ್ಯವಸ್ಥೆ ಹತಾಶೆಯನ್ನು ಮಾತ್ರ ಸೃಷ್ಟಿಸುತ್ತಿದೆ. ಇದರೊಂದಿಗೆ ಮೋದಿ ಸರಕಾರದ ದುರಹಂಕಾರ ಮತ್ತು ಜವಾಬ್ದಾರಿಯುತ ಅಥವಾ ರಚನಾತ್ಮಕವಾಗಿ ವರ್ತಿಸಲು ಇಷ್ಟವಿಲ್ಲದಿರುವುದು ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಕಾರಣವಾಗಿದೆ" ಎಂದು ಅವರು ಬರೆದಿದ್ದಾರೆ.
ಸರಕಾರ "ಸಂಪೂರ್ಣ ನಿರ್ಭಯ"ದಿಂದ ವರ್ತಿಸುತ್ತಿದ್ದು, ಭಾರತದ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿರುವ ಸೋನಿಯಾ ಗಾಂಧಿ, ವಿದ್ಯಾರ್ಥಿಗಳೊಂದಿಗೆ ನಿಲ್ಲುವುದು ಮತ್ತು ಅವರ ಭವಿಷ್ಯವನ್ನು ರಕ್ಷಿಸುವುದು ಪ್ರತಿಯೊಬ್ಬ ಸಾರ್ವಜನಿಕ ಪ್ರತಿನಿಧಿಯ ನೈತಿಕ, ರಾಜಕೀಯ ಹಾಗೂ ಸಾಂವಿಧಾನಿಕ ಜವಾಬ್ದಾರಿ ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮವು ಸಾರ್ವಜನಿಕ ಪ್ರತಿಭಟನೆಗಳ ಕುರಿತು ಸರಕಾರ ಈ ಹಿಂದೆ ಅನುಸರಿಸಿದ್ದ ಧೋರಣೆಯ ಮುಂದುವರಿದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
"2020ರಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ–ರಾಷ್ಟ್ರೀಯ ನಾಗರಿಕರ ನೋಂದಣಿ (CAA–NRC) ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಶಸ್ತ್ರಸಜ್ಜಿತ ಪೊಲೀಸರು ಮತ್ತು ಅರೆಸೈನಿಕ ಪಡೆಗಳು ವಿಶ್ವವಿದ್ಯಾಲಯ ಕ್ಯಾಂಪಸ್ಗಳಿಗೆ ನುಗ್ಗಿದ್ದವು. ಭಾರತದ ಮಹಿಳಾ ಕುಸ್ತಿಪಟುಗಳ ವಿರುದ್ಧ ನಡೆದ ಸ್ವೀಕಾರಾರ್ಹವಲ್ಲದ ದೌರ್ಜನ್ಯಗಳನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಸ್ಥಿತಿಗೆ ಸಂಬಂಧಿಸಿದ ಪ್ರತಿಭಟನೆಗಳ ವೇಳೆ ನಡೆದ ಪೊಲೀಸ್ ಕ್ರಮವನ್ನೂ ಸೋನಿಯಾ ಗಾಂಧಿ ಟೀಕಿಸಿದ್ದಾರೆ.
"ವಿದ್ಯಾರ್ಥಿಗಳ ಬೇಡಿಕೆಗಳು ನೇರವಾಗಿದ್ದವು ಮತ್ತು ಮಹತ್ವದ್ದಾಗಿದ್ದವು. ಭಾರತ ಸರಕಾರದಿಂದ ಉತ್ತರದಾಯಿತ್ವ ಮತ್ತು ಶಿಕ್ಷಣ ಸುಧಾರಣೆಗಳನ್ನು ಅವರು ಆಗ್ರಹಿಸಿದ್ದರು. ಆದರೆ, ನರೇಂದ್ರ ಮೋದಿ ಸರಕಾರವು ಅವರ ಧೈರ್ಯಕ್ಕೆ ಹೇಡಿತನ ಮತ್ತು ಉದ್ದೇಶಪೂರ್ವಕ ಕ್ರೌರ್ಯದಿಂದ ಪ್ರತಿಕ್ರಿಯಿಸಿದ್ದು, ಅವರನ್ನು ದೇಶದ ಭವಿಷ್ಯದ ಉತ್ತರಾಧಿಕಾರಿಗಳಾಗಿ ಅಲ್ಲ, ರಾಷ್ಟ್ರದ ಶತ್ರುಗಳಾಗಿ ಪರಿಗಣಿಸಿದೆ" ಎಂದು ಅವರು ಹೇಳಿದ್ದಾರೆ.






