ಮಹಾರಾಷ್ಟ್ರ | ಕೇಂದ್ರ ಸಚಿವೆ ರಕ್ಷಾ ಖಾಡ್ಸೆ ಪುತ್ರಿಗೆ ಕಿರುಕುಳ : ಪ್ರಕರಣ ದಾಖಲು

Photo | X / Raksha Khadse
ಮುಂಬೈ : ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಮುಕ್ತೈನಗರ ಪ್ರದೇಶದಲ್ಲಿ ನಡೆದ ಜಾತ್ರೆಯೊಂದರಲ್ಲಿ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆ ರಾಜ್ಯ ಸಚಿವೆ ರಕ್ಷಾ ಖಾಡ್ಸೆ ಅವರ ಪುತ್ರಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಈ ಕುರಿತು ಸಚಿವೆ ರಕ್ಷಾ ಖಾಡ್ಸೆ ಮುಕ್ತಾನಗರದ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡ 'ಸಂತ್ ಮುಕ್ತೈʼ ಯಾತ್ರೆ ವೇಳೆ ತನ್ನ ಪುತ್ರಿಗೆ ಕಿರುಕುಳ ನೀಡಲಾಗಿದೆ ಎಂದು ಸಚಿವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮುಕ್ತೈನಗರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಕೃಷ್ಣತ್ ಪಿಂಗಳೆ ಈ ಕುರಿತು ಪ್ರತಿಕ್ರಿಯಿಸಿ, 2025ರ ಫೆಬ್ರವರಿ 28ರಂದು ಕೊತ್ತಲಿ ಗ್ರಾಮದಲ್ಲಿ ಯಾತ್ರೆ ನಡೆದಿತ್ತು. ಯಾತ್ರೆಯಲ್ಲಿ ಅನಿಕೇತ್ ಘುಯಿ ಮತ್ತು ಆತನ 6 ಮಂದಿ ಸ್ನೇಹಿತರು ಬಾಲಕಿಯರಿಗೆ ಕಿರುಕುಳ ನೀಡಿದ್ದಾರೆ. ನಾವು ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣವನ್ನು ದಾಖಲಿಸಿದ್ದೇವೆ. ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಆರು ಮಂದಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.







