ಆಂಧ್ರಪ್ರದೇಶ: ತನ್ನ ಭರವಸೆಗಳನ್ನು ಈಡೇರಿಸಲಾಗದ್ದಕ್ಕೆ ತನಗೆ ತಾನೆ ಚಪ್ಪಲಿಯಿಂದ ಹೊಡೆದುಕೊಂಡ ಪುರಸಭೆಯ ಕೌನ್ಸಿಲರ್

Screengrab: Twitter/@JaiTDP
ಅನಕಪಲ್ಲಿ (ಆಂಧ್ರಪ್ರದೇಶ): ಮತದಾರರಿಗೆ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದ ಕಾರಣಕ್ಕೆ ಮುನಿಸಿಪಾಲಿಟಿ ಕೌನ್ಸಿಲರ್ ಒಬ್ಬ ತನ್ನ ಕೆನ್ನೆಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡಿರುವ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ನರಸಿಪಟ್ಟಣಂ ಮುನಿಸಿಪಾಲಿಟಿಯ ವಾರ್ಡ್ ನಂ. 20ರ ಕೌನ್ಸಿಲರ್ ಆದ ಮುಲಪರ್ತಿ ರಾಮರಾಜು ಮುನಿಸಿಪಾಲಿಟಿಯ ಸಭೆಯಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು, ಈ ಘಟನೆಯ ವಿಡಿಯೊ ವೈರಲ್ ಆಗಿದೆ.
ನಾನು ಕೌನ್ಸಿಲರ್ ಆಗಿ ಚುನಾಯಿತನಾಗಿ 31 ತಿಂಗಳುಗಳೇ ಕಳೆದಿದ್ದರೂ, "ನನ್ನ ವಾರ್ಡ್ನಲ್ಲಿನ ಚರಂಡಿ, ವಿದ್ಯುತ್, ಶುಚಿತ್ವ, ರಸ್ತೆಗಳು ಹಾಗೂ ಇನ್ನಿತರ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲಾಗಿಲ್ಲ" ಎಂದು ತಮಗೆ ತಾವೇ ಚಪ್ಪಲಿಯಿಂದ ಹೊಡೆದುಕೊಂಡ ಘಟನೆಯ ಕುರಿತು ರಾಮರಾಜು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಆಟೋರಿಕ್ಷಾ ಚಲಾಯಿಸುವ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಿರುವ 40 ವರ್ಷದ ರಾಮರಾಜು, ನಾನು ನನ್ನ ಎಲ್ಲ ಆಯ್ಕೆಗಳನ್ನು ಪ್ರಯತ್ನಿಸಿದೆನಾದರೂ, ನಾನು ನನ್ನ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲನಾದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮುನಿಸಿಪಾಲಿಟಿ ಅಧಿಕಾರಿಗಳು ನನ್ನ ವಾರ್ಡ್ ನಂ. 20 ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ನಾನು ನನ್ನ ಮತದಾರರಿಗೆ ನೀರಿನ ಸಂಪರ್ಕವನ್ನೂ ಒದಗಿಸಲು ಸಾಧ್ಯವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನಾಗರಿಕ ಸೌಲಭ್ಯಗಳನ್ನು ಒದಗಿಸುವಂತೆ ನನ್ನ ಮತದಾರರು ಒತ್ತಾಯಿಸುತ್ತಿದ್ದು, ಅವರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲನಾಗಿರುವುದರಿಂದ ಮುನಿಸಿಪಾಲಿಟಿ ಸಭೆಯಲ್ಲಿ ಸಾಯುವುದೇ ಮೇಲು ಎಂದು ಅವರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಕೌನ್ಸಿಲರ್ಗೆ ಟಿಡಿಪಿ ಬೆಂಬಲ ನೀಡಿತ್ತು.







