ಭಾರತದ ಮೇಲೆ ಪಾಕ್ ದಾಳಿ ಯತ್ನದ ಬಳಿಕ ಅರಬ್ಬಿ ಸಮುದ್ರದಲ್ಲಿ ನೌಕಾ ಕಾರ್ಯಾಚರಣೆ ಆರಂಭ : ವರದಿ

ಹೊಸದಿಲ್ಲಿ: ಭಾರತದ ಸೇನಾ ನೆಲೆಗಳನ್ನು ಗುರಿ ಮಾಡಿ ಪಾಕಿಸ್ತಾನ ಕ್ಷಿಪಣಿ ಹಾಗೂ ಡ್ರೋನ್ ದಾಳಿ ಆರಂಭಿಸಿದ ಬೆನ್ನಲ್ಲೇ ಭಾರತೀಯ ನೌಕಾಪಡೆ ಅರಬ್ಬಿ ಸಮುದ್ರದಲ್ಲಿ ಪ್ರತಿದಾಳಿ ಕಾರ್ಯಾಚರಣೆ ಆರಂಭಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಜಮ್ಮು ಮತ್ತು ಕಾಶ್ಮೀರದ ಮೇಲೆ ಪಾಕಿಸ್ತಾನ ಸೇನೆ ಕ್ಷಿಪಣಿ ದಾಳಿ ನಡೆಸುವ ಪ್ರಯತ್ನ ನಡೆಸಿದೆ. ಜೈಸಲ್ಮೇರ್ ಸೇರಿದಂತೆ ದೇಶದ ಇತರ ಭಾಗಗಳ ಮೇಲೆ ಡ್ರೋನ್ ದಾಳಿ ನಡೆಸುವ ಪ್ರಯತ್ನದ ಬೆನ್ನಲ್ಲೇ ಶುಕ್ರವಾರ ನಸುಕಿನಲ್ಲಿ ಪಾಕಿಸ್ತಾನದ ಹಲವು ನೆಲೆಗಳನ್ನು ಗುರಿ ಮಾಡಿ ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಕಾರ್ಯಾಚರಣೆ ಆರಂಭಿಸಿದೆ ಎಂದು ವರದಿಯಾಗಿದೆ.
ಜಮ್ಮು ಪಟ್ಟಣದಲ್ಲಿ ದೊಡ್ಡ ಸ್ಫೋಟದ ಸದ್ದು ಕೇಳಿಬಂದಿದ್ದು, ಆರ್.ಎಸ್.ಪುರ, ಅರ್ನಿಯಾ, ಸಾಂಬಾ ಮತ್ತು ಹೀರಾನಗರ ಸೇರಿದಂತೆ ಹಲವು ತಾಣಗಳನ್ನು ಗುರಿ ಮಾಡಿ ಪಾಕಿಸ್ತಾನ ದಾಳಿ ನಡೆಸುವ ಪ್ರಯತ್ನ ಮಾಡಿದೆ. ಆದರೆ ಎಲ್ಲ ಕ್ಷಿಪಣಿಗಳನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ಛೇದಿಸಿದೆ. ಪಟಾಣ್ಕೋಟ್ನಲ್ಲಿ ಶೆಲ್ ದಾಳಿ ನಡೆದಿದ್ದು, ಜೈಸಲ್ಮೇರ್ ಹಾಗೂ ಇತರ ಕಡೆಗಳಲ್ಲಿ ಡ್ರೋನ್ಗಳನ್ನು ಛೇದಿಸಲಾಗಿದೆ. ಚಂಡೀಗಢ, ಮೊಹಾಲಿ ಮತ್ತು ಶ್ರೀನಗರ ಸೇರಿದಂತೆ ಹಲವು ನಗರಗಳಲ್ಲಿ ದೀಪಗಳನ್ನು ಆರಿಸುವಂತೆ ಸೂಚಿಸಲಾಗಿದೆ.
ದೇಶದ ಸಾರ್ವಭೌಮತ್ವ ಮತ್ತು ಜನರ ಸುರಕ್ಷತೆಯನ್ನು ಕಾಪಾಡಲು ಭಾರತ ಸರ್ವರೀತಿಯಲ್ಲೂ ಸಜ್ಜಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.