"ಪ್ರಸ್ತಾವನೆ ಏನೆಂದು ನನಗೆ ಹೇಳಬಲ್ಲಿರಾ?": ಏಕರೂಪ ನಾಗರಿಕ ಸಂಹಿತೆ ಕುರಿತು ನಿರೂಪಕಿ ನಾವಿಕಾ ಕುಮಾರ್ ಗೆ ಕಪಿಲ್ ಸಿಬಲ್ ಪಾಠ
ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ ವಿವಾದದ ಕುರಿತು ತನ್ನನ್ನು ಸಂದರ್ಶಿಸಿರುವ 'Times Now' ಸಂಪಾದಕಿ ಹಾಗೂ ನಿರೂಪಕಿ ನಾವಿಕಾ ಕುಮಾರ್ ಅವರಿಗೆ, " ಅದೊಂದು ವಿವೇಚನೆಯಿಲ್ಲದ ಪ್ರಸ್ತಾವನೆ. ಆ ಪ್ರಸ್ತಾವನೆ ಏನೆಂದು ನನಗೆ ತಿಳಿದಿಲ್ಲ. ನಿಮಗೇನಾದರೂ ತಿಳಿದಿದೆಯೆ?" ಎಂದು ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಮರುಪ್ರಶ್ನಿಸಿ ಯುಸಿಸಿ ಕುರಿತು ಪಾಠ ಮಾಡಿದ್ದಾರೆ. ಈ ಸಂದರ್ಶನದ ಸಾರಾಂಶ ಈ ಕೆಳಗಿನಂತಿದೆ:
ನಾವಿಕಾ: ಸದ್ಯ ನಡೆಯುತ್ತಿರುವ ಏಕರೂಪ ನಾಗರಿಕ ಸಂಹಿತೆ ವಿವಾದದ ಕುರಿತು ನಿಮ್ಮ ಅಭಿಪ್ರಾಯವೇನು?
ಸಿಬಲ್: ನನಗನ್ನಿಸುವಂತೆ ಇದೊಂದು ವಿವೇಚನಾರಹಿತ ಕೆಲಸ
ನಾವಿಕಾ: ನೀವೇಕೆ ಹಾಗೆ ಹೇಳುತ್ತೀರಿ?
ಸಿಬಲ್: ನನಗೆ ಆ ಪ್ರಸ್ತಾವನೆ ಏನೆಂದು ಗೊತ್ತಿಲ್ಲ; ನಿಮಗೇನಾದರೂ ಗೊತ್ತಿದೆಯೆ ಏಕರೂಪ ನಾಗರಿಕ ಸಂಹಿತೆಯ ಅರ್ಥವೇನೆಂದು? ಏನೆಲ್ಲ ಏಕರೂಪವಾಗಿ ಇರಲಿವೆ? ನಮ್ಮೆಲ್ಲರ ಸಂಪ್ರದಾಯಗಳು ಏಕರೂಪವಾಗಿರಬೇಕಾಗುತ್ತದೆ; ನಿಮಗೆ ತಿಳಿದಿರುವಂತೆ ಸಂವಿಧಾನದ 13ನೇ ವಿಧಿಯಂತೆ ಸಂಪ್ರದಾಯ ಕೂಡಾ ಕಾನೂನು. ಆದ್ದರಿಂದ ಸಂಪ್ರದಾಯ ಕೂಡಾ ಏಕರೂಪವಾಗಿರಬೇಕಾಗುತ್ತದೆ. ಹಿಂದೂ ಅವಿಭಕ್ತ ಕುಟುಂಬ ಕಾನೂನಿಗೆ ಬಂದರೆ ಅದು ಕೇವಲ ಹಿಂದೂಗಳಿಗೆ ಮಾತ್ರ ಅನ್ವಯಿಸುತ್ತದೆ. ಸ್ವಯಾರ್ಜಿತ ಆಸ್ತಿ ಹಾಗೂ ಪಿತ್ರಾರ್ಜಿತ ಆಸ್ತಿಗೆ ಹಿಂದೂ ಅವಿಭಕ್ತ ಕುಟುಂಬ ಕಾನೂನು ವಿಭಿನ್ನವಾಗಿ ಅನ್ವಯವಾಗುತ್ತದೆ. ಹಾಗಾದರೆ ನೀವು ಅವಿಭಕ್ತ ಕುಟುಂಬ ಕಾನೂನನ್ನು ತೆಗೆಯುತ್ತೀರಾ? ಹಿಂದೂ ಅವಿಭಕ್ತ ಕುಟುಂಬ ಕಾನೂನಿಗೆ ಬಂದರೆ ಕೋಟ್ಯಂತರ ಮಂದಿ, ನಿರ್ದಿಷ್ಟವಾಗಿ ಹಿಂದೂಗಳು ಅವಿಭಕ್ತ ಕುಟುಂಬವಾಗಿ ವ್ಯಾಪಾರೋದ್ಯಮ ನಡೆಸುತ್ತಿದ್ದಾರೆ; ಕೃಷಿ ಭೂಮಿಯನ್ನು ಆಸ್ತಿಯಾಗಿ ಹೊಂದಿದ್ದಾರೆ. ಗೋವಾದಲ್ಲಿ ಏನು ಮಾಡುತ್ತೀರಿ? ಗೋವಾದಲ್ಲಿ ಪೋರ್ಚುಗೀಸರಿದ್ದಾರೆ. ಗೋವಾದಲ್ಲಿ ಕಾನೂನಿದೆ. ಗೋವಾದ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ 13 ವರ್ಷವಾದರೂ ಮಕ್ಕಳಾಗದಿದ್ದರೆ ಮರುವಿವಾಹವಾಗಬಹುದಾಗಿದೆ. ನೀವದನ್ನು ನಿಷೇಧಿಸುತ್ತೀರಾ? ಈಶಾನ್ಯ ರಾಜ್ಯಗಳಲ್ಲಿ ಏನು ಮಾಡುತ್ತೀರಿ? ನಿಮ್ಮ ಬಳಿ ಪ್ರಸ್ತಾವನೆ ಇದೆಯೆ? ಹಾಗಾದರೆ ಈ ಎಲ್ಲ ಹುಯಿಲುಗಳು ಯಾವುದರ ಬಗ್ಗೆ?
ನಾವಿಕಾ: ಈ ಹುಯಿಲುಗಳು ಬಹುಶಃ ಹಿನ್ನೆಲೆಗೆ ಸರಿದಿರುವ ವಿಷಯಗಳು ಹಾಗೂ ಚರ್ಚೆಗಳನ್ನು ಶುರು ಮಾಡುವುದಾಗಿರಬಹುದು.
ಸಿಬಲ್: ಯಾವ ವಿಷಯಗಳು? ನಾನು ನಿಮ್ಮಿಂದ ತಿಳಿಯಲು ಬಯಸುತ್ತೇನೆ. ಪ್ರಧಾನ ಮಂತ್ರಿಗಳು ಎತ್ತಿರುವ ಒಂದು ವಿಷಯ ತಿಳಿಸಿ; ಕೇವಲ ಒಂದು ವಿಷಯ. ನನಗೆ ಹೆಚ್ಚೇನೂ ಬೇಕಿಲ್ಲ..
ನಾವಿಕಾ: ನಾವೀಗ ಲಿಂಗ ಸಮಾನತೆಯ ಕುರಿತು ಮಾತಾಡೋಣ.
ಸಿಬಲ್: ಅದ್ಭುತ! ಅದರ ಬಗ್ಗೆ ಮಾತನಾಡಲೇಬೇಕು. ಖಂಡಿತ ನಾನದರ ಪರ ಹೋರಾಡಿದ್ದೇನೆ. ಎಲ್ಲವೂ ಅದರ ಸುತ್ತಲೇ ಇದೆ.
ನಾವಿಕಾ: ಅದು ಆರಂಭಿಕ ಘಟ್ಟವಲ್ಲವೆ?
ಸಿಬಲ್: ಆದರೆ, ಅವರು (ಪ್ರಧಾನಿ) ಹೇಳಿಲ್ಲ.. ನೀವೇ ಹೇಳುತ್ತಿದ್ದೀರಿ.. ನಾನು ಈವರೆಗೆ ಭಾವಿಸಿರುವಂತೆ ಪ್ರಧಾನಿಗಳು ಈ ದೇಶಕ್ಕೆ ಹೊರಗಿನವಲ್ಲ...
ನಾವಿಕಾ: ಖಂಡಿತ ಅಲ್ಲ.. ಕಾನೂನು ಆಯೋಗ ಕೂಡಾ ತನ್ನ ಅನಿಸಿಕೆಯನ್ನು ಮಂಡಿಸಿದೆ...
ಸಿಬಲ್: 2021ನೇ ಅವಧಿಯ ಕಾನೂನು ಆಯೋಗದ ವರದಿಯನ್ನೇ ಎಂದಿಗೂ ಜಾರಿಗೆ ತರಲಾಗುವುದಿಲ್ಲ. ವ್ಯಕ್ತಿಗಳು ಬದಲಾಗುತ್ತಾರೆ.. ಸಿದ್ಧಾಂತಗಳು ಬದಲಾಗುತ್ತವೆ.. ಸ್ಥಾನಮಾನಗಳು ಬದಲಾಗುತ್ತವೆ.. ರಾಜಕೀಯ ಬದಲಾಗುತ್ತದೆ.. ಅದರಂತೆ ಕಾನೂನು ಆಯೋಗವೂ ಬದಲಾಗುತ್ತದೆ..
ನಾವಿಕಾ: ಬದಲಾವಣೆ ನಿರಂತರ ಪ್ರಕ್ರಿಯೆ..
ಸಿಬಲ್: ನಿಜವಾಗಿಯೂ! ಅದೂ ಕೂಡಾ ಬದಲಿಸಬಹುದಾದ ಒಂದು ಅನಿಸಿಕೆ.. ಅದೇ ಅಂತಿಮ ನಿರ್ಧಾರವಾಗುವ ಬಗೆಯಲ್ಲ. ಸಂವಿಧಾನ ರಚನೆಕಾರರು ಸಂವಿಧಾನ ರಚನಾ ಸಭೆಯಲ್ಲಿ ಅದಾಗಲು ಬಯಸಿರಲಿಲ್ಲ. ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಏನಾಯಿತೆಂದು ನಿಮಗೆ ತಿಳಿದಿದೆಯೆ? ಚರ್ಚೆಯ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಏನು ಹೇಳಿದ್ದರು ಎಂದು ನಿಮಗೆ ತಿಳಿದಿದೆಯೆ? ನೋಡಿ 1937ರ ಶರಿಯತ್ ಕಾನೂನನ್ನು ಹಿಂದೂ ವಿವಾಹ ಕಾಯ್ದೆ ಮತ್ತಿತರ ಹಿಂದೂ ಕಾಯ್ದೆಗಳಿಗಿಂತಲೂ ಮುಂಚಿತವಾಗಿಯೇ ಜಾರಿಗೆ ತರಲಾಗಿತ್ತು. ಆದರೆ, ಅದನ್ನು ಅಳವಡಿಸಿಕೊಂಡಿರಲಿಲ್ಲ. 1937ರ ಶರಿಯತ್ ಕಾನೂನು ಯಾರು ಅದನ್ನು ಸ್ವಯಂಪ್ರೇರಿತವಾಗಿ ಅಳವಡಿಸಿಕೊಳ್ಳುತ್ತಾರೊ ಅವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅವರು (ಅಂಬೇಡ್ಕರ್) ಹೇಳಿದ್ದರು.
ನಾವಿಕಾ: ಐಚ್ಛಿಕ?
ಸಿಬಲ್: ಐಚ್ಛಿಕವಾಗಿ.. ಒಂದು ವೇಳೆ ನೀವು ನಿಜವಾಗಿಯೂ ಏಕರೂಪ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಳ್ಳಬೇಕಿದ್ದರೆ ಅದೇ ಮಾರ್ಗವನ್ನು ಅನುಸರಿಸಬೇಕು.. ಮೊದಲು ಜನರ ಅಭಿಪ್ರಾಯ ಸಂಗ್ರಹಿಸಬೇಕು.. ಎಲ್ಲ ಸಂಬಂಧಿತ ವ್ಯಕ್ತಿಗಳೊಂದಿಗೆ ಮಾತನಾಡಬೇಕು.. ಕಳೆದ ಒಂಬತ್ತು ವರ್ಷಗಳಿಂದ ಯಾವುದೇ ಮಾತುಕತೆಯಿಲ್ಲ.. ಇಷ್ಟು ಅಂತರವಿದ್ದರೂ ಯಾವ ಸಂಬಂಧಿತ ವ್ಯಕ್ತಿಗಳೊಂದಿಗೂ ಮಾತುಕತೆ ನಡೆಸಲಿಲ್ಲ.. ಸಂಬಂಧಿತ ವ್ಯಕ್ತಿಗಳೆಂದರೆ ಸಮುದಾಯದ ನಾಯಕರು.. ಸಂಬಂಧಿತ ವ್ಯಕ್ತಿಗಳು ಎಂದರೆ ರಾಜಕೀಯ ಪಕ್ಷಗಳಲ್ಲ, ಸಮುದಾಯಗಳ ನಾಯಕರು.. ಹಲವಾರು ಸಮುದಾಯಗಳ ನಾಯಕರೆಂದರೆ ಧಾರ್ಮಿಕ ನಾಯಕರಲ್ಲ.. ಧಾರ್ಮಿಕೇತರ ಸಮುದಾಯಗಳ ನಾಯಕರು.. ಆದಿವಾಸಿಗಳ ಬಗ್ಗೆ ಏನು ಮಾಡುತ್ತೀರಿ? ಅವರ ಸಂಪ್ರದಾಯಗಳನ್ನು ಏನು ಮಾಡುತ್ತೀರಿ? ಆ ಬಗ್ಗೆ ಯಾರೂ ಮಾತನಾಡುತ್ತಲೇ ಇಲ್ಲ. ನೀವು ವಿಷಯ ವಸ್ತುವೇ ಇಲ್ಲದೆ ಚರ್ಚೆ ಮಾಡುತ್ತಿದ್ದೀರಿ.. ಇದು ಸಮಸ್ಯೆ...
ನಾವಿಕಾ: ಆದರೆ, ಸುಶಿಕ್ಷಿತರಾಗಿರುವ, ಕಾನೂನು ಶಕ್ತಿ ಕೇಂದ್ರವಾಗಿರುವ ನಿಮಗೆ ನನ್ನದೊಂದು ಪ್ರಶ್ನೆ. 21 ಶತಮಾನದ ಈ ಹಾಲಿ ಸಮಾಜದಲ್ಲಿ ಸಂಪ್ರದಾಯ, ನಂಬಿಕೆಗಳಂಥ ಶ್ರದ್ಧೆಗಳ ಕಡೆ ಗಮನ ಕೊಡುವ ಅಗತ್ಯವಿದೆಯೆ ಹಾಗೂ ಕೊಂಚ ಮಟ್ಟಿಗೆ ಸಮಾನತೆಯನ್ನು ತರಲು ಸಾಧ್ಯವಿದೆಯೆ? ಉದಾಹರಣೆಗೆ, ವಂಶಪಾರಂಪರ್ಯ ಕಾನೂನು.. ಹಿಂದೂ ಅವಿಭಕ್ತ ಕುಟುಂಬಗಳಿಗೆ ಈ ಕಾನೂನನ್ನು ಅನ್ವಯಿಸಬಾರದು ಎಂದು ನಾನು ಹೇಳುತ್ತಿಲ್ಲ.. ಉಳಿದ ಸಮುದಾಯಗಳಲ್ಲಿರುವ ಇತರೆ ಕಾನೂನುಗಳಿಗೆ ಹೋಲಿಸಿದಾಗ ಇದೂ ಕೂಡಾ ಅನ್ವಯವಾಗಬೇಕು.. ಇದು ಆದಿವಾಸಿಗಳಿಗೂ ಖಂಡಿತ ಅನ್ವಯವಾಗಬೇಕು.. ಇಂತಹುದೇನಾದರೂ ಆಗಲೇಬೇಕು.. ಆದರೆ, ಖಂಡಿತವಾಗಿ ಆರಂಭದಲ್ಲೇ "ನೀವು ಮುಸ್ಲಿಮರನ್ನು ಗುರಿಯಾಗಿಸುತ್ತಿದ್ದೀರಿ" ಎಂಬ ರಾಜಕೀಯ ಪ್ರತಿಕ್ರಿಯೆಗಳು ಬರುತ್ತವೆ. ಇದು ನಿಜವಾದ ವೈಫಲ್ಯವಿರಬಹುದೆ?
ಸಿಬಲ್: ಮೊದಲಿಗೆ ಅಂತಹ ವಿಷಯವೆಲ್ಲಿದೆ? ನನ್ನ ಬಳಿ ಅಂತಹ ಪ್ರಸ್ತಾವನೆಯೇ ಇಲ್ಲ. ಬಹುಶಃ ವಿರೋಧ ಪಕ್ಷಗಳೂ ಸುಮ್ಮನೆ ಗುಂಡು ಹಾರಿಸುತ್ತಿವೆ ಎಂದು ನನಗನ್ನಿಸುತ್ತಿದೆ. ವಿಷಯ ವಸ್ತುವೇ ಕಾಣೆಯಾಗಿರುವಾಗ ವಿರೋಧ ಪಕ್ಷಗಳೇಕೆ ಪ್ರತಿಕ್ರಿಯಿಸುತ್ತಿವೆ? ಎಂದು ಹೇಳಿದ್ದಾರೆ.
ಕೃಪೆ: Scroll.ಇನ್