ಎನ್ ಸಿಪಿ ಬಣಗಳ ಪ್ರತ್ಯೇಕ ಶಕ್ತಿ ಪ್ರದರ್ಶನ: ಸಂಖ್ಯಾಬಲದಲ್ಲಿ ಶರದ್ ಪವಾರ್ ರನ್ನು ಸೋಲಿಸಿದ ಅಜಿತ್ ಪವಾರ್
ಮುಂಬೈ: ಶರದ್ ಪವಾರ್ ಹಾಗೂ ಅವರ ಸೋದರಳಿಯ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಬಣಗಳು ಬುಧವಾರ ಮುಂಬೈನಲ್ಲಿ ಪ್ರತ್ಯೇಕ ಶಕ್ತಿ ಪ್ರದರ್ಶನವನ್ನು ಮಾಡಿದ್ದು ಬಂಡಾಯ ಎದ್ದಿರುವ ಅಜಿತ್ ಪವಾರ್ ಬುಧವಾರದ ಸಂಖ್ಯಾಬಲದ ಆಟದಲ್ಲಿ ಶರದ್ ಪವಾರ್ ಅವರನ್ನು ಸೋಲಿಸಿದರು.
ಇಲ್ಲಿಯವರೆಗೆ, 14 ಶಾಸಕರು ಶರದ್ ಪವಾರ್ ಅವರನ್ನು ಬೆಂಬಲಿಸಿ ವೈ.ಬಿ. ಚವಾಣ್ ಕೇಂದ್ರಕ್ಕೆ ತೆರಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಅನಂತ್ ಕಲ್ಸೆ ಪ್ರಕಾರ, ಅಜಿತ್ ಪವಾರ್ ಅನರ್ಹತೆಯನ್ನು ತಪ್ಪಿಸಲು ಕನಿಷ್ಠ 36 ಶಾಸಕರ ಬೆಂಬಲ ಅಗತ್ಯವಿದೆ.
83ರ ಹರೆಯದ ಪವಾರ್ ಮುಖವು ಎರಡೂ ಸಭೆಗಳಲ್ಲಿ ವೇದಿಕೆಯ ಹಿಂದಿನ ಫ್ಲೆಕ್ಸ್ನಲ್ಲಿತ್ತು. ಶರದ್ ಪವಾರ್ ಕರೆದಿರುವ ಸಭೆ ಹಾಗೂ ಅವರ ವಿರುದ್ಧ ಬಂಡಾಯ ಎದ್ದಿರುವ ಸೋದರಳಿಯ ಸಭೆಯಲ್ಲಿ ಪವಾರ್ ಫೋಟೊ ಕಾಣಿಸಿಕೊಂಡಿದೆ.
ಬಹುಪಾಲು ಎನ್ಸಿಪಿ ಶಾಸಕರ ಬೆಂಬಲ ತನಗಿದೆ ಪ್ರತಿಪಾದಿಸುವ ಅಜಿತ್ ಪವಾರ್ ನೇತೃತ್ವದ ಬಣವು ತನ್ನ ಫೋಟೋವನ್ನು ಬಳಸದಂತೆ ಪವಾರ್ ಹೇಳಿಕೆಯನ್ನು ಲೆಕ್ಕಿಸದೆ ಅವರ ಫೋಟೊವನ್ನು ಬಳಸಿಕೊಂಡಿದೆ.
ಅಚ್ಚರಿಯ ನಡೆಯಲ್ಲಿ, ಅಜಿತ್ ಪವಾರ್ ಅವರ ಆಪ್ತ ಸಹಾಯಕ ಸ್ವತಂತ್ರ ಶಾಸಕ ದೇವೇಂದ್ರ ಭುಯಾರ್ ಅವರು ಶರದ್ ಪವಾರ್ ಅವರನ್ನು ಭೇಟಿ ಮಾಡಲು ವೈ ಬಿ ಚವಾಣ್ ಕೇಂದ್ರಕ್ಕೆ ತಲುಪಿದರು. ಶಿರೂರಿನ ಎನ್ಸಿಪಿ ಶಾಸಕ ಅಶೋಕ್ ಪವಾರ್ ಕೂಡ ಶರದ್ ಪವಾರ್ ಜೊತೆಗೂಡಿದರು. ಈ ವಾರದ ಆರಂಭದಲ್ಲಿ ಅಜಿತ್ ಪವಾರ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಅವರು ಉಪಸ್ಥಿತರಿದ್ದರು.