ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
ʼಎನ್ಡಿಎʼ ಗೆಲ್ಲುತ್ತೋ? ʼಇಂಡಿಯಾʼ ಗೆಲ್ಲುತ್ತೋ?

ಹೊಸದಿಲ್ಲಿ : ಭಾರತೀಯ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಅಂತಿಮ ಘಟ್ಟ ತಲುಪಿದ್ದು, INDIA ಒಕ್ಕೂಟವು ಸರಕಾರ ರಚನೆಗೆ ಕಸರತ್ತು ಮುಂದುವರೆಸಿದ್ದು ಕಿಂಗ್ ಮೇಕರ್ ಗಳಾದ ಜೆಡಿಯು ಮತ್ತು ಟಿಡಿಪಿಯ ಜೊತೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ನಿತೀಶ್ ಕುಮಾರ್ ಅವರಿಗೆ INDIA ಒಕ್ಕೂಟ ಸೇರಿದರೆ ಉಪಪ್ರಧಾನಿ ಪಟ್ಟ ನೀಡುವ ಆಫರ್ ನೀಡಲಾಗಿದೆ ಎನ್ನಲಾಗಿದೆ.
ಆಂಧ್ರಪ್ರದೇಶದಲ್ಲಿ ಪುಟಿದೆದ್ದಿರುವ ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯು ವಿಧಾನಸಭೆಯಲ್ಲೂ ಜಯಭೇರಿ ಭಾರಿಸಿದೆ. ತೆಲುಗು ದೇಶಂ ಪಾರ್ಟಿಯನ್ನು ಸಂಪರ್ಕಿಸಿರುವ INDIA ನಾಯಕರು, ಒಕ್ಕೂಟ ಸೇರಿ ಸರಕಾರ ರಚನೆಗೆ ನೆರವಾದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 7ಕ್ಕೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದಾರೆ.
ಈ ಚುನಾವಣೆಯಲ್ಲಿ NDA ಒಕ್ಕೂಟವು ಕನಿಷ್ಠ 292 ಸ್ಥಾನ ಗಳಲ್ಲಿ ಮುನ್ನಡೆ ಸಾಧಿಸಿದ್ದು, INDIA ಒಕ್ಕೂಟವು 234 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯು 239 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. INDIA ಒಕ್ಕೂಟದಲ್ಲಿ ಕಾಂಗ್ರೆಸ್ ಪಕ್ಷವು ಕನಿಷ್ಠ 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎರಡನೇ ಅತೀ ದೊಡ್ಡ ಪಕ್ಷಗಾಗಿ ಹೊರಹೊಮ್ಮಿದೆ.
Live Updates
- 4 Jun 2024 5:50 PM IST
ದಿಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಆರಂಭ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಜೈರಾಂ ರಮೇಶ್ ಭಾಗಿ
- 4 Jun 2024 5:43 PM IST
ಪಟಿಯಾಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧರ್ಮವೀರ್ ಗಾಂಧಿ ಅವರು ಎಎಪಿಯ ಬಲ್ಬೀರ್ ಸಿಂಗ್ ಅವರನ್ನು ಸೋಲಿಸಿದ್ದಾರೆ
- 4 Jun 2024 5:41 PM IST
ಬಿಜೆಪಿಯ ಮನ್ಸುಖ್ ಭಾಯಿ ಧಂಜಿನ್ ಭಾಯ್ ವಾಸವಾ ಅವರಿಗೆ ಗುಜರಾತ್ನ ಭರೂಚ್ ಲೋಕಸಭಾ ಕ್ಷೇತ್ರದಲ್ಲಿ 85696 ಮತಗಳಿಂದ ಜಯ
- 4 Jun 2024 5:39 PM IST
ಆಝಾದ್ ಸಮಾಜವಾದಿ ಪಕ್ಷ(ಕಾನ್ಶಿ ರಾಮ್)ದ ನಾಯಕ ಚಂದ್ರಶೇಖರ್ ಆಝಾದ್ ಅವರಿಗೆ 151473 ಮತಗಳಿಂದ ಉತ್ತರಪ್ರದೇಶದ ನಗೀನಾ ಕ್ಷೇತ್ರದಲ್ಲಿ ಜಯ
- 4 Jun 2024 5:25 PM IST
ರೈತರ ಮೇಲೆ ವಾಹನ ಹರಿಸಿದ ಅಶೀಶ್ ಮಿಶ್ರಾನ ತಂದೆ ಅಜಯ್ ಮಿಶ್ರಾ ಟೇನಿಗೆ ಉತ್ತರಪ್ರದೇಶದ ಲಖಿಂಪುರ ಖೇರಿ ಲೋಕಸಭಾ ಕ್ಷೇತ್ರದಲ್ಲಿ ಸೋಲು
- 4 Jun 2024 5:19 PM IST
ಪಂಜಾಬ್ನ ಪಟಿಯಾಲದಿಂದ ಕಾಂಗ್ರೆಸ್ ನ ಡಾ.ಧರ್ಮವೀರ್ ಗಾಂಧಿಗೆ 14831 ಮತಗಳ ಅಂತರದಿಂದ ಗೆಲುವು
- 4 Jun 2024 5:17 PM IST
ಗುಜರಾತ್ ನಲ್ಲಿ ದಶಕಗಳ ಬಳಿಕ ಖಾತೆ ತೆರೆದ ಕಾಂಗ್ರೆಸ್
ಕಾಂಗ್ರೆಸ್ನ ಜೆನಿಬೆನ್ ಠಾಕೂರ್ ಅವರು ಗುಜರಾತ್ನ ಬನಸ್ಕಾಂತ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರೇಖಾ ಚೌಧರಿ ಅವರನ್ನು 30,000 ಮತಗಳಿಂದ ಸೋಲಿಸಿದ್ದಾರೆ.
- 4 Jun 2024 5:15 PM IST
ಇಂದಿರಾಗಾಂಧಿ ಹಂತಕನ ಮಗ ಸರಬ್ಜೀತ್ ಸಿಂಗ್ ಖಾಲ್ಸಾ, ಪ್ರತ್ಯೇಕವಾದಿ ನಾಯಕ ಅಮೃತಪಾಲ್ ಸಿಂಗ್ ಗೆಲುವಿನತ್ತ
ಚಂಡೀಗಢ: ಪ್ರತ್ಯೇಕವಾದಿ ನಾಯಕ ಅಮೃತಪಾಲ್ ಸಿಂಗ್ ಮತ್ತು ಪ್ರಧಾನಿ ಇಂದಿರಾ ಗಾಂಧಿ ಹಂತಕನ ಪುತ್ರ ಸರಬ್ಜೀತ್ ಸಿಂಗ್ ಖಾಲ್ಸಾ ಅವರು ಸಂಸತ್ತಿಗೆ ಚೊಚ್ಚಲ ಪ್ರವೇಶ ಮಾಡಲಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.
ಸಿಂಗ್ ಮತ್ತು ಖಾಲ್ಸಾ ಇಬ್ಬರೂ ತಮ್ಮ ಸಮೀಪದ ಪ್ರತಿಸ್ಪರ್ಧಿಗಳ ವಿರುದ್ಧ ಕ್ರಮವಾಗಿ ಖದೂರ್ ಸಾಹಿಬ್ ಮತ್ತು ಫರೀದ್ಕೋಟ್ ಲೋಕಸಭಾ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದರು.
ಒಂದು ವರ್ಷದ ಹಿಂದೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಅಮೃತಪಾಲ್ ಸಿಂಗ್ ಅವರನ್ನು ಅಸ್ಸಾಂನ ಜೈಲಿನಲ್ಲಿ ಇರಿಸಲಾಗಿದೆ.







