ಹಿಂಸಾತ್ಮಕ ಪ್ರತಿಭಟನೆ: ನೇಪಾಳಕ್ಕೆ ವಿಮಾನ ಹಾರಾಟ ರದ್ದುಗೊಳಿಸಿದ ಏರ್ ಇಂಡಿಯಾ

ಕಠ್ಮಂಡು : ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ, ಪ್ರಕ್ಷ್ಯುಬ್ಧ ಪರಿಸ್ಥಿತಿ ಹಿನ್ನೆಲೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ನೇಪಾಳಕ್ಕೆ ವಿಮಾನಗಳನ್ನು ರದ್ದುಗೊಳಿಸಿದೆ.
ನೇಪಾಳದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ನಾಗರಿಕರು ಸದ್ಯ ನೇಪಾಳಕ್ಕೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಪ್ರಸ್ತುತ ನೇಪಾಳದಲ್ಲಿರುವ ಭಾರತೀಯ ನಾಗರಿಕರು ತಮ್ಮ ವಾಸಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ, ಬೀದಿಗಿಳಿಯದಂತೆ ಮತ್ತು ಎಚ್ಚರಿಕೆಯಿಂದಿರುವಂತೆ ಭಾರತದ ವಿದೇಶಾಂಗ ಸಚಿವಾಲಯ ಸಲಹೆಯನ್ನು ನೀಡಿದೆ ಮತ್ತು ಅಗತ್ಯಬಿದ್ದಲ್ಲಿ ಕಠ್ಮಂಡುವಿನಲ್ಲಿರುವ ಭಾರತದ ರಾಯಭಾರ ಕಚೇರಿಗೆ ಸಂಪರ್ಕಿಸುವಂತೆ ಸೂಚಿಸಿದೆ.
ನೇಪಾಳ ಸರಕಾರದ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ಖಂಡಿಸಿ ನೇಪಾಲದಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಈವರೆಗೆ ಕನಿಷ್ಠ 20 ಮಂದಿ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. 250 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ.





