ಮದರಸಾಗಳಲ್ಲಿ ಮರಾಠಿ ಕಲಿಸಬೇಕು: ವಿವಾದಾತ್ಮಕ ಹೇಳಿಕೆ ನೀಡಿದ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ

Photo | indiatoday
ಮುಂಬೈ : ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಅವರು ಮದರಸಾಗಳಲ್ಲಿ ಉರ್ದು ಬದಲು ಮರಾಠಿಯಲ್ಲಿ ಕಲಿಸಬೇಕು ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.
ಮುಂಬೈನ ಆಯ್ದ ಪ್ರದೇಶಗಳಲ್ಲಿ ಕಾಂಗ್ರೆಸ್ ಮರಾಠಿ ಪಾಠಶಾಲೆಗಳನ್ನು ಪ್ರಾರಂಭಿಸುತ್ತದೆ ಎಂಬ ವರದಿ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ, ಕಾಂಗ್ರೆಸ್ ಮರಾಠಿ ಶಾಲೆಗಳನ್ನು ಪ್ರಾರಂಭಿಸುವ ಅಗತ್ಯವೇನಿದೆ? ಪ್ರತಿಪಕ್ಷಗಳು ಮುಸ್ಲಿಮರಲ್ಲಿ ಮರಾಠಿಯಲ್ಲಿ ಆಝಾನ್ ನೀಡುವಂತೆ ಆಗ್ರಹಿಸಬೇಕು. ಪ್ರತ್ಯೇಕ ಮರಾಠಿ ಶಾಲೆಗಳ ಅಗತ್ಯವಿಲ್ಲ. ಮದರಸಾಗಳಲ್ಲಿ ಉರ್ದು ಭಾಷೆ ಬದಲಿಗೆ ಮರಾಠಿಯನ್ನು ಕಲಿಸಬೇಕು, ಮದರಸಾದ ಧರ್ಮಗುರುಗಳಿಗೆ ಮರಾಠಿಯಲ್ಲಿ ಕಲಿಸುವಂತೆ ಹೇಳಿ, ಆಗ ನಿಜವಾದ ಶಿಕ್ಷಣ ಅಲ್ಲಿ ಸಿಗುತ್ತದೆ. ಇಲ್ಲದಿದ್ದರೆ, ಅಲ್ಲಿಂದ ಸಿಗುವುದೆಲ್ಲ ʼಬಂದೂಕುʼ ಮಾತ್ರ ಎಂದು ಸಚಿವ ನಿತೇಶ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಣೆ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ʼಮಹಾರಾಷ್ಟ್ರದಲ್ಲಿ ಕೆಲವು ಬಿಜೆಪಿ ನಾಯಕರು ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ. ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳನ್ನು ತಡೆಯುವುದು ಮುಖ್ಯಮಂತ್ರಿಯ ಜವಾಬ್ದಾರಿಯಾಗಿದೆʼಎಂದು ಎಐಎಂಐಎಂ ನಾಯಕ ವಾರಿಸ್ ಪಠಾಣ್ ಹೇಳಿದರು.





