ಅಸ್ಸಾಮಿನಲ್ಲಿ ಮರುಕಳಿಸಿದ ‘ನಿರ್ಭಯಾ’ ಪ್ರಕರಣ | 15ರ ಹರೆಯದ ಬಾಲಕಿಯ ಕ್ರೂರ ಹತ್ಯೆ

Photo Credit: NDTV
ಗುವಾಹಟಿ: ಇಡೀ ದೇಶವನ್ನೇ ನಡುಗಿಸಿದ್ದ ದಿಲ್ಲಿಯ ‘ನಿರ್ಭಯಾ’ ಹತ್ಯಾಚಾರ ಪ್ರಕರಣವನ್ನು ನೆನಪಿಸುವ ಬರ್ಬರ ಘಟನೆ ಅಸ್ಸಾಮಿನ ಹೈಲಾಕಂಡಿ ಜಿಲ್ಲೆಯಲ್ಲಿ ನಡೆದಿದೆ. 15ರ ಹರೆಯದ ಬಾಲಕಿಯ ಮೇಲೆ ಆಕೆಯ ಮನೆಯಲ್ಲಿಯೇ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಅಸ್ಸಾಂ ಮತ್ತು ಮಿಜೋರಾಂ ಅನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ-6 ರಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆಯನ್ನು ನಡೆಸಿದ್ದಾರೆ.
ಆಗಸ್ಟ್ 1ರಂದು ರಾತ್ರಿ ಸುಮಾರು 11.30ಕ್ಕೆ ಕಟ್ಲಿಚೇರಾ ಪೊಲೀಸ್ ಔಟ್ಪೋಸ್ಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-6ರ ಸಮೀಪವಿರುವ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.
ಬಾಲಕಿಯ ಕುಟುಂಬದ ಸದಸ್ಯರು ಮನೆಯಲ್ಲಿರದ ಸಮಯದಲ್ಲಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಬಾಲಕಿ ತನ್ನ ಕುಟುಂಬದೊಂದಿಗೆ ಸಮೀಪದ ಸಂಬಂಧಿಕರ ಮನೆಯ ಔತಣಕೂಟಕ್ಕೆ ತೆರಳಿದ್ದಳು. ಆದರೆ ಸೋದರ ಸಂಬಂಧಿ ಜೊತೆ ಗಲಾಟೆಯ ಬಳಿಕ ಆಕೆ ಒಬ್ಬಳೇ ಮನೆಗೆ ಹಿಂತಿರುಗಿದ್ದಳು.
ಕುಟುಂಬದವರು ತಡರಾತ್ರಿ ಮನೆಗೆ ಮರಳಿದಾಗ ಆಕೆಯ ಮೃತದೇಹ ಕಂಡುಬಂದಿತ್ತು.
ಬಾಲಕಿಯ ತಲೆ ಮತ್ತು ಮುಖವನ್ನು ಎಷ್ಟು ಭೀಕರವಾಗಿ ಜಜ್ಜಲಾಗಿತ್ತೆಂದರೆ ಕುಟುಂಬದವರು ಆಕೆಯನ್ನು ಗುರುತಿಸುವುದೂ ಕಷ್ಟವಾಗಿತ್ತು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿಯು ತಿಳಿಸಿದೆ.
ಬಾಲಕಿಯ ಗುಪ್ತಾಂಗದಲ್ಲಿ ರಾಡ್ ತೂರಿಸಲಾಗಿದ್ದು, ಇದು ದಾಳಿಯ ಭೀಕರ ಕ್ರೌರ್ಯವನ್ನು ತೋರಿಸುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎನ್ನುವುದನ್ನು ಪೊಲೀಸರು ಅಧಿಕೃತವಾಗಿ ಇನ್ನೂ ಖಚಿತಪಡಿಸಿಲ್ಲ.
ಕೊಲೆಗೂ ಮುನ್ನ ಅತ್ಯಾಚಾರ ನಡೆದಿದೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಆದರೆ ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ತನಿಖಾಧಿಕಾರಿಗಳು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ಎಂದು ಎಸ್ಎಸ್ಪಿ ಅಮಿತಾಭ್ ಸಿನ್ಹಾ ತಿಳಿಸಿದ್ದಾರೆ.
ಪೋಲಿಸರು ಘಟನೆಯ ಕುರಿತು ಕೂಲಂಕಶ ತನಿಖೆ ನಡೆಸುತ್ತಿದ್ದಾರೆ.
ಹೆದ್ದಾರಿ ತಡೆ,ಐವರು ವಶಕ್ಕೆ
ಘಟನೆಯ ನಂತರ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿ-6ನ್ನು ತಡೆದು,ಅಪರಾಧಿಗಳನ್ನು ತಕ್ಷಣವೇ ಬಂಧಿಸಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಿಂದಾಗಿ ಅಸ್ಸಾಂ ಮತ್ತು ಮಿಜೋರಾಂ ನಡುವಿನ ಪ್ರಮುಖ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ನೂರಾರು ವಾಹನಗಳು ಗಂಟೆಗಟ್ಟಲೆ ನಿಲ್ಲುವಂತಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಲಾಕಂಡಿ ಪೊಲೀಸರು ಐವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.






