ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣ | ಜನಾರ್ದನ ರೆಡ್ಡಿ ದೋಷಿ ಎಂದ ಸಿಬಿಐ ನ್ಯಾಯಾಲಯ ; 7 ವರ್ಷ ಜೈಲು ಶಿಕ್ಷೆ

ಜನಾರ್ದನ ರೆಡ್ಡಿ
ಹೈದರಾಬಾದ್: ರಾಜಕೀಯ ಹಾಗೂ ಗಣಿಗಾರಿಕೆ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದ ಒಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ, ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ದೋಷಿಯೆಂದು ಪರಿಗಣಿಸಿ ನ್ಯಾಂಪಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ತೀರ್ಪು ನೀಡಿದೆ ಹಾಗೂ ಅವರಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.
ಜನಾರ್ದನ ರೆಡ್ಡಿ ಜೊತೆ ಇತರ ನಾಲ್ವರು ಆರೋಪಿಗಳ್ನು ಕೂಡಾ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದ್ದು, ಅವರಿಗೂ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜನಾರ್ದನ ರೆಡ್ಡಿ ಹಾಗೂ ಇತರ ಮೂವರು ಆರೋಪಿಗಳಿಗೆ ತಲಾ 10 ಸಾವಿರ ರೂ. ಹಾಗೂ ಓಎಂಸಿ ಕಂಪೆನಿಗೆ 1 ಲಕ್ಷ ರೂ. ದಂಡವನ್ನು ಕೂಡಾ ವಿಧಿಸಲಾಗಿದೆ.
ಪ್ರಾಥಮಿಕವಾಗಿ 2009ರಲ್ಲಿ ಈ ಪ್ರಕರಣ ದಾಖಲಾಗಿತ್ತು. ಸುಮಾರು 13 ವರ್ಷಗಳಿಂದ ವಿಚಾರಣೆ ನಡೆಯುತ್ತಿರುವ ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ 9 ಮಂದಿಯನ್ನು ಆರೋಪಿಗಳೆಂದು ಸಿಬಿಐ ಹೆಸರಿಸಿತ್ತು ಹಾಗೂ ನಾಲ್ಕು ದೋಷಾರೋಪಪಟ್ಟಿಗಳನ್ನು ಸಲ್ಲಿಸಿತ್ತು. ಪ್ರಕರಣದ 9 ಮಂದಿ ಆರೋಪಿಗಳ ಪೈಕಿ ಐದು ಮಂದಿ ದೋಷಿಗಳೆಂದು ನ್ಯಾಯಾಲಯ ಘೋಷಿಸಿದೆ.
ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಯ ಅವಧಿಯಲ್ಲಿ ನ್ಯಾಯಾಲಯವು 3400ಕ್ಕೂ ಅಧಿಕ ದಾಖಲೆಗಳನ್ನು ಪರಿಶೀಲಿಸಿತ್ತು ಹಾಗೂ 219 ಮಂದಿ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿತ್ತು.
ಓಎಂಸಿ ಸಂಸ್ಥೆಯ ವರಿಷ್ಠ ಗಾಲಿ ಜನಾರ್ದನ ರೆಡ್ಡಿ, ಓಎಂಸಿ ಆಡಳಿತ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ , ಜನಾರ್ದನ ರೆಡ್ಡಿಯವರ ಆಪ್ತ ಸಹಾಯಕ ಮೆಹಫಾಝ್ ಅಲಿ ಖಾನ್ ಹಾಗೂ ಆಂಧ್ರಪ್ರದೇಶ ಗಣಿಗಾರಿಕೆ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ.ರಾಜಗೋಪಾಲ್ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.
ಭಾರತೀಯ ದಂಡಸಂಹಿತೆಯ ಸೆಕ್ಷನ್ಗಳಾದ 120 ಬಿ (ಕ್ರಿಮಿನಲ್ ಸಂಚು), 420 (ವಂಚನೆ),409 (ಕ್ರಿಮಿನಲ್ಸ್ವರೂಪದ ವಿಶ್ವಾಸದ್ರೋಹ) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸಂಬಂಧಪಟ್ಟ ಸೆಕ್ಷನ್ಗಳಡಿ ಈ ದೋಷಾರೋಪಗಳನ್ನು ಹೊರಿಸಲಾಗಿತ್ತು.
ಆದರೆ ಈ ಪ್ರಕರಣದ ಇತರ ಆರೋಪಿಗಳಾದ ಆಂಧ್ರಪ್ರದೇಶದ ಮಾಜಿ ಗಣಿಗಾರಿಕೆ ಸಚಿವೆ ಸಿಬಿತಾ ಇಂದ್ರ ರೆಡ್ಡಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದಂ, ಐಎಎಸ್ ಅಧಿಕಾರಿಣಿ ವೈ.ಶ್ರೀಲಕ್ಷ್ಮೀ ಅವರನ್ನು ನ್ಯಾಯಾಲಯ ಈ ಮೊದಲೇ ದೋಷಮುಕ್ತಗೊಳಿಸಿತ್ತು. ಇನ್ನೋರ್ವ ಆರೋಪಿ, ಗಣಿ ಇಲಾಖೆ ಸಹಾಯಕ ನಿರ್ದೇಶಕ ಆರ್.ಲಿಂಗಾ ರೆಡ್ಡಿ ನಿಧನಹೊಂದಿದ್ದರು.
ಓಎಂಸಿ ಕಂಪೆನಿಯ ಗಣಿಗಾರಿಕೆ ಕಾರ್ಯಾಚರಣೆಗಳನ್ನು ಸಿಬಿಐ ಪರಿಶೀಲಿಸಲಾರಂಭಿಸಿದ ಬಳಿಕ ಪ್ರಕರಣದ ತನಿಖೆ ಆರಂಭಗೊಂಡಿತ್ತು. ವೈ.ಎಸ್.ರಾಜಶೇಖರ ರೆಡ್ಡಿ ಅವರು ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಾಲಿ ಜನಾರ್ದನರೆಡ್ಡಿ ಅವರ ಒಡೆತನದ ಒಬಳಾಪುರಂ ಮೈನಿಂಗ್ ಕಂಪೆನಿಯು ವಿಶೇಷ ಸವಲತ್ತುಗಳನ್ನು ಪಡೆದುಕೊಂಡಿತ್ತು. ಓಬಳಾಪುರಂ, ಡಿ.ಹಿರೇಹಾಲ ಹಾಗೂ ರಾಯದುರ್ಗ ಮಂಡಲಗಳಲ್ಲಿ ಓಎಂಸಿ ಕಂಪೆನಿಗೆ ಅಕ್ರಮವಾಗಿ 68.5 ಹೆಕ್ಟೇರ್ ಹಾಗೂ 39.5 ಹೆಕ್ಟೇರ್ಗಳ ಗಣಿಗಾರಿಕೆ ಲೀಸ್ಗಳನ್ನು ನೀಡಲಾಗಿತ್ತು. ಇದೇ ವೇಳೆ ಗಣಿಗಾರಿಕೆಗಾಗಿ ಲೀಸ್ ಗೆ ಅರ್ಜಿ ಸಲ್ಲಿಸಿದ್ದ ಇತರ 23 ಮಂದಿಯ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.
ಏನಿದು ಪ್ರಕರಣ?
ಆಂಧ್ರ-ಕರ್ನಾಟಕ ಗಡಿಯಲ್ಲಿರುವ ಒಬಳಾಪುರಂ ಬೆಟ್ಟದಲ್ಲಿ ಓಎಂಸಿ ನಡೆಸಿದ ಗಣಿಗಾರಿಕೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಅರಣ್ಯ ಇಲಾಖೆ, ಗಣಿ ಇಲಾಖೆಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಒಎಂಸಿ ಕಂಪೆನಿಯ ಅಕ್ರಮ ಗಣಿಗಾರಿಕೆಯಿಂದಾಗಿ ಸರಕಾರದ ಬೊಕ್ಕಸಕ್ಕೆ ಸುಮಾರು 884.13 ಕೋಟಿ ರೂ. ನಷ್ಟವಾಗಿದೆ ಹಾಗೂ 29 ಲಕ್ಷ ಟನ್ ಗೂ ಅಧಿಕ ಕಬ್ಬಿಣದ ಆದಿರನ್ನು ಲೂಟಿ ಮಾಡಲಾಗಿದೆ ಎಂದು ಸಿಬಿಐ ಆಪಾದಿಸಿತ್ತು.
ಸಿಬಿಐ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಂತೋಷಿ ಹಾಗೂ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ವಿಷ್ಣು ಮಾಜ್ಜಿ ವಾದಿಸಿದ್ದರು. ಈ ಪ್ರಕರಣದಲ್ಲಿ ಕೇವಲ ಗಣಿಗಾರಿಕೆಯ ನಿಯಮಗಳಷ್ಟೇ ಉಲ್ಲಂಘನೆಯಾಗಿಲ್ಲ, ಜೊತೆಗೆ ಅಧಿಕಾರ ಹಾಗೂ ಸಾರ್ವಜನಿಕ ವಿಶ್ವಾಸವನ್ನು ಲೆಕ್ಕಾಚಾರದೊಂದಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಆಪಾದಿಸಿದ್ದರು.