‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ | ಕಂದಹಾರ್ ವಿಮಾನ ಅಪಹರಣದ ರೂವಾರಿ ಭಯೋತ್ಪಾದಕ ಯೂಸುಫ್ ಅಝರ್ ನ ಹತ್ಯೆ

Credit | X/@adgpi
Read more at: https://www.deccanherald.com/india/jems-yusuf-azhar-wanted-terrorist-in-kandahar-hijacking-case-killed-in-operation-sindoor-3534713
ಹೊಸದಿಲ್ಲಿ: ಮೇ 7ರಂದು ಭಾರತೀಯ ಸೇನಾ ಪಡೆ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ದಾಳಿಯಲ್ಲಿ ಐಸಿ-814ರ ವಿಮಾನ ಅಪಹರಣ ಪ್ರಕರಣದಲ್ಲಿ ವಾಂಟೆಡ್ ಭಯೋತ್ಪಾದಕನಾಗಿದ್ದ ಮಝೂದ್ ಅಝರ್ ನ ಸಂಬಂಧಿ ಮುಹಮ್ಮದ್ ಯೂಸುಫ್ ಅಝರ್ ಸೇರಿದಂತೆ ಲಷ್ಕರ್ ಇ ತಯ್ಯಿಬಾ ಹಾಗೂ ಜೈಷೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ಒಟ್ಟು ಐದು ಮಂದಿ ವಾಂಟೆಡ್ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ವಾಯು ಪಡೆಯ ದಾಳಿಯಲ್ಲಿ ಹತರಾದ ಐವರು ಭಯೋತ್ಪಾದಕರಾದ ಯೂಸುಫ್ ಅಝರ್, ಮುಹಮ್ಮದ್ ಖದಿಯನ್ ಖಾಸ್, ಹಫೀಝ್ ಮುಹಮ್ಮದ್ ಜಮೀಲ್, ಖಾಲಿದ್ ಹಾಗೂ ಮುಹಮ್ಮದ್ ಹಸನ್ ಖಾನ್ ಅವರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಹಿರಿಯ ಸೇನಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಪಾಲ್ಗೊಳ್ಳುವ ಮೂಲಕ, ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂಬುದಕ್ಕೆ ಮತ್ತಷ್ಟು ಪುರಾವೆಗಳು ದೊರಕಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಬಹವಲ್ಪುರ್ ನಲ್ಲಿ ಭಾರತೀಯ ವಾಯು ಪಡೆಯ ದಾಳಿಯಲ್ಲಿ ಹತರಾದ ಯೂಸುಫ್ ಅಝರ್ ಹಾಗೂ ಜಮೀಲ್ ಮಸೂದ್ ಅಝರ್ ನ ಭಾಮೈದುನರಾಗಿದ್ದು, ಆತ ಜೈಷೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಚಟುವಟಿಕೆಗಳಲ್ಲಿ ಪಾತ್ರ ವಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಸಿ-814 ವಿಮಾನ ಅಪಹರಣ ಪ್ರಕರಣದ ಸೂತ್ರಧಾರನಾಗಿದ್ದ ಯೂಸುಫ್ ಅಝರ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಜೈಷೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಶಸ್ತ್ರಾಸ್ತ್ರ ತರಬೇತಿಯನ್ನು ನಿರ್ವಹಿಸುತ್ತಿದ್ದನು. ಆತನನ್ನು ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ್ದ 21 ಮಂದಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯ ಅಧಿಸೂಚನೆಯಲ್ಲಿ ಆತ 21ನೇ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮೀಲ್, ಮಸೂದ್ ಅಝರ್ ನ ಹಿರಿಯ ಭಾಮೈದುನನಾಗಿದ್ದು, ಆತ ಜೈಷೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯ ಕಚೇರಿಯಾದ ಮರ್ಕಝ್ ಸುಭಾನ್ ಅಲ್ಲಾ ಸಂಕೀರ್ಣದ ಉಸ್ತುವಾರಿಯಾಗಿದ್ದ. ಆತ ಯುವಕರಿಗೆ ಮೂಲಭೂತವಾದ ಪ್ರವಚನ ನೀಡುವುದರಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಹಾಗೂ ತನ್ನ ಭಯೋತ್ಪಾದಕ ಸಂಘಟನೆಗೆ ನಿಧಿ ಸಂಗ್ರಹಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ವಾಯು ಪಡೆ ನಡೆಸಿದ ದಾಳಿಯಲ್ಲಿ ಮುರ್ಡಿಕೆಯಲ್ಲಿನ ಮರ್ಕಝ್ ತಯ್ಯಿಬಾದ ಉಸ್ತುವಾರಿಯಾಗಿದ್ದ ಲಷ್ಕರೆ ತಯ್ಯಿಬಾ ಸಂಘಟನೆಯ ಭಯೋತ್ಪಾದಕ ಮುದಸ್ಸರ್ ಖದಿಯಾನ್ ಖಾಸ್ ಕೂಡಾ ಹತನಾಗಿದ್ದಾನೆ. ಆತನ ಅಂತ್ಯಕ್ರಿಯೆಯ ವೇಳೆ ಪಾಕಿಸ್ತಾನದ ಅಧಿಕಾರಿಗಳಿಂದ ಗೌರವ ವಂದನೆ ಸಲ್ಲಿಸಲಾಗಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಹಾಗೂ ಪಂಜಾಬ್ (ಪಾಕಿಸ್ತಾನ) ಮುಖ್ಯಮಂತ್ರಿ ಮರ್ಯಮ್ ನವಾಝ್ ಪರವಾಗಿ, ಆತನ ಪಾರ್ಥಿವ ಶರೀರದ ಮೇಲೆ ಪುಷ್ಪಗುಚ್ಛವಿರಿಸಲಾಗಿತ್ತು ಎಂದೂ ಅಧಿಕಾರಿಗಳು ಹೇಳಿದ್ದಾರೆ