'ಓರ್ವ ಮನುಷ್ಯ ಮತ್ತೊಬ್ಬನನ್ನು ಬಂಡಿಯಲ್ಲಿ ಎಳೆಯುವ ಪದ್ಧತಿ ಅಮಾನವೀಯವಾದುದು': ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ (Photo credit: PTI)
ಹೊಸದಿಲ್ಲಿ : ಸ್ವಾತಂತ್ರ್ಯದ 78 ವರ್ಷಗಳ ನಂತರ ಕೈಯಿಂದ ಎಳೆಯುವ ಬಂಡಿಗಳು ಅಥವಾ ರಿಕ್ಷಾಗಳ ಪದ್ಧತಿ ಮುಂದುವರೆದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೈಯಿಂದ ರಿಕ್ಷಾ ಎಳೆಯುವುದು ಅಮಾನವೀಯ ಮತ್ತು ಅದನ್ನು ರದ್ದುಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರದ ಮಥೇರನ್ ಬೆಟ್ಟದಲ್ಲಿ ಪ್ರಾಯೋಗಿಕ ಇ-ರಿಕ್ಷಾ ಯೋಜನೆಯ ಕುರಿತಾದ ಸಮಸ್ಯೆಗಳನ್ನು ಸಿಜೆಐ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠ ವಿಚಾರಣೆ ನಡೆಸಿದೆ. ಮಾಥೇರನ್ನಲ್ಲಿ ಕೈಯಿಂದ ಎಳೆಯುವ ರಿಕ್ಷಾಗಳನ್ನು ನಿಷೇಧಿಸಿದೆ.
ಸ್ವಾತಂತ್ರ್ಯದ 78 ವರ್ಷಗಳ ನಂತರವೂ ಕೈಯಿಂದ ಎಳೆಯುವ ಬಂಡಿಗಳ ಪದ್ಧತಿ ಮುಂದುವರಿದಿದೆ ಎಂಬ ಬಗ್ಗೆ ನ್ಯಾಯಾಲಯ ಗಂಭೀರ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಇದು ವ್ಯಕ್ತಿಗಳ ಘನತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು ಎಂದು ಹೇಳಿದೆ.
ಜೀವನೋಪಾಯಕ್ಕಾಗಿ ಜನರು ಇಂತಹ ಅಮಾನವೀಯ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಮಾನವ ಘನತೆಯ ಮೂಲ ಪರಿಕಲ್ಪನೆಗೆ ವಿರುದ್ಧವಾದ ಇಂತಹ ಪದ್ಧತಿಯನ್ನು ಅನುಮತಿಸುವುದು ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಸಾಂವಿಧಾನಿಕ ಭರವಸೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಆಝಾದ್ ರಿಖಾ ಪುಲ್ಲರ್ಸ್ ಯೂನಿಯನ್ vs ಪಂಜಾಬ್ ರಾಜ್ಯ ಮತ್ತು ಇತರೆ ಪ್ರಕರಣದ ತೀರ್ಪನ್ನು ಪೀಠವು ಉಲ್ಲೇಖಿಸಿದೆ. ಎಳೆಯುವ ಸೈಕಲ್ ರಿಕ್ಷಾಗಳನ್ನು ಅನುಮತಿಸುವುದು ಸಾಮಾಜಿಕ ನ್ಯಾಯದ ಭರವಸೆಗೆ ಹೊಂದಿಕೆಯಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.







