ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತಕ್ಕೆ ರಾಹುಲ್ ಗಾಂಧಿ ಸಂತಾಪ
ಸಂತ್ರಸ್ತರ ಕುಟಂಬಗಳಿಗೆ ಸೂಕ್ತ ನೆರವು ಮತ್ತು ಪರಿಹಾರ ಒದಗಿಸುವಂತೆ ರಾಜ್ಯ ಸರಕಾರಕ್ಕೆ ಸೂಚನೆ

ರಾಹುಲ್ ಗಾಂಧಿ | PC : PTI
ಬೆಂಗಳೂರು: ಐಪಿಎಲ್ ಕ್ರೀಡಾಕೂಟದ 18 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ವಿಜಯಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 11 ಮಂದಿ ಮೃತಪಟ್ಟು, 50 ಮಂದಿ ಗಾಯಗೊಂಡಿರುವ ಘಟನೆಯ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇದೊಂದು ಹೃದಯ ವಿದ್ರಾವಕ ಘಟನೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡಿರುವ ಎಲ್ಲರೂ ಶೀಘ್ರ ಹಾಗೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದು ಹೇಳಿದ್ದಾರೆ.
“ಈ ನೋವಿನ ಸಮಯದಲ್ಲಿ ನಾನು ಬೆಂಗಳೂರು ಜನತೆಯ ಜೊತೆ ನಿಲ್ಲುತ್ತೇನೆ. ತೊಂದರೆಗೀಡಾಗಿರುವ ಕುಟುಂಬಗಳಿಗೆ ಕರ್ನಾಟಕ ಸರಕಾರ ಎಲ್ಲ ಅಗತ್ಯ ನೆರವು ಮತ್ತು ಪರಿಹಾರಗಳನ್ನು ಒದಗಿಸಬೇಕು” ಎಂದು ಅವರು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ತಾಕೀತು ಮಾಡಿದ್ದಾರೆ.
“ಯಾವ ಸಂಭ್ರಮಾಚರಣೆಯೂ ಮನುಷ್ಯನ ಜೀವನಕ್ಕಿಂತ ಅಮೂಲ್ಯವಲ್ಲ. ಸಾರ್ವಜನಿಕ ಕಾರ್ಯಕ್ರಮಗಳ ಎಲ್ಲ ಸುರಕ್ಷತಾ ಶಿಷ್ಟಾಚಾರಗಳನ್ನು ಪರಾಮರ್ಶಿಸಬೇಕು ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜೀವ ಎಲ್ಲಕ್ಕಿಂತ ಮೊದಲಾಗಿದೆ” ಎಂದು ಅವರು ಕರೆ ನೀಡಿದ್ದಾರೆ.







