ರೈಲಿನಲ್ಲಿ ಗುಂಡಿಕ್ಕಿ ನಾಲ್ವರನ್ನು ಹತ್ಯೆಗೈದ ಪ್ರಕರಣ: ಆರೋಪಿ ಪೇದೆಯ ಮಾನಸಿಕ ಸ್ಥಿತಿ ಕುರಿತ ಹೇಳಿಕೆ ವಾಪಸ್ ಪಡೆದ ರೈಲ್ವೆ ಇಲಾಖೆ

ಆರೋಪಿ ಚೇತನ್ ಸಿಂಗ್ (Twitter)
ಹೊಸದಿಲ್ಲಿ: ಜೈಪುರ್-ಮುಂಬೈ ರೈಲಿನಲ್ಲಿ ಇತ್ತೀಚೆಗೆ ಪಾಲ್ಘರ್ ಸಮೀಪ ತನ್ನ ಹಿರಿಯ ಸಹೋದ್ಯೋಗಿ ಸಹಿತ ನಾಲ್ಕು ಮಂದಿಯನ್ನು ಗುಂಡಿಕ್ಕಿ ಸಾಯಿಸಿದ ರೈಲ್ವೆ ಪೊಲೀಸ್ ಪಡೆಯ ಕಾನ್ಸ್ಟೇಬಲ್ ಚೇತನ್ ಸಿಂಗ್ಗೆ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆ ಇರುವ ಬಗ್ಗೆ ಆತನ ಕೊನೆಯ ನಿಯಮಿತ ವೈದ್ಯಕೀಯ ತಪಾಸಣೆಯ ವೇಳೆ ಪತ್ತೆಯಾಗಿರಲಿಲ್ಲ ಎಂದು ಬುಧವಾರ ರೈಲ್ವೆ ಇಲಾಖೆ ಹೇಳಿಕೆ ಬಿಡುಗಡೆಗೊಳಿಸಿದರೂ ನಂತರ ಅದನ್ನು ವಾಪಸ್ ಪಡೆದುಕೊಂಡಿದೆ. ಇದಕ್ಕೆ ಯಾವುದೇ ಕಾರಣವನ್ನು ರೈಲ್ವೆ ಇಲಾಖೆ ನೀಡಿಲ್ಲ.
ಆರೋಪಿ ಕಾನ್ಸ್ಟೇಬಲ್ ಗಂಭೀರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆಂಬ ಮಾಧ್ಯಮ ವರದಿಗಳ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ರೈಲ್ವೆ ಸಚಿವಾಲಯ ಈ ವಿಚಾರವನ್ನು ಸರಕಾರಿ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದಷ್ಟೇ ಹೇಳಿತ್ತು.
ಜುಲೈ 31ರಂದು ನಡೆದ ಘಟನೆಯಲ್ಲಿ ಆರೋಪಿ ಚೇತನ್ ಸಿಂಗ್ ತನ್ನ ಎಆರ್ಎಂ ರೈಫಲ್ (ಎಕೆ-47) ನಿಂದ ತನ್ನ ಹಿರಿಯ ಸಹೋದ್ಯೋಗಿ ಎಎಸ್ಐ ಮೀನಾ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿದ್ದ.
ಆತನನ್ನು ತಕ್ಷಣ ವಶಪಡಿಸಿ ಬಂಧಿಸಲಾಗಿತ್ತು. ರೈಲ್ವೆ ಪೊಲೀಸ್ ಪಡೆಯ ಎಡಿಜಿಯ ನೇತೃತ್ವದ ತಂಡ ಘಟನೆಯ ತನಿಖೆ ನಡೆಸುತ್ತಿದೆ.





