ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ : ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈಗೆ SIT ಕ್ಲೀನ್ ಚಿಟ್

Photo credit | PTI
ಹೊಸದಿಲ್ಲಿ : ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ತನ್ನ ಮೊದಲ ವರದಿಯಲ್ಲಿ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ hindustantimes ವರದಿ ಮಾಡಿದೆ.
ಎಸ್ಐಟಿ ವರದಿಯನ್ನು ಗೃಹ ಇಲಾಖೆ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಹಸ್ತಾಂತರಿಸಿದೆ. ಅಂತಿಮ ವರದಿಯಲ್ಲಿ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮತ್ತು ಮಾಜಿ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಹೆಸರಿಲ್ಲ ಎಂದು ತಿಳಿದು ಬಂದಿದೆ.
ದೇವಸ್ಥಾನದ ದೇಣಿಗೆಗೆ ಸಂಬಂಧಿಸಿದ ಅಕ್ರಮಗಳ ಕುರಿತ ಆರೋಪಗಳ ಹಿನ್ನೆಲೆ ಚಂಪತ್ ರೈ ಮತ್ತು ಅನಿಲ್ ಮಿಶ್ರಾ ಜೂನ್ 27 ರಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ರಾಜೀನಾಮೆ ನೀಡಿದ್ದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮನವಿಯ ಮೇರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ನಿರ್ದೇಶನದಂತೆ ಎಸ್ಐಟಿಯನ್ನು ಜೂನ್ 13 ರಂದು ರಚಿಸಲಾಗಿತ್ತು. ಇದರ ನೇತೃತ್ವವನ್ನು ಲಕ್ನೋ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಅವರಿಗೆ ವಹಿಸಲಾಗಿತ್ತು. ಲಕ್ನೋ ವಲಯ ಐಜಿಪಿ ಕಿರಣ್ ಎಸ್ ಮತ್ತು ಹಣಕಾಸು ಇಲಾಖೆ ವಿಶೇಷ ಕಾರ್ಯದರ್ಶಿ ನೀಲ್ ರತನ್ ಕುಮಾರ್ ಸದಸ್ಯರಾಗಿದ್ದರು.
ಜೂನ್ 23 ರಂದು ಎಸ್ಐಟಿ ಈ ಕುರಿತು ಪ್ರಾಥಮಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಜೂನ್ 25 ರಂದು ಅಯೋಧ್ಯೆಯಲ್ಲಿ ಎಫ್ಐಆರ್ ದಾಖಲಾಗಿತ್ತು.






