TMC ವಿವಾದ: ಪಕ್ಷದ ಹೆಸರು, ಚುನಾವಣಾ ಚಿಹ್ನೆ ಬಳಸದಂತೆ ಎರಡೂ ಬಣಗಳಿಗೆ ಚುನಾವಣಾ ಆಯೋಗ ಸೂಚನೆ

Photo: x.com/IndiaToday
ಹೊಸದಿಲ್ಲಿ / ಕೊಲ್ಕತ್ತಾ: ಮಮತಾ ಬ್ಯಾನರ್ಜಿ ಹಾಗೂ ಅರೂಪ್ ರಾಯ್ ನೇತೃತ್ವದ ಬಣಗಳ ನಡುವಿನ ಒಡಕನ್ನು ಅಧಿಕೃತವಾಗಿ ಅಂಗೀಕರಿಸಿರುವ ಚುನಾವಣಾ ಆಯೋಗ, ಅಂತಿಮ ತೀರ್ಪು ಹೊರಬರುವವರೆಗೆ ಎರಡೂ ಬಣಗಳು ಪಕ್ಷದ ಹೆಸರು ಅಥವಾ ಚುನಾವಣಾ ಚಿಹ್ನೆಯನ್ನು ಬಳಸುವಂತಿಲ್ಲ ಎಂದು ನಿರ್ದೇಶಿಸಿದೆ.
ಅಕ್ಟೋಬರ್ 6ರಂದು ನಡೆಯಲಿರುವ ರೆಜಿನಗರ ಮತ್ತು ನಂದಿಗ್ರಾಮ ವಿಧಾನಸಭಾ ಉಪಚುನಾವಣೆಗಳಲ್ಲಿ ಎರಡೂ ಬಣಗಳು ಟಿಎಂಸಿ ಹೆಸರಿನಲ್ಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಈ ನಿರ್ದೇಶನ ಹೊರಬಿದ್ದಿದೆ.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ನ ಮೀಸಲು ಚುನಾವಣಾ ಚಿಹ್ನೆಯಾದ ‘ಹೂವು ಮತ್ತು ಹುಲ್ಲು’ ಗುರುತನ್ನು ತಡೆಹಿಡಿದಿರುವ ಚುನಾವಣಾ ಆಯೋಗ, ಎರಡೂ ಬಣಗಳು ಎಐಟಿಸಿಗೆ ಹೊಂದಿಕೆಯಾಗುವ ಪ್ರತ್ಯೇಕ ಹೆಸರನ್ನು ಹಾಗೂ ಆಯೋಗದ ಮುಕ್ತ ಚಿಹ್ನೆಗಳ ಪಟ್ಟಿಯಿಂದ ಚುನಾವಣಾ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಸೂಚಿಸಿದೆ.
ಆದ್ಯತೆಯ ಕ್ರಮದಲ್ಲಿ ತಲಾ ಮೂರು ಹೆಸರುಗಳು ಹಾಗೂ ಮೂರು ಚಿಹ್ನೆಗಳ ಆಯ್ಕೆಗಳನ್ನು ಶುಕ್ರವಾರ ಬೆಳಿಗ್ಗೆ 11 ಗಂಟೆಯೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಆಯೋಗವು ಹೆಸರು ಮತ್ತು ಚಿಹ್ನೆಗಳನ್ನು ಪರಿಶೀಲಿಸಿ ಹಂಚಿಕೆ ಮಾಡಿದ ಬಳಿಕವೇ ಚುನಾವಣಾಧಿಕಾರಿಗಳು ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ.
ಎರಡೂ ಬಣಗಳು ತಾವೇ “ನೈಜ” ಪಕ್ಷ ಎಂದು ಪ್ರತಿಪಾದಿಸುತ್ತಿರುವುದರಿಂದ, ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968ರ ಪ್ಯಾರಾಗ್ರಾಫ್ 15ರ ಅಡಿಯಲ್ಲಿ ಈ ವಿವಾದವನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ ಎಂದು ಆಯೋಗ ತಿಳಿಸಿದೆ. ಹಿಂದಿನ ನಿದರ್ಶನಗಳನ್ನು ಗಮನದಲ್ಲಿಟ್ಟುಕೊಂಡು ಎರಡೂ ಬಣಗಳಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಮಧ್ಯಂತರ ಕ್ರಮ ಕೈಗೊಳ್ಳಲಾಗಿದೆ.
ವಿವಾದದ ಮೂಲ
2026ರ ಜೂನ್ 5ರಂದು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಕೈಗೊಂಡ ನೇಮಕಾತಿಗಳ ಅಧಿಕಾರವನ್ನು ರಿತಬ್ರತ ಬ್ಯಾನರ್ಜಿ ಪ್ರಶ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಸಮಿತಿಯ ಅಧಿಕಾರಾವಧಿ 2025ರ ಫೆಬ್ರವರಿ 11ರಂದೇ ಮುಕ್ತಾಯಗೊಂಡಿದೆ ಎಂದು ವಾದಿಸಿದ ಅವರ ಬಣ, ಜೂನ್ 22ರಂದು ಅರೂಪ್ ರಾಯ್ ನೇತೃತ್ವದಲ್ಲಿ ಸಮಿತಿಯನ್ನು ಪುನರ್ ರಚಿಸಿತು.
ಆದರೆ, ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಅವಧಿ ಐದು ವರ್ಷಗಳಾಗಿದ್ದು, ಅದು 2027ರವರೆಗೆ ಮುಂದುವರಿಯಲಿದೆ ಎಂದು ಮಮತಾ ಬಣ ಪ್ರತಿಪಾದಿಸಿದೆ. ಸದ್ಯ ಎರಡೂ ಬಣಗಳು ಆಯೋಗದ ಮುಂದೆ ತಮ್ಮ ವಾದಗಳನ್ನು ಮಂಡಿಸಿವೆ.






