ಸೂಫಿ ಸಂತರಿಗೆ ಸಂಘಪರಿವಾರದಿಂದ ಮರು ನಾಮಕರಣ: ಸಾರ್ವಜನಿಕರಿಂದ ಉಪವಾಸ ಸತ್ಯಾಗ್ರಹ

ಅಹ್ಮದಾಬಾದ್: ಐನೂರು ವರ್ಷಗಳ ಹಿಂದೆ ನಿಧನರಾದ, ಹಿಂದೂ- ಮುಸ್ಲಿಮ್ ಸಾಮರಸ್ಯ ಸಾರಿದ ಇಲ್ಲಿನ ಸೂಫಿ ಸಂತ ಪೀರ್ ಇಮಾಮ್ ಶಾ ಬಾವ ಅವರಿಗೆ ಸಂಘಪರಿವಾರ ಸದ್ಗುರು ಹಂಸತೇಜಿ ಮಹಾರಾಜ್ ಎಂದು ಮರು ನಾಮಕರಣ ಮಾಡಿದೆ. ಇದರ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.
ಹಿಂದೂ-ಮುಸ್ಲಿಮ್ ಕೋಮು ಸಾಮರಸ್ಯದ ಸಂಕೇತವಾಗಿ ಪೀರ್ ಇಮಾಮ್ಶಾ ಬಾವ ಅವರ ಮಂದಿರ ಅಹ್ಮದಾಬಾದ್ನ ಹೊರವಲಯದ ಪಿರಾನಾ ಗ್ರಾಮದಲ್ಲಿದೆ. ಪೀರ್ ಅವರ ವಂಶಸ್ಥರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಮಂದಿರವನ್ನು ಕೇಸರೀಕರಣಗೊಳಿಸುವ ಇನ್ನೊಂದು ಪ್ರಯತ್ನ ಎಂದು ಅವರು ಹೇಳಿದ್ದಾರೆ.
ಇದನ್ನು ವಿರೋಧಿಸಿ ಮಂದಿರದ ಎದುರು ಶುಕ್ರವಾರ ಅಪರಾಹ್ನದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಆಡಳಿತ ಕೂಡಲೇ ಮಧ್ಯೆ ಪ್ರವೇಶಿಸುವಂತೆ ಆಗ್ರಹಿಸಿ ತಮ್ಮ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಲಿದೆ ಎಂದು ಇಮಾಮ್ಶಾ ಬಾವ ರೋಜಾ ಸಂಸ್ಥಾನದ ಮೂವರು ಮುಸ್ಲಿಮ್ ಟ್ರಸ್ಟಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಉಪವಾಸ ಸತ್ಯಾಗ್ರಹ ನಡೆಸುವ 25 ಮಂದಿಗೆ ಭದ್ರತೆ ಒದಗಿಸುವಂತೆ ಕೂಡ ಈ ಮೂವರು ಟ್ರಸ್ಟಿಗಳು ಕೋರಿದ್ದಾರೆ.





