ಗೋ ಹತ್ಯೆ ಈದ್ ಹಬ್ಬದ ಭಾಗವಲ್ಲ: ಗೋಹತ್ಯೆ ನಿಯಂತ್ರಣ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಕಲ್ಕತ್ತಾ ಹೈಕೋರ್ಟ್

ಕಲ್ಕತ್ತಾ ಹೈಕೋರ್ಟ್ | Photo Credit : PTI
ಕೋಲ್ಕತ್ತಾ, ಮೇ 22: ಬಕ್ರೀದ್ (ಈದ್ ಅಲ್-ಅಝ್ಹಾ) ಹಬ್ಬಕ್ಕೆ ಮುನ್ನಾ ಪಶ್ಚಿಮ ಬಂಗಾಳ ಸರಕಾರ ಹೊರಡಿಸಿದ್ದ ಗೋಹತ್ಯೆ ನಿಯಂತ್ರಣ ಆದೇಶಕ್ಕೆ ತಡೆ ನೀಡಲು ಕಲ್ಕತ್ತಾ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ಎತ್ತುಗಳು, ಹಸುಗಳು, ಕರುಗಳು ಹಾಗೂ ಎಮ್ಮೆಗಳ ವಧೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮೇ 13ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರ ವಿಭಾಗೀಯ ಪೀಠ ವಜಾಗೊಳಿಸಿತು.
‘2018ರಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶ ಈಗಾಗಲೇ ಅಂತಿಮಗೊಂಡಿದೆ. ಆದ್ದರಿಂದ, ಮೇ 13ರಂದು ಹೊರಡಿಸಿದ ಆದೇಶವನ್ನು ತಡೆಹಿಡಿಯಲು ಅಥವಾ ರದ್ದುಪಡಿಸಲು ಯಾವುದೇ ಆಧಾರ ಇಲ್ಲ’ ಎಂದು ಪೀಠ ಹೇಳಿತು.
ರಾಜ್ಯ ಸರಕಾರ ಹೊರಡಿಸಿದ್ದ ಮಾರ್ಗಸೂಚಿಗಳ ಪ್ರಕಾರ, ಎತ್ತುಗಳು, ಹಸುಗಳು, ಕರುಗಳು ಹಾಗೂ ಎಮ್ಮೆಗಳನ್ನು ‘ವಧೆಗೆ ಯೋಗ್ಯವಲ್ಲ’ ಎಂಬ ಪ್ರಮಾಣಪತ್ರವಿಲ್ಲದೆ ವಧೆ ಮಾಡುವಂತಿಲ್ಲ. ಅಂತಹ ಪ್ರಾಣಿಗಳನ್ನು ಸರಕಾರ ಅನುಮೋದಿಸಿರುವ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಬೇಕು ಎಂದು ಸೂಚಿಸಲಾಗಿದೆ.
ಅಕ್ರಮ ವಧೆ ತಡೆಯಲು ಯಾವುದೇ ಸ್ಥಳವನ್ನು ಪರಿಶೀಲಿಸುವ ಅಧಿಕಾರವನ್ನೂ ಅಧಿಕಾರಿಗಳಿಗೆ ನೀಡಲಾಗಿದೆ.
ಈ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ನ್ಯಾಯಾಲಯ, ಪ್ರಾಣಿಗಳ ವಧೆಗೆ ಅಗತ್ಯ ಪ್ರಮಾಣಪತ್ರಗಳನ್ನು ನೀಡಲು ರಾಜ್ಯದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳಿವೆಯೇ ಎಂಬುದನ್ನು ಸರಕಾರ ಪರಿಶೀಲಿಸಬೇಕು ಎಂದು ಹೇಳಿತು.
ಒಂದು ಅರ್ಜಿಯಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಅಖ್ರುಝಮಾನ್, ಪಶ್ಚಿಮ ಬಂಗಾಳ ಪ್ರಾಣಿ ವಧೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ ಧಾರ್ಮಿಕ ಉದ್ದೇಶಗಳಿಗೆ ಸರಕಾರ ವಿನಾಯಿತಿ ನೀಡಿಲ್ಲ ಎಂದು ವಾದಿಸಿದ್ದರು.
ಬಕ್ರೀದ್ ಸಂದರ್ಭದಲ್ಲಿ ನಡೆಯುವ ಪ್ರಾಣಿ ಬಲಿಯನ್ನು ಕಾನೂನುಬದ್ಧವಾಗಿ ನಡೆಸಲು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದರು.
ಎಮ್ಮೆ ಅಥವಾ ಎತ್ತುಗಳಂತಹ ದೊಡ್ಡ ಪ್ರಾಣಿಗಳ ಬಲಿಯೇ ಅನೇಕ ಮುಸ್ಲಿಮರಿಗೆ ಆರ್ಥಿಕವಾಗಿ ಸಾಧ್ಯವಾಗುವ ಮಾರ್ಗವಾಗಿದೆ. ಬಕ್ರೀದ್ ಸಮಯದಲ್ಲಿ ಮೇಕೆ ಮತ್ತು ಕುರಿಗಳ ಬೆಲೆ ಭಾರೀ ಏರಿಕೆಯಾಗುವುದರಿಂದ ಅವುಗಳನ್ನು ಖರೀದಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಇದಕ್ಕೆ ವಿರುದ್ಧವಾಗಿ ಸಲ್ಲಿಕೆಯಾಗಿದ್ದ ಮತ್ತೊಂದು ಅರ್ಜಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳ ವಧೆ ನಿಷೇಧಿಸಬೇಕು ಹಾಗೂ ‘ಗೋ ಹತ್ಯೆ’ ಈದ್ ಹಬ್ಬದ ಭಾಗವಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಕೋರಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಲಯ, ‘ಗೋ ಹತ್ಯೆ ಈದ್-ಉಜ್-ಅಝ್ಹಾ ಹಬ್ಬದ ಭಾಗವಲ್ಲ ಮತ್ತು ಇಸ್ಲಾಂ ಧರ್ಮದ ಕಡ್ಡಾಯ ಧಾರ್ಮಿಕ ಆಚರಣೆಯೂ ಅಲ್ಲ’ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ ಎಂದು ಉಲ್ಲೇಖಿಸಿತು.
ಆದೇಶದಲ್ಲಿ ಈ ಅಂಶಗಳನ್ನು ಸೇರಿಸುವ ಬಗ್ಗೆ ರಾಜ್ಯ ಸರಕಾರ ಪರಿಗಣಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು. ಆದರೆ, ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ ವಿನಾಯಿತಿ ನೀಡುವ ಕುರಿತು ರಾಜ್ಯ ಸರಕಾರ ನಿರ್ಧಾರ ಕೈಗೊಳ್ಳಬಹುದು ಎಂದೂ ಪೀಠ ಹೇಳಿತು.






