EVM ತಿರುಚಲು ಯತ್ನಿಸಿದ್ದಾರೆ ಎಂದು ವೀಡಿಯೊ ಬಿಡುಗಡೆ ಮಾಡಿದ ಟಿಎಂಸಿ: ಭಬಾನಿಪುರದಲ್ಲಿ ಸ್ಟ್ರಾಂಗ್ ರೂಂ ಬಳಿ ಠಿಕಾಣಿ ಹೂಡಿದ ಮಮತಾ ಬ್ಯಾನರ್ಜಿ

Photo|timesofindia
ಹೊಸದಿಲ್ಲಿ, ಮೇ 1: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ಕೋಲ್ಕತ್ತಾದಲ್ಲಿ ಚುನಾವಣಾ ಆಯೋಗ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಡುವೆ ಉದ್ವಿಗ್ನತೆ ತಾರಕಕ್ಕೇರಿದೆ. ಇವಿಎಂಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್ಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಚುನಾವಣಾ ಅಧಿಕಾರಿಗಳು ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಕಾರ್ಯವಿಧಾನದ ಲೋಪಗಳನ್ನು ಉಲ್ಲೇಖಿಸಿದ ಟಿಎಂಸಿ ನಾಯಕರು, ಮಧ್ಯಾಹ್ನದವರೆಗೆ ಸ್ಟ್ರಾಂಗ್ ರೂಮ್ ಹೊರಗೆ ಹಾಜರಿದ್ದ ಕಾರ್ಯಕರ್ತರನ್ನು ತೆರಳುವಂತೆ ಸೂಚನೆ ನೀಡಲಾಗಿದೆ ಎಂದು ದೂರಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಸ್ಟ್ರಾಂಗ್ ರೂಮ್ ತೆರೆಯಲಾಗುತ್ತದೆ ಎಂಬ ಮಾಹಿತಿ ಇಮೇಲ್ ಮೂಲಕ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಟಿಎಂಸಿ ನಾಯಕ ಕುನಾಲ್ ಘೋಷ್, “ಕಾರ್ಯಕರ್ತರು ಮಧ್ಯಾಹ್ನ 3.30ರವರೆಗೆ ಅಲ್ಲಿದ್ದರು. ಹಠಾತ್ತಾಗಿ ಸಂಜೆ 4 ಗಂಟೆಗೆ ಸ್ಟ್ರಾಂಗ್ ರೂಮ್ ತೆರೆಯಲಾಗುತ್ತದೆ ಎಂಬ ಮಾಹಿತಿ ಬಂದಿದೆ. ಕಾರ್ಯಕರ್ತರು ಹೊರಟ ಬಳಿಕ ನಾವು ಸ್ಥಳಕ್ಕೆ ಧಾವಿಸಿದಾಗ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಬಿಜೆಪಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ,” ಎಂದು ಆರೋಪಿಸಿದರು.
ಟಿಎಂಸಿ ತನ್ನ ಎಕ್ಸ್ ಖಾತೆಯಲ್ಲಿ, “ಇದು ಪ್ರಜಾಪ್ರಭುತ್ವದ ಕೊಲೆ. ಬಿಜೆಪಿಯು ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿ ಇವಿಎಂಗಳನ್ನು ತಿರುಚುತ್ತಿದೆ ಎಂದು ಆರೋಪಿಸಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಲ್ಲದೆ ಮತಪೆಟ್ಟಿಗೆಗಳನ್ನು ತೆರೆಯಲಾಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ ಎಂದು ವೀಡಿಯೊ ಬಿಡುಗಡೆ ಮಾಡಿದೆ. ಇದನ್ನು “ಸಂಪೂರ್ಣ ಚುನಾವಣಾ ವಂಚನೆ” ಎಂದು ಟೀಕಿಸಿದೆ.
ಮತದಾರರನ್ನು ಬೆದರಿಸುವುದು, ಹೆಸರುಗಳನ್ನು ಅಳಿಸುವುದು ಮತ್ತು ಕೇಂದ್ರ ಪಡೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ, ಬಿಜೆಪಿ ಇವಿಎಂಗಳನ್ನು ತಿರುಚುವಂತಹ ಕ್ರಮಗಳಿಗೆ ಮುಂದಾಗಿದೆ ಎಂದು ಟಿಎಂಸಿ ಆರೋಪಿಸಿದೆ.
ಮಮತಾ ಭೇಟಿ, ಪರಿಸ್ಥಿತಿ ಉದ್ವಿಗ್ನ
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಧಾರಾಕಾರ ಮಳೆಯನ್ನು ಲೆಕ್ಕಿಸದೆ ಭಬಾನಿಪುರ ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್ ಗೆ ಭೇಟಿ ನೀಡಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಇವಿಎಂ ತಿರುಚುವ ಬಗ್ಗೆ ವರದಿಗಳು ಬಂದಿವೆ ಎಂದು ಅವರು ಹೇಳಿದರು.
“ಆರಂಭದಲ್ಲಿ ಕೇಂದ್ರ ಪಡೆಗಳು ಒಳಗೆ ಬಿಡಲಿಲ್ಲ. ಆದರೆ ನಿಯಮಗಳ ಪ್ರಕಾರ ಅಭ್ಯರ್ಥಿ ಮತ್ತು ಚುನಾವಣಾ ಏಜೆಂಟ್ಗಳಿಗೆ ಸ್ಟ್ರಾಂಗ್ ರೂಮ್ವರೆಗೆ ಪ್ರವೇಶವಿದೆ,” ಎಂದು ಅವರು ಹೇಳಿದರು. ಇದೇ ವೇಳೆ, ಶಾಂತಿ ಕಾಪಾಡಿಕೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಿದ ಅವರು, “ನಮಗೆ ಗೆಲುವು ಖಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಗಾಳ ಜನತೆ ಹೊರಗಿನ ಪ್ರಭಾವಗಳಿಗೆ ತಲೆಬಾಗುವುದಿಲ್ಲ ಎಂದು ಟಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ. ಫಲಿತಾಂಶಗಳ ನಂತರ ಪ್ರಜಾಪ್ರಭುತ್ವದ ಶಕ್ತಿಯಿಂದ ಪ್ರತಿಯೊಂದು ಉಲ್ಲಂಘನೆಗೂ ಉತ್ತರ ನೀಡಲಾಗುತ್ತದೆ ಎಂದು ಎಚ್ಚರಿಸಿದೆ.
ಬಿಜೆಪಿ ಪ್ರತಿವಾದ
ಟಿಎಂಸಿ ಪ್ರತಿಭಟನೆಗೆ ಬಿಜೆಪಿ ನಾಯಕರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಿಜೆಪಿ ನಾಯಕರು, ಸೂಕ್ಷ್ಮ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತರು ಗುಂಪುಗೂಡಲು ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
“ಟಿಎಂಸಿ ಸುಳ್ಳು ನಿರೂಪಣೆ ಮಾಡುತ್ತಿದೆ. ಕಾರ್ಯಕರ್ತರು ಅನಧಿಕೃತವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ,” ಎಂದು ಬಿಜೆಪಿ ನಾಯಕ ತಪಸ್ ರಾಯ್ ಹೇಳಿದರು. ಜಿಲ್ಲಾ ಚುನಾವಣಾ ಅಧಿಕಾರಿ ಟಿಎಂಸಿ ಅಭ್ಯರ್ಥಿಗಳಿಗೆ ಸ್ಟ್ರಾಂಗ್ ರೂಮ್ ಒಳಗಿನ ಪರಿಸ್ಥಿತಿಯನ್ನು ತೋರಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಟಿಎಂಸಿ ವಾಹನದಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಸಾಗಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಅದರ ಚಲನವಲನವನ್ನು ತಡೆದರು. “ವಾಹನದಲ್ಲಿ ಏನಿದೆ ಎಂಬುದು ತಿಳಿಯಬೇಕು,” ಎಂದು ಒತ್ತಾಯಿಸಿದರು.
ಚುನಾವಣಾ ಆಯೋಗದ ಸ್ಪಷ್ಟನೆ
ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಆರೋಪಗಳನ್ನು ತಳ್ಳಿಹಾಕಿ, “ಸ್ಟ್ರಾಂಗ್ ರೂಮ್ಗಳು ಸಂಪೂರ್ಣ ಸುರಕ್ಷಿತವಾಗಿವೆ. ಯಾವುದೇ ಸಿಸಿಟಿವಿ ಸ್ಥಗಿತಗೊಂಡಿಲ್ಲ. ಎಲ್ಲಾ ದೃಶ್ಯಾವಳಿಗಳು ನಿರಂತರವಾಗಿ ಪ್ರಸಾರವಾಗುತ್ತಿವೆ,” ಎಂದು ಹೇಳಿದರು.
“ಸಂಜೆ 4 ಗಂಟೆಯ ಸುಮಾರಿಗೆ ಅಂಚೆ ಮತಪತ್ರಗಳ ಕೊಠಡಿಯನ್ನು ನಿಯಮಾನುಸಾರ ತೆರೆಯಲಾಯಿತು. ಎಲ್ಲಾ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲಾಗಿತ್ತು. ಅಭ್ಯರ್ಥಿಗಳು ಬಂದು ಪರಿಶೀಲಿಸಿ ತೆರಳಿದ್ದಾರೆ,” ಎಂದು ಅವರು ವಿವರಿಸಿದರು. ಕಾನೂನು–ಸುವ್ಯವಸ್ಥೆ ಪರಿಸ್ಥಿತಿ ಸಮರ್ಪಕವಾಗಿದ್ದು, ಎಣಿಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ ಎಂದು ಹೇಳಿದರು.
ಹೈಕೋರ್ಟ್ನಲ್ಲಿ ಟಿಎಂಸಿ ಅರ್ಜಿ ವಜಾ
ಮತ ಎಣಿಕೆಗೆ ಕೇಂದ್ರ ಸರ್ಕಾರ ಮತ್ತು ಪಿಎಸ್ಯು ನೌಕರರನ್ನು ನಿಯೋಜಿಸುವ ಚುನಾವಣಾ ಆಯೋಗದ ನಿರ್ದೇಶನವನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ವಜಾಗೊಳಿಸಿದೆ. ಈ ನಿಯೋಜನೆ ಕಾನೂನುಬದ್ಧವಾಗಿದೆ ಎಂದು ನ್ಯಾಯಾಲಯ ಹೇಳಿ, 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ದೂರು ಸಲ್ಲಿಸಬಹುದೆಂದು ಸೂಚಿಸಿದೆ.
ತೀವ್ರ ಸ್ಪರ್ಧೆ
ಕೇಂದ್ರ–ರಾಜ್ಯ ಸಂಘರ್ಷ, ಮತದಾರರ ಪಟ್ಟಿಗಳ ಪರಿಷ್ಕರಣೆ ವಿವಾದ ಸೇರಿದಂತೆ ಹಲವು ಅಂಶಗಳಿಂದ ಬಂಗಾಳ ವಿಧಾನಸಭಾ ಚುನಾವಣೆ ತೀವ್ರ ಕಾಳಗವಾಗಿ ರೂಪುಗೊಂಡಿದೆ. ಬಹುತೇಕ ಎಕ್ಸಿಟ್ ಪೋಲ್ ಗಳು ಟಿಎಂಸಿ ಮತ್ತು ಬಿಜೆಪಿ ನಡುವೆ ಸಮಬಲ ಸ್ಪರ್ಧೆ ಇರುವುದಾಗಿ ಸೂಚಿಸಿದ್ದು, 294 ಸದಸ್ಯರ ವಿಧಾನಸಭೆಯಲ್ಲಿ ಎರಡೂ ಪಕ್ಷಗಳು ಸಮಾನ ಸಂಖ್ಯೆಯ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
❗️ALARMING❗️
— All India Trinamool Congress (@AITCofficial) April 30, 2026
This is the murder of democracy in broad daylight.
CCTV footage has exposed how @BJP4India, in active collusion with the @ECISVEEP, is opening ballot boxes without the presence of any relevant party stakeholders. This is gross electoral fraud being committed openly… pic.twitter.com/aSe36kGKPI
Our media-savvy @CEOWestBengal, Mr. Manoj Kumar Agarwal, should prioritise his constitutional mandate over late-night press conferences. While he is busy managing optics, @BJP4India has been caught on CCTV attempting to forcefully breach sealed ballot boxes at the Netaji Indoor… pic.twitter.com/saeBC7n9n5
— All India Trinamool Congress (@AITCofficial) April 30, 2026






