Tamil Nadu | ಉದ್ಯಮಿ ವೀರಮಣಿ ಲೈಂಗಿಕ ಹಗರಣ: ಲೋಕಲ್ ‘Epstein filesʼ ಎಂದ ಜನರು!

Photo Credit: thehindu
ಚೆನ್ನೈ: ತಮಿಳುನಾಡಿನ ಖ್ಯಾತ ಗ್ರಾನೈಟ್ ಉದ್ಯಮಿ ಆರ್. ವೀರಮಣಿ (84) ವಿರುದ್ಧ ದಾಖಲಾಗಿರುವ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದೀಗ ಮತ್ತಷ್ಟು ವಿಸ್ತರಿಸುತ್ತಿದೆ. ಪ್ರಕರಣದ ತನಿಖೆಯಲ್ಲಿ ಹಲವು ಸಂತ್ರಸ್ತರನ್ನು ಪೊಲೀಸರು ಗುರುತಿಸಿರುವ ಹಿನ್ನೆಲೆಯಲ್ಲಿ, ಇದು ಕೇವಲ ಒಂದು ಘಟನೆಯ ಪ್ರಕರಣವಲ್ಲ, ಹಲವು ವರ್ಷಗಳಿಂದ ನಡೆದಿರಬಹುದಾದ ಸರಣಿ ಲೈಂಗಿಕ ದೌರ್ಜನ್ಯಗಳು ಎಂಬ ಆರೋಪಗಳು ಕೇಳಿ ಬಂದಿವೆ.
ಪ್ರಕರಣದ ತನಿಖೆ ಆರಂಭವಾಗಿದ್ದು 2025ರ ಅಕ್ಟೋಬರ್ ನಲ್ಲಿ. ಮಕ್ಕಳ ಹಕ್ಕುಗಳ ಕಾರ್ಯಕರ್ತರೊಬ್ಬರು ಚೆನ್ನೈ ಪೊಲೀಸರನ್ನು ಸಂಪರ್ಕಿಸಿ ಪೆನ್ ಡ್ರೈವ್ ಒಂದನ್ನು ಹಸ್ತಾಂತರಿಸಿದ್ದರು. ಅದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ದೃಶ್ಯವಿತ್ತು ಎಂದು ಆರೋಪಿಸಲಾಗಿತ್ತು. ದೃಶ್ಯದಲ್ಲಿದ್ದ ವ್ಯಕ್ತಿ ವೀರಮಣಿ ಹಾಗೂ ಘಟನೆ ಚೆನ್ನೈನ ಟೇಯ್ನಾಂಪೇಟ್ ನ ಮನೆಯೊಂದರಲ್ಲಿ ನಡೆದಿದೆ ಎಂದು ಮಾಹಿತಿ ನೀಡಲಾಗಿತ್ತು.
ವೀಡಿಯೊದಲ್ಲಿದ್ದ ದೃಶ್ಯಕ್ಕೆ 2019ರ ದಿನಾಂಕದ CCTV ಟೈಮ್ ಸ್ಟಾಂಪ್ ಇತ್ತು ಎಂದು ತನಿಖೆಯಲ್ಲಿ ಹೇಳಲಾಗಿದೆ. ವೀಡಿಯೊ ಪರಿಶೀಲಿಸಿದ ಬಳಿಕ ಪೊಲೀಸರು 2025ರ ಅಕ್ಟೋಬರ್ 7ರಂದು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ತನಿಖೆಯ ಸಂದರ್ಭದಲ್ಲಿ ವೀರಮಣಿಯನ್ನು ವೀಡಿಯೊದಲ್ಲಿದ್ದ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದರು ಎಂದು ನಂತರದ ಪೊಲೀಸ್ ಮಾಹಿತಿ ಹೇಳುತ್ತದೆ. ಆದರೆ ವೀರಮಣಿ ಹಾಗೂ ಅವರ ಸಹಚರಿ ಶಾಂತಿ ಆರೋಪಗಳನ್ನು ನಿರಾಕರಿಸಿದ್ದರು. ವೀಡಿಯೊದಲ್ಲಿರುವ ವ್ಯಕ್ತಿ ತಾವಲ್ಲ ಎಂದು ಅವರು ಹೇಳಿದ್ದರು.
►ಪ್ರಕರಣ ಮುಚ್ಚಲು ಪೊಲೀಸರ ಪ್ರಯತ್ನ?
FIR ದಾಖಲಾದ ಬಳಿಕ ಪ್ರಕರಣದ ತನಿಖೆ ಮುಂದುವರಿದರೂ, ವೀಡಿಯೊದಲ್ಲಿದ್ದ ಬಾಲಕಿಯ ಗುರುತು ಹಾಗೂ ಆಕೆಯಿರುವ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದರು.
ಇದರ ನಡುವೆ, ಮೂಲ ವೀಡಿಯೊಗೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯ, CCTV ದೃಶ್ಯಗಳು ಹಾಗೂ ಇತರ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿಯೂ ತನಿಖಾ ತಂಡಕ್ಕೆ ಸಮಸ್ಯೆಗಳು ಎದುರಾಗಿದ್ದವು ಎಂದು ಹಿಂದಿನ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಹಲವು ವರ್ಷಗಳ ನಂತರ ಮೂಲ DVRನಿಂದ ದಾಖಲೆಗಳನ್ನು ಮರುಪಡೆಯಲು ಸೈಬರ್ ತಜ್ಞರಿಗೆ ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದರು.
2026ರ ಫೆಬ್ರವರಿಯಲ್ಲಿ ಚೆನ್ನೈ ಪೊಲೀಸರ Anti-Vice Squad ಪ್ರಕರಣದಲ್ಲಿ ಮುಂದಿನ ಕ್ರಮ ಕೈಗೊಳ್ಳದಂತೆ ವರದಿ ಸಲ್ಲಿಸಿತ್ತು. ಬಾಲಕಿಯನ್ನು ಗುರುತಿಸಲು ಅಥವಾ ಪತ್ತೆಹಚ್ಚಲು ಸಾಧ್ಯವಾಗದಿರುವುದು ಹಾಗೂ ಆರೋಪಕ್ಕೆ ಸಾಕಷ್ಟು ಪೂರಕ ಸಾಕ್ಷ್ಯ ಇಲ್ಲದಿರುವುದನ್ನು ಪೊಲೀಸರು ಕಾರಣವಾಗಿ ಮುಂದಿಟ್ಟಿದ್ದರು.
ಆದರೆ Special POCSO Court ಪ್ರಕರಣ ಮುಕ್ತಾಯಗೊಳಿಸುವ ವರದಿ ಒಪ್ಪಲಿಲ್ಲ. ವೀಡಿಯೊ ಪೊಲೀಸರ ಬಳಿ ಇರುವಾಗಲೂ ಆರೋಪಿತ ಘಟನೆ ನಡೆದ ಸ್ಥಳವನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳಿಗೆ ಸಾಧ್ಯವಾಗದಿರುವ ಬಗ್ಗೆ ನ್ಯಾಯಾಲಯ ಪ್ರಶ್ನಿಸಿತ್ತು. ಪ್ರಕರಣದಲ್ಲಿ ಮತ್ತಷ್ಟು ತನಿಖೆ ನಡೆಸುವಂತೆ ನ್ಯಾಯಾಲಯ ಸೂಚಿಸಿತ್ತು. ಇದರ ಬಳಿಕ ತನಿಖೆಯನ್ನು ಮರುಚುರುಕುಗೊಳಿಸಲಾಯಿತು.
ಮರುತನಿಖೆಯ ಸಂದರ್ಭದಲ್ಲಿ ಪೊಲೀಸರು ಟೇಯ್ನಾಂಪೇಟ್ ನಲ್ಲಿರುವ ವೀರಮಣಿಗೆ ಸಂಬಂಧಿಸಿದ ಮನೆಯೊಂದರಲ್ಲಿ ಶೋಧ ನಡೆಸಿದರು. ತನಿಖಾಧಿಕಾರಿಗಳ ಪ್ರಕಾರ, ಎಲೆಕ್ಟ್ರಾನಿಕ್ ಸಾಧನವೊಂದರಲ್ಲಿ ಆರೋಪಿತ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಮೂಲ ದೃಶ್ಯಗಳು ಪತ್ತೆಯಾಗಿವೆ.
ಪೊಲೀಸರು ವಶಪಡಿಸಿಕೊಂಡ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ತಿರುಚಲು ಪ್ರಯತ್ನ ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
►ಪ್ರಕರಣ ದಾಖಲಾದ 11 ತಿಂಗಳ ಬಳಿಕ ಬಂಧನ
ಪ್ರಕರಣ ದಾಖಲಾಗಿದ್ದ ಸುಮಾರು 11 ತಿಂಗಳ ಬಳಿಕ, 2026ರ ಆಗಸ್ಟ್ 29ರಂದು ವೀರಮಣಿಯನ್ನು ಪೊಲೀಸರು ಬಂಧಿಸಿದರು. ಅವರ ಜತೆಗೆ ಘಟನೆ ನಡೆದಿದ್ದ ಮನೆಯಲ್ಲಿ ವಾಸಿಸುತ್ತಿದ್ದ ಶಾಂತಿ (50) ಹಾಗೂ ಆಕೆಯ ಪತಿ ಮಹೇಂದ್ರ ಸಿಮ್ಹನ್ (56) ಅವರನ್ನೂ ಬಂಧಿಸಲಾಯಿತು.
ಪೊಲೀಸರ ಪ್ರಕಾರ, ಟೇಯ್ನಾಂಪೇಟ್ ನ ಮನೆಯನ್ನು ವೀರಮಣಿ ಬಾಡಿಗೆಗೆ ಪಡೆದುಕೊಂಡಿದ್ದು, ಅದರ ನಿರ್ವಹಣೆಯನ್ನು ಶಾಂತಿ ಮತ್ತು ಮಹೇಂದ್ರ ಸಿಮ್ಹನ್ ನೋಡಿಕೊಳ್ಳುತ್ತಿದ್ದರು. ಆರೋಪಿತ ಅಪರಾಧಗಳಿಗೆ ಸಹಾಯ ಮಾಡಿರುವುದು ಹಾಗೂ ಸಾಕ್ಷ್ಯಗಳನ್ನು ಮುಚ್ಚಿಹಾಕಲು ಅಥವಾ ನಾಶಪಡಿಸಲು ಪ್ರಯತ್ನಿಸಿರುವ ಆರೋಪಗಳು ದಂಪತಿಯ ಮೇಲಿದೆ.
ತನಿಖೆಯ ಸಂದರ್ಭದಲ್ಲಿ ಇನ್ನೂ ಹಲವು ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರನ್ನು ಪೊಲೀಸರು ಗುರುತಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅವರಲ್ಲಿ ಕೆಲವರು ಆರೋಪಿತ ಘಟನೆ ನಡೆದ ಸಂದರ್ಭದಲ್ಲಿ ಅಪ್ರಾಪ್ತರಾಗಿದ್ದರು ಎನ್ನಲಾಗಿದೆ. ಕೆಲವರು ಈಗಲೂ ಅಪ್ರಾಪ್ತರಾಗಿದ್ದಾರೆ. ಬಹುತೇಕ ಸಂತ್ರಸ್ತರು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸೇರಿದವರು ಎಂದು ಪೊಲೀಸರು ಹೇಳಿದ್ದಾರೆ. ಅವರ ಹೇಳಿಕೆಗಳನ್ನು ನ್ಯಾಯಾಲಯದ ಮುಂದೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ.
ತನಿಖೆ ವೇಳೆ ಕೆಲವು ಘಟನೆಗಳು 2003ಕ್ಕಿಂತಲೂ ಹಳೆಯದ್ದಾಗಿವೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು India Today ವರದಿ ಮಾಡಿದೆ. ಘಟನೆಗಳ ಪರಸ್ಪರ ಸಂಬಂಧ, ಆರೋಪಿತ ಸಂತ್ರಸ್ತರ ಗುರುತು ಹಾಗೂ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ತನಿಖಾಧಿಕಾರಿಗಳು ಟೇಯ್ನಾಂಪೇಟ್ ಮನೆ ಮಾತ್ರವಲ್ಲದೆ ವೀರಮಣಿಯ ನಿವಾಸ, ಕಚೇರಿ ಹಾಗೂ ಚೆನ್ನೈ ಹೊರವಲಯದಲ್ಲಿರುವ ಅತಿಥಿಗೃಹ ಸೇರಿದಂತೆ ಇತರ ಸ್ಥಳಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಈ ಸ್ಥಳಗಳಿಗೆ ಅಪ್ರಾಪ್ತ ಬಾಲಕಿಯರನ್ನು ಕರೆತರಲಾಗುತ್ತಿತ್ತೇ ಮತ್ತು ಅಲ್ಲಿ ಯಾವುದೇ ಅಪರಾಧ ನಡೆದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ವೀರಮಣಿಗೆ ಸಂಬಂಧಿಸಿದ ದತ್ತಿ ಚಟುವಟಿಕೆಗಳ ಮೂಲಕ ಶಿಕ್ಷಣಕ್ಕೆ ನೆರವು ಪಡೆಯುತ್ತಿದ್ದ ಮಕ್ಕಳ ಸಂಪರ್ಕವನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಶಾಂತಿ ಕೆಲವು ಬಾಲಕಿಯರನ್ನು ಶಾಪಿಂಗ್ಗೆ ಅಥವಾ ಐಷಾರಾಮಿ ಹೋಟೆಲ್ ಗಳಿಗೆ ಕರೆದುಕೊಂಡು ಹೋಗುತ್ತಿದ್ದರೇ ಎಂಬುದನ್ನೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ವೀರಮಣಿ ಮತ್ತು ಶಾಂತಿ ನಡುವೆ ನಡೆದಿರುವ ಸಂದೇಶಗಳನ್ನೂ ತನಿಖಾ ತಂಡ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
SC/ST ಕಾಯ್ದೆ ಅನ್ವಯ
ತನಿಖೆಯಲ್ಲಿ ಗುರುತಿಸಲ್ಪಟ್ಟ ಸಂತ್ರಸ್ತೆಯೊಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣಕ್ಕೆ SC/ST (Prevention of Atrocities) Act, 1989ರ ಸಂಬಂಧಿತ ವಿಧಿಗಳನ್ನು ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಕಾಯ್ದೆಯಡಿ ಸಂತ್ರಸ್ತೆಗೆ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದೀಗ ಪ್ರಕರಣದ ತನಿಖೆಯ ಭಾಗವಾಗಿ ವೀರಮಣಿಯನ್ನು ಮೂರು ದಿನಗಳ ಕಾಲ ಪೊಲೀಸ್ ವಿಚಾರಣೆಗೆ ಪಡೆಯಲು ನ್ಯಾಯಾಲಯ ಅನುಮತಿ ನೀಡಿದೆ.
ವೀರಮಣಿಯ ವಯಸ್ಸು ಹಾಗೂ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿದ ನ್ಯಾಯಾಲಯ, ಸಾಮಾನ್ಯ ಪೊಲೀಸ್ ಕಸ್ಟಡಿ ಪರಿಸರದ ಬದಲು ಪುಝಲ್ ಕೇಂದ್ರ ಕಾರಾಗೃಹ ಸಂಕೀರ್ಣದ ನ್ಯಾಯಾಲಯದ ಆವರಣದಲ್ಲಿ ವಿಚಾರಣೆ ನಡೆಸುವಂತೆ ಸೂಚಿಸಿದೆ. ವಕೀಲರನ್ನು ಪ್ರತಿದಿನ ಭೇಟಿಯಾಗಲು ಅವಕಾಶ ನೀಡಲಾಗಿದೆ.
‘ಎಪ್ಸ್ಟೀನ್ ಫೈಲ್ಸ್’ಗೆ ಹೋಲಿಕೆ
ಅಮೆರಿಕದ ಜೆಫ್ರಿ ಎಪ್ಸ್ಟೀನ್ ಪ್ರಕರಣದೊಂದಿಗೆ ವೀರಮಣಿ ಪ್ರಕರಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೋಲಿಸುತ್ತಿದ್ದಾರೆ. ವೀರಮಣಿ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ಇತರ ವ್ಯಕ್ತಿಗಳ ಪಾತ್ರ ಅಥವಾ ಆರೋಪಿತ ಕೃತ್ಯಗಳ ಸಂಪೂರ್ಣ ವ್ಯಾಪ್ತಿಯ ಕುರಿತು ಪೊಲೀಸರು ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
ಪ್ರಕರಣದ ವ್ಯಾಪ್ತಿ 2003ರವರೆಗೆ ವಿಸ್ತರಿಸಿರಬಹುದೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹಲವು ಸಂತ್ರಸ್ತರನ್ನು ಗುರುತಿಸಿರುವ ಹಿನ್ನೆಲೆಯಲ್ಲಿ, ಇನ್ನಷ್ಟು ಮಂದಿ ಮುಂದೆ ಬಂದು ಹೇಳಿಕೆ ನೀಡುವ ಸಾಧ್ಯತೆಯನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಹಿಂದಿನ DMK ಸರಕಾರವನ್ನು ಪ್ರಶ್ನಿಸುತ್ತಿರುವ ಜನರು
ಈ ನಡುವೆ, ಹಿಂದಿನ DMK ಸರ್ಕಾರ ಮತ್ತು ಅಂದಿನ ಪೊಲೀಸ್ ಆಡಳಿತದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ. 2025ರಲ್ಲೇ ಪ್ರಕರಣ ದಾಖಲಾಗಿದ್ದರೂ ಬಂಧನಕ್ಕೆ ಸುಮಾರು 11 ತಿಂಗಳು ಏಕೆ ಬೇಕಾಯಿತು, ವೀಡಿಯೊ ಸಾಕ್ಷ್ಯವಿದೆ ಎನ್ನಲಾದ ಪ್ರಕರಣವನ್ನು ಮುಚ್ಚುವ ವರದಿಯ ಹಂತಕ್ಕೆ ಏಕೆ ಕೊಂಡೊಯ್ಯಲಾಯಿತು, ಆ ನಿರ್ಧಾರಕ್ಕೆ ಯಾರು ಅನುಮೋದನೆ ನೀಡಿದರು ಮತ್ತು ಯಾವ ಆಧಾರದ ಮೇಲೆ ತನಿಖೆ ನಡೆಸಲಾಯಿತು ಎಂಬ ಪ್ರಶ್ನೆಗಳನ್ನು ಟ್ವೀಟ್ ನಲ್ಲಿ ಕೇಳಲಾಗಿದೆ.
POCSO ನ್ಯಾಯಾಲಯದ ಹಸ್ತಕ್ಷೇಪದ ಬಳಿಕ ಸಂತ್ರಸ್ತೆ ಹಾಗೂ ಹೆಚ್ಚುವರಿ ಸಾಕ್ಷ್ಯಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದ್ದರೆ, ಆರಂಭಿಕ ತನಿಖೆಯಲ್ಲೇ ಅವುಗಳನ್ನು ಏಕೆ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂಬುದನ್ನೂ ಪ್ರಶ್ನಿಸಲಾಗಿದೆ.
ಇದೇ ವೇಳೆ, ವೀರಮಣಿಯೊಂದಿಗೆ ಯಾವುದೇ ರಾಜಕೀಯ ನಾಯಕರು, ಚುನಾಯಿತ ಪ್ರತಿನಿಧಿಗಳು ಅಥವಾ DMK ಪದಾಧಿಕಾರಿಗಳು ಸಂಪರ್ಕದಲ್ಲಿದ್ದರೇ, ತನಿಖೆಯ ಮೇಲೆ ಯಾರಾದರೂ ಪ್ರಭಾವ ಬೀರಲು ಅಥವಾ ಅಡ್ಡಿಪಡಿಸಲು ಪ್ರಯತ್ನಿಸಿದ್ದರೇ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂಬುದು ಸದ್ಯಕ್ಕೆ ಸಾಬೀತಾದ ಸಂಗತಿಯಲ್ಲವಾದರೂ, ಯಾರು ತನಿಖೆಯಲ್ಲಿ ವಿಫಲರಾದರು, ಯಾರಾದರೂ ಹಸ್ತಕ್ಷೇಪ ಮಾಡಿದ್ದರೇ ಮತ್ತು ಯಾರನ್ನಾದರೂ ರಕ್ಷಿಸಲಾಗಿತ್ತೇ ಎಂಬುದನ್ನು ತನಿಖೆಯ ಮೂಲಕ ಬಹಿರಂಗಪಡಿಸಬೇಕು ಮೊದಲಾದ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಎತ್ತಲಾಗಿದೆ.






