ಈಡಿ ಮುಖ್ಯಸ್ಥರಾಗಿ ಸಂಜಯ್ ಕುಮಾರ್ ಅವಧಿ ವಿಸ್ತರಣೆ ಕೋರಿ ಸುಪ್ರೀಂಕೋರ್ಟ್ ಗೆ ಕೇಂದ್ರ ಮತ್ತೆ ಮೊರೆ
ಹೊಸದಿಲ್ಲಿ: ಅನುಷ್ಠಾನ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾರ ಸೇವಾವಧಿಯನ್ನು ವಿಸ್ತರಿಸಲು ಅನುಮತಿ ನೀಡಬೇಕೆಂದು ಕೋರಿ ಕೇಂದ್ರ ಸರಕಾರವು ಬುಧವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಮಿಶ್ರಾರ ಮೂರನೇ ವಿಸ್ತರಿತ ಸೇವಾವಧಿಯು ನವೆಂಬರ್ನಲ್ಲಿ ಕೊನೆಗೊಳ್ಳಲಿದೆ. ಆದರೆ, ಅದಕ್ಕಿಂತ ನಾಲ್ಕು ತಿಂಗಳು ಮೊದಲೇ, ಅಂದರೆ ಜುಲೈ 31ರಂದು ಅಧಿಕಾರದಿಂದ ಕೆಳಗಿಳಿಯುವಂತೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ವಿಕ್ರಮ್ನಾಥ್ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠವೊಂದು ಈ ತಿಂಗಳ ಮೊದಲಲ್ಲಿ ಮಿಶ್ರಾಗೆ ನಿರ್ದೇಶನ ನೀಡಿತ್ತು. 2021 ನವೆಂಬರ್ ಮತ್ತು 2022 ನವೆಂಬರ್ನಲ್ಲಿ ಅವರಿಗೆ ನೀಡಲಾಗಿರುವ ಎರಡು ವಿಸ್ತರಣೆಗಳು ಕಾನೂನುಬಾಹಿರ ಎಂಬುದಾಗಿ ನ್ಯಾಯಾಲಯ ಹೇಳಿತ್ತು.
ಹುದ್ದೆಯಲ್ಲಿ ಯಾರು ಇರುತ್ತಾರೆ ಎನ್ನುವುದು ಮುಖ್ಯವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದರು. ‘‘ಅಭಿವೃದ್ಧಿ ವಿರೋಧಿ ಮನೋಸ್ಥಿತಿ ಹೊಂದಿರುವ ವಂಶ ಪಾರಂಪರ್ಯವಾದಿ ರಾಜಕಾರಣಿಗಳ ಭ್ರಷ್ಟಾಚಾರದ ಮೇಲೆ ಅನುಷ್ಠಾನ ನಿರ್ದೇಶನಾಲಯ ನಿಗಾ ಇಡುತ್ತದೆ’’ ಎಂದು ಅವರು ಹೇಳಿದ್ದರು.
ಆದರೆ, ಬುಧವಾರ ನ್ಯಾ. ಗವಾಯಿ ನೇತೃತ್ವದ ಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅನುಷ್ಠಾನ ನಿರ್ದೇಶನಾಲಯದ ನಿರ್ದೇಶಕ ಮಿಶ್ರಾರ ಸೇವಾವಧಿ ಕುರಿತು ನೀಡಿರುವ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರುವ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ಒತ್ತಾಯಿಸಿದರು. ಇದಕ್ಕೆ ಒಪ್ಪಿದ ನ್ಯಾಯಾಲಯ, ಗುರುವಾರ ಸಂಜೆ 3:30ಕ್ಕೆ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿತು.
ಮಿಶ್ರಾರನ್ನು ಮೊದಲು, 2018 ನವೆಂಬರ್ 19ರಂದು ಎರಡು ವರ್ಷಗಳ ಅವಧಿಗೆ ಅನುಷ್ಠಾನ ನಿರ್ದೇಶನಾಲಯದ ನಿರ್ದೇಶಕರಾಗಿ ಸರಕಾರ ನೇಮಿಸಿತ್ತು. 2020ರಲ್ಲಿ ಸರಕಾರವು ಅವರ ಸೇವಾವಧಿಯನ್ನು ಒಂದು ವರ್ಷ ವಿಸ್ತರಿಸಿತು.
2021 ಸೆಪ್ಟಂಬರ್ನಲ್ಲಿ, ಮಿಶ್ರಾರ ಸೇವಾವಧಿಯನ್ನು ಇನ್ನು ವಿಸ್ತರಿಸದಂತೆ ಸುಪ್ರೀಂ ಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ಅನುಷ್ಠಾನ ನಿರ್ದೇಶನಾಲಯ ಮತ್ತು ಸಿಬಿಐ ನಿರ್ದೇಶಕರ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಸರಕಾರಕ್ಕೆ ಅಧಿಕಾರ ನೀಡುವ ಎರಡು ಅಧ್ಯಾದೇಶಗಳನ್ನು ಸರಕಾರವು ಜಾರಿಗೆ ತಂದಿತು. ಇದರ ಆಧಾರದಲ್ಲಿ, ಮಿಶ್ರಾರ ಅವಧಿಯನ್ನು ಇನ್ನೊಂದು ವರ್ಷ ವಿಸ್ತರಿಸಲಾಯಿತು.
2022 ನವೆಂಬರ್ನಲ್ಲಿ ಸರಕಾರವು ಅವರ ಸೇವಾವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಿತು.ಈ ವಿಸ್ತರಣೆಗಳನ್ನು ಪ್ರಶ್ನಿಸಿ ಪ್ರತಿಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್ಗೆ ಹೋಗಿದ್ದರು.