ರೂ. 2000 ನೋಟು ವಾಪಸ್ ಪಡೆಯುವ ಆರ್ಬಿಐ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಎರಡು ಸಾವಿರ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆಯುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಿಲ್ಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರನ್ನೊಳಗೊಂಡ ಪೀಠ ಇಂದು ವಜಾಗೊಳಿಸಿದೆ.
ಆರ್ಬಿಐ ಕಾಯಿದೆಯನ್ವಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ರಿಸರ್ವ್ ಬ್ಯಾಂಕ್ಗೆ ಸ್ವತಂತ್ರ ಅಧಿಕಾರವಿಲ್ಲ ಎಂದು ಅರ್ಜಿದಾರರಾದ ವಕೀಲ ರಜನೀಶ್ ಭಾಸ್ಕರ್ ಗುಪ್ತಾ ಅವರು ವಾದಿಸಿದ್ದರು.
ನೋಟುಗಳನ್ನು ವಾಪಸ್ ಪಡೆಯುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಹಾಗೂ ಸರ್ಕಾರ ಇಂತಹ ಆದೇಶ ಹೊರಡಿಸಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ಅರ್ಜಿದಾರರು ಹೇಳಿದ್ದರು.
ಹೈಕೋರ್ಟ್ ಈ ಹಿಂದೆ ಮೇ 29ರಂದು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ರೂ 2000ರ ನೋಟುಗಳನ್ನು ಯಾವುದೇ ಗುರುತಿನ ದಾಖಲೆಯ ಅಗತ್ಯವಿಲ್ಲದೆ ಬದಲಾಯಿಸಬಹುದೆಂಬ ಆರ್ಬಿಐ ತೀರ್ಮಾನವನ್ನು ಅವರು ಪ್ರಶ್ನಿಸಿದ್ದರು.
ರೂ 2000 ರ ನೋಟುಗಳು ತಮ್ಮ ಉದ್ದೇಶ ಈಡೇರಿಸಿವೆ ಹಾಗೂ ಅವುಗಳನ್ನು ಚಲಾವಣೆಯಿಂದ ಹಿಂಪಡೆಯುವ ಆಡಳಿತಾತ್ಮಕ ನಿರ್ಧಾರದಲ್ಲಿ ಕೋರ್ಟುಗಳು ಹಸ್ತಕ್ಷೇಪ ನಡೆಸಬಾರದು ಎಂದು ಹೈಕೋರ್ಟ್ ಹೇಳಿತ್ತು.
ಈ ನಿರ್ಧಾರ ಪ್ರಶ್ನಿಸಿ ಉಪಾಧ್ಯಾಯ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದಾರೆ. ಈ ಪ್ರಕರಣದ ತುರ್ತು ವಿಚಾರಣೆಗೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.