Assam | NEET ಅಕ್ರಮದ ವಿರುದ್ಧ ಪ್ರತಿಭಟನೆ ಆಯೋಜಿಸಲು ಪ್ರಯತ್ನಿಸಿದ ಮೂವರು ವಿದ್ಯಾರ್ಥಿಗಳ ಬಂಧನ

Photo | The Wire
ಅಸ್ಸಾಂ : ನೀಟ್ ಅಕ್ರಮದ ವಿರುದ್ಧ ದೇಶವ್ಯಾಪಿ ನಡೆದ ವಿದ್ಯಾರ್ಥಿಗಳ ಚಳುವಳಿಗೆ ಬೆಂಬಲವಾಗಿ ಪ್ರತಿಭಟನೆ ಆಯೋಜಿಸಲು ಯತ್ನಿಸಿರುವ ಆರೋಪದಲ್ಲಿ ಲಖಿಂಪುರ್ ಜಿಲ್ಲೆಯ ಲಾಲುಕ್ ಪ್ರದೇಶದ ಮೂವರು ಯುವಕರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಮೊಂಜೂರ್ ರೆಹಮಾನ್ (23), ಅಶ್ರಫುಲ್ ಇಸ್ಲಾಂ (21) ಮತ್ತು ಅಬ್ದುಲ್ ಕಾಶೆಮ್ (23) ಬಂಧಿತರು ಎಂದು ದಿ ವೈರ್ ವರದಿ ಮಾಡಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ನಡೆದ ಚಳುವಳಿಗೆ ಬೆಂಬಲ ಸೂಚಿಸುವ ದೃಷ್ಟಿಯಿಂದ ಶಾಂತಿಯುತ ಪ್ರತಿಭಟನೆ ಆಯೋಜಿಸಲು ಅವರು ವಾಟ್ಸಾಪ್ ಗುಂಪೊಂದನ್ನು ರಚಿಸಿದ್ದರು. ಪ್ರತಿಭಟನೆ ಆಯೋಜಿಸಲು ಅವರು ಲಾಲುಕ್ ಪೊಲೀಸ್ ಠಾಣೆಯಿಂದ ಅನುಮತಿ ಕೋರಿದ್ದರು. ಆದರೆ, ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ಬಂಧಿತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಬಂಧಿತರಲ್ಲಿ ಮೊಂಜುರ್ ರಹ್ಮಾನ್ ಮತ್ತು ಅಶ್ರಫುಲ್ ಇಸ್ಲಾಂ ಎಂಕಾಂ ವಿದ್ಯಾರ್ಥಿಯಾಗಿದ್ದಾರೆ. ಅಬ್ದುಲ್ ಕಾಶೇಮ್ ಔಷಧ ವಿಜ್ಞಾನದಲ್ಲಿ ಪದವೀಧರರಾಗಿದ್ದಾರೆ.
"ನನ್ನ ಮಗ ಯಾವುದೇ ಸಂವಿಧಾನ ವಿರೋಧಿ ಕೆಲಸ ಮಾಡಿಲ್ಲ. ದೇಶದಾದ್ಯಂತ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಅವರನ್ನು ಬಂಧಿಸಿಲ್ಲ. ನನ್ನ ಪ್ರತಿಭಟನೆ ನಡೆಸಿಲ್ಲ. ಕೇವಲ ಆಯೋಜಿಸಲು ಮಾತ್ರ ಪ್ರಯತ್ನಿಸಿದ್ದಾರೆ ಎಂದು ಮೊಂಜುರ್ ಅವರ ತಂದೆ ಮೊಝಿಬುರ್ ಹೇಳಿದ್ದಾರೆ.
ಅಶ್ರಫುಲ್ ಇಸ್ಲಾಂ ಅವರ ತಂದೆ ಅಯೂಬ್ ಅಲಿ, ಪ್ರತಿಕ್ರಿಯಿಸಿ, ಇತರ ಸಮುದಾಯದವರನ್ನು ಬಂಧಿಸಲಾಗಿಲ್ಲ. ನಾವು ಮುಸ್ಲಿಮರು ಎಂಬ ಕಾರಣಕ್ಕೆ ನಮ್ಮನ್ನೇ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮೂವರು ಯುವಕರನ್ನು ಜುಲೈ 23ರಂದು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 61(2)(b), 353(1) ಮತ್ತು 152ರ ಅಡಿಯಲ್ಲಿ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಇವುಗಳಲ್ಲಿ ಸೆಕ್ಷನ್ 152 ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಗೆ ಅಪಾಯ ಉಂಟುಮಾಡುವ ಕೃತ್ಯಗಳಿಗೆ ಸಂಬಂಧಿಸಿದೆ.






