ಎನ್ಸಿಪಿ, ಶಿವಸೇನೆ ಹಾದಿಯಲ್ಲಿ ಟಿಎಂಸಿ: 28 ರಲ್ಲಿ 19 ಸಂಸದರಿಂದ ಬಂಡಾಯಕ್ಕೆ ಬೆಂಬಲ

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಹಲವು ರಾಜಕೀಯ ಯುದ್ಧಗಳ ಪೈಕಿ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಪಕ್ಷದ ಒಟ್ಟು 28 ಸಂಸದರ ಪೈಕಿ 19 ಮಂದಿಯ ಬೆಂಬಲ ಅಂದರೆ ಮೂರನೇ ಎರಡರಷ್ಟು ಬೆಂಬಲ ತಮಗೆ ಇದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಬಂಡಾಯ ಸಾರಿರುವ ಬಣ ಹೇಳಿಕೊಂಡಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಭಿನ್ನಮತೀಯ ಶಾಸಕರ ಗುಂಪು ಪ್ರತ್ಯೇಕ ಆಸನ ವ್ಯವಸ್ಥೆಗೆ ಮಾಡಿಕೊಂಡ ಮನವಿಯಂತೆ ಸಂಸತ್ ನಲ್ಲಿ ಕೂಡಾ ಪ್ರತ್ಯೇಕ ಪ್ರಾತಿನಿಧ್ಯ ಕೋರಲು ಈ ಬಣ ಮುಂದಾಗಿದೆ.
ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿಯವರ ನಿಷ್ಠರಾಗಿದ್ದ ಸಾಯೊನಿ ಘೋಷ್ ಹಾಗೂ ಮೂವರು ಮುಸ್ಲಿಂ ಸಂಸದರು ಕೂಡಾ ಭಿನ್ನಮತೀಯ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಜತೆ ವಿಲೀನಗೊಳ್ಳಲು ಈ ಸಂಸದರು ಮುಂದಾಗಿದ್ದು, ತಮ್ಮದೇ ಅಧಿಕೃತ ಟಿಎಂಸಿ ಎಂಬ ಈ ಬಣದ ಪ್ರತಿಪಾದನೆಯು ಅನರ್ಹತೆಯ ಭೀತಿಯಿಂದ ಪಾರಾಗಲು ನೆರವಾಗಲಿದೆ. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣ ಇದೇ ತಂತ್ರ ಅನುಸರಿಸಿದ್ದವು. ಎರಡೂ ಪ್ರಕರಣಗಳಲ್ಲಿ ಆ ಬಳಿಕ ಚುನಾವಣಾ ಆಯೋಗ, ಈ ಭಿನ್ನಮತೀಯ ಬಣಗಳನ್ನೇ ನೈಜ ಪಕ್ಷ ಎಂದು ಮಾನ್ಯ ಮಾಡಿತ್ತು ಹಾಗೂ ಇವು ಬಿಜೆಪಿ ಮಿತ್ರಪಕ್ಷಗಳಾಗಿ ಗುರುತಿಸಿಕೊಂಡಿವೆ.
ಆದರೆ ಮುಸ್ಲಿಂ ಸಂಸದರು ಕೂಡಾ ಈ ಬಣದ ಭಾಗವಾಗಿರುವುದರಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳವ ಬಗ್ಗೆಯೂ ಚಿಂತನೆ ನಡೆದಿದೆ. ಭಿನ್ನರ ಗುಂಪು ಪಕ್ಷದ ಅಧಿಕೃತ ಹೆಸರು ಮತ್ತು ಚಿಹ್ನೆ ತಮಗೆ ಸೇರಬೇಕು ಎಂದು ಹಕ್ಕು ಮಂಡಿಸಬಹುದಾಗಿದೆ. ಇದು ತೃಣಮೂಲ ನಾಯಕಿಯ ಸಂಕಷ್ಟಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.






