ಸಮಾನ ನಾಗರಿಕ ಸಂಹಿತೆ ಹಿಂದೂ ರಾಷ್ಟ್ರ ಪರಿಕಲ್ಪನೆಯೊಂದಿಗೆ ಸಂಬಂಧ ಹೊಂದಿದೆ: ಅಮರ್ತ್ಯ ಸೇನ್

Nobel laureate Amartya Sen Photo: PTI
ಶಾಂತಿನಿಕೇತನ: ಸಮಾನ ನಾಗರಿಕ ಸಂಹಿತೆ ಅತ್ಯಂತ ಕ್ಲಿಷ್ಟ ವಿಚಾರ. ಇದನ್ನು ಸುಲಭವಾಗಿ ಮಾಡುವ ಪ್ರಯತ್ನ ಮುಂದುವರಿದಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ 90 ವರ್ಷ ವಯಸ್ಸಿನ ಸೇನ್, ಖಚಿತವಾಗಿಯೂ ಸಮಾನ ನಾಗರಿಕ ಸಂಹಿತೆಯು ಹಿಂದೂ ರಾಷ್ಟ್ರ ಪರಿಕಲ್ಪನೆ ಜತೆ ಸಂಬಂಧ ಹೊಂದಿದೆ. ಆದರೆ ಹಿಂದೂ ರಾಷ್ಟ್ರ ಎನ್ನುವುದು ಪ್ರಗತಿಗೆ ಇರುವ ಏಕೈಕ ಮಾರ್ಗವೇನಲ್ಲ; ಹಿಂದುತ್ವವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ವಿಶ್ಲೇಷಿಸಿದ್ದಾರೆ.
"ಸಮಾನ ನಾಗರಿಕ ಸಂಹಿತೆ ಕ್ಲಿಷ್ಟಕರ ವಿಚಾರ. ಇದನ್ನು ಸರಳಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿವೆ. ಧರ್ಮಗಳ ನಡುವೆ ಅಭಿಪ್ರಾಯ ಬೇಧ ಇದೆ. ನಿಯಮ ಹಾಗೂ ರೂಢಿಗಳಲ್ಲೂ ವ್ಯತ್ಯಾಸ ಇದೆ. ಈ ಎಲ್ಲ ವ್ಯತ್ಯಾಸಗಳನ್ನು ತೊಡೆದುಹಾಕಿ ಮತ್ತೆ ಒಗ್ಗೂಡಬೇಕು" ಎಂದು ಸಲಹೆ ಮಾಡಿದ್ದಾರೆ.
"ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವಲ್ಲಿ ವಿಳಂಬ ಮಾಡಬಾರದು ಎಂಬ ಬಗ್ಗೆ ನಾನು ಪತ್ರಿಕೆಯಲ್ಲಿ ಓದಿದ್ದೇನೆ. ಇಂಥ ಬುದ್ಧಿಗೇಡಿ ಪರಿಕಲ್ಪನೆ ಎಲ್ಲಿಂದ ಬಂದಿದೆ ಎನ್ನುವುದು ತಿಳಿಯದು" ಎಂದರು.







