Uttar Pradesh| ಬಹಿರ್ದೆಸೆಗೆ ತೆರಳಿದ್ದ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಪ್ರಕರಣ ದಾಖಲು

ಭದೋಹಿ: ನಾಲೆಯ ಬಳಿ ಬಹಿರ್ದೆಸೆ (ಮಲ ವಿಸರ್ಜನೆ) ಮಾಡಿದ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕಣ್ಣಿಗೆ ಮೋಟರ್ ಬೈಕ್ ಕೀಯನ್ನು ಚುಚ್ಚಿದ ಪರಿಣಾಮ, ಆತನ ಒಂದು ಕಣ್ಣಿನ ದೃಷ್ಟಿ ನಷ್ಟವಾಗಿರುವ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಔರಾಯಿ ಪ್ರದೇಶದಲ್ಲಿನ ನಾಲೆಗೆ ಮಲ ವಿಸರ್ಜನೆ ಮಾಡಲು ಸಂತ್ರಸ್ತ ಯುವಕ ರಾಹುಲ್ ತೆರಳಿದ್ದಾಗ ಆರೋಪಿ ಶಂಕರ್ ಬಿಂದ್ ನಡುವೆ ವಾಗ್ವಾದ ನಡೆದಿದೆ. ನಾಲೆಯ ಬಳಿ ಮಲ ವಿಸರ್ಜನೆ ಮಾಡುವುದಕ್ಕೆ ಆರೋಪಿ ಶಂಕರ್ ಬಿಂದ್ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಬಳಿಕ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಹಲ್ಲೆಯಿಂದ ತಪ್ಪಿಸಿಕೊಳ್ಳಲು ಸಂತ್ರಸ್ತ ಯುವಕ ಪ್ರಯತ್ನಿಸಿದಾಗ, ಆತನ ಒಂದು ಕಣ್ಣಿಗೆ ಮೋಟರ್ ಬೈಕ್ ನ ಕೀಯಿಂದ ಆರೋಪಿ ಶಂಕರ್ ಬಿಂದ್ ಚುಚ್ಚಿದ್ದಾನೆ. ಸಂತ್ರಸ್ತ ಯುವಕ ಘಟನಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ ಎಂದು ಭದೋಹಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಂಗ್ಲೀಕ್ ತಿಳಿಸಿದ್ದಾರೆ.
ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದಾಗ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಾಯಾಳು ಯುವಕನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ಸಂತ್ರಸ್ತ ಯುವಕನ ತಂದೆ ರಾಮ್ ಧಾನಿ ನೀಡಿದ ದೂರನ್ನು ಆಧರಿಸಿ, ಆರೋಪಿ ಶಂಕರ್ ಬಿಂದ್ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







