Uttar Pradesh| ಅವಳಿ ಪುತ್ರಿಯರ ಕತ್ತು ಸೀಳಿ ಕೊಂದು ಪೊಲೀಸರಿಗೆ ಕರೆ ಮಾಡಿದ ತಂದೆ!

PC: x.com/ndtv
ಕಾನ್ಪುರ: ಇಲ್ಲಿನ ಕಿದ್ವಾಯಿ ನಗರದಲ್ಲಿ ರವಿವಾರ ಮುಂಜಾನೆ 11 ವರ್ಷದ ಅವಳಿ ಪುತ್ರಿಯರನ್ನು ಕತ್ತು ಸೀಳಿ ಹತ್ಯೆ ಮಾಡಿದ ತಂದೆ, ಸ್ವತಃ ಪೊಲೀಸರಿಗೆ ಕರೆ ಮಾಡಿ ಅಪರಾಧ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ ಅಪರೂಪದ ಘಟನೆ ವರದಿಯಾಗಿದೆ.
ತುರ್ತು ಸಂದೇಶದ ಹಿನ್ನೆಲೆಯಲ್ಲಿ ಕೃತ್ಯ ನಡೆದ ಅಪಾರ್ಟ್ಮೆಂಟ್ಗೆ ಪೊಲೀಸರು ಆಗಮಿಸಿ ನೋಡಿದಾಗ, ಹುಡುಗಿಯರ ಮೃತದೇಹಗಳು ಬೆಡ್ರೂಮ್ನಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದವು ಹಾಗೂ ಪಕ್ಕದಲ್ಲಿ ಚಾಕು ಬಿದ್ದಿತ್ತು. ಮೃತದೇಹಗಳ ಸಮೀಪ ಕುಳಿತಿದ್ದ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದರು.
ಈ ಬಂಧನವನ್ನು ಕಾನ್ಪುರ ಡಿಸಿಪಿ ದೀಪೇಂದ್ರನಾಥ್ ಚೌಧರಿ ದೃಢಪಡಿಸಿದ್ದು, ಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ. ಮುಂಜಾನೆ 4.30ರ ವೇಳೆಗೆ ಆರೋಪಿ ಸ್ವತಃ 112 ಸಂಖ್ಯೆಗೆ ಕರೆ ಮಾಡಿ ಕೃತ್ಯದ ವಿವರ ನೀಡಿದ್ದಾಗಿ ಚೌಧರಿ ವಿವರಿಸಿದರು.
ಪತ್ನಿ ನಿದ್ದೆ ಮಾಡುತ್ತಿದ್ದ ವೇಳೆ ಪತಿ ಈ ಕೃತ್ಯ ಎಸಗಿದ್ದು, ಖಿನ್ನತೆ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.




