ಉತ್ತರ ಪ್ರದೇಶ | ಮಸೀದಿ ಎದುರು ರಾಮ ನವಮಿ ಯಾತ್ರೆಯನ್ನು ನಿಲ್ಲಿಸಿ, ಜೋರು ಸಂಗೀತ ಹಾಕಿದ ಸಂಘಪರಿವಾರದ ಕಾರ್ಯಕರ್ತರು
Screengrab from the video | PC: X
ಲಕ್ನೊ: ಮಸೀದಿಯೊಂದರ ಎದುರು ಸಾಗುತ್ತಿದ್ದ ರಾಮ ನವಮಿ ಯಾತ್ರೆಯನ್ನು ನಿಲ್ಲಿಸಿರುವ ಸ್ಥಳೀಯ ಸಂಘಪರಿವಾರದ ಕಾರ್ಯಕರ್ತರು, ಜೋರಾಗಿ ಬೊಬ್ಬೆ ಹೊಡೆದು, ಡಿಜೆ ಸಂಗೀತ ಹಾಕಿರುವ ಘಟನೆ ಬುಧವಾರ ಉತ್ತರ ಪ್ರದೇಶದ ಕೋಶಾಂಬಿಯಲ್ಲಿ ನಡೆದಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಗದ್ದಲವು ಕೋಶಾಂಬಿಯ ಮೂರತ್ ಗಂಜ್ ನಲ್ಲಿ ನಡೆದಿರುವುದನ್ನು ತೋರಿಸಿದೆ.
ಓರ್ವ ಟ್ವಿಟರ್ ಬಳಕೆದಾರರು ಸ್ಥಳೀಯ ಪೊಲೀಸರನ್ನು ತಮ್ಮ ಪೋಸ್ಟ್ ನಲ್ಲಿ ಟ್ಯಾಗ್ ಮಾಡಿ, ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರ ಪರಿಣಾಮವಾಗಿ, ಯಾತ್ರೆಯು ಪೊಲೀಸರ ಮೇಲುಸ್ತುವಾರಿಯಲ್ಲಿ ಶಾಂತಿಯುತವಾಗಿ ನಡೆಯಿತು ಎಂದು ಕೋಶಾಂಬಿ ಪೊಲೀಸರ ಅಧಿಕೃತ ಖಾತೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಯಾತ್ರೆ ಮೇಲಿನ ಆರೋಪವನ್ನು ಅದರಲ್ಲಿ ಅಲ್ಲಗಳೆಯಲಾಗಿದೆ.
ಆದರೆ, ಯಾತ್ರೆಯು ಮಸೀದಿಯೊಂದರ ಮುಂದೆ ನಿಂತು, ಡಿಜೆ ಸಂಗೀತದೊಂದಿಗೆ ಆ ಸ್ಥಳದಲ್ಲಿ ಅಡಚಣೆಯನ್ನುಂಟು ಮಾಡುತ್ತಿರುವುದು ಆ ವೀಡಿಯೊದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಮಸೀದಿಯ ಹೊರಗೆ ಉದ್ದೇಶಪೂರ್ವಕವಾಗಿ ಯಾತ್ರೆಯನ್ನು ನಿಲ್ಲಿಸಿರುವುದರಿಂದ ಉಂಟಾಗಿರುವ ಧಾರ್ಮಿಕ ಸಂವೇದನಾರಾಹಿತ್ಯದ ಕುರಿತು ಸಾಮಾಜಿಕ ಮಾಧ್ಯನಮ ವೇದಿಕೆಗಳಲ್ಲಿ ವ್ಯಾಪಕ ಕಳವಳ ವ್ಯಕ್ತವಾಗಿದೆ. ಈ ಕುರಿತು ಹಲವಾರು ಬಳಕೆದಾರರು ಖಂಡಿಸಿದ್ದರೆ, ಮತ್ತೆ ಕೆಲವು ಬಳಕೆದಾರರು ಇದು ಸಮಸ್ಯೆಯೇ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.
ಪೊಲೀಸ್ ಇಲಾಖೆಯ ಪ್ರತಿಕ್ರಿಯೆಯನ್ನು ಟೀಕಿಸಿರುವ ಬಳಕೆದಾರರೊಬ್ಬರು, “ನೀವೇನು ಕುರುಡರೆ? ಅವರು ಮಸೀದಿಯ ಎದುರು ಮೆರವಣಿಗೆಯನ್ನು ನಿಲ್ಲಿಸಿ, ಭಾರಿ ಸದ್ದಿನ ಡಿಜೆ ಸಂಗೀತವನ್ನು ಹಾಕಿದ್ದಾರೆ” ಎಂದು ಹೇಳಿದ್ದರೆ, ಮತ್ತೊಬ್ಬ ಬಳಕೆದಾರರು, “ಇದು ಯಾವ ಕೋನದಲ್ಲೂ ಶಾಂತಿಯುತ ಮೆರವಣಿಗೆ ಅನ್ನಿಸುತ್ತಿಲ್ಲ” ಎಂದು ತಮ್ಮ ಸಂದೇಹ ವ್ಯಕ್ತಪಡಿಸಿದ್ದಾರೆ.
ಶಾಂತಿಯುತ ಯಾತ್ರೆ ನಡೆದಿದೆ ಎಂಬ ಪೊಲೀಸ್ ಇಲಾಖೆಯ ಪ್ರತಿಪಾದನೆ ಹಾಗೂ ಸ್ಥಳದಲ್ಲಿ ಅಡಚಣೆಯುಂಟಾಗಿರುವುದನ್ನು ಎತ್ತಿ ತೋರಿಸುತ್ತಿರುವ ವೀಡಿಯೊ ಸಾಕ್ಷಿ ನಡುವಿನ ವ್ಯತ್ಯಾಸವು ಅಧಿಕೃತ ಹೇಳಿಕೆಗಳು ಹಾಗೂ ನೆಲದ ವಾಸ್ತವದ ನಡುವೆ ದೊಡ್ಡ ಪ್ರಮಾಣದ ಸಂಪರ್ಕ ಕಡಿದು ಹೋಗಿರುವುದನ್ನು ಸೂಚಿಸುತ್ತಿದೆ. ಈ ಪ್ರಾಂತ್ಯದಲ್ಲಿ ಗಂಭೀರ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗಬಹುದಾಗಿದ್ದ ಘಟನೆಯ ಕುರಿತು ಪ್ರಾಧಿಕಾರಗಳು ತೋರಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.