ಉತ್ತರಪ್ರದೇಶ: ಬಾಲಕಿಯರ ಗೃಹದಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಐವರು ಅಮಾನತು
ಸಹರಾನ್ಪುರ: ಉತ್ತರಪ್ರದೇಶದ ಸಹರಾನ್ಪುರದಲ್ಲಿರುವ ಬಾಲಕಿಯರ ಗೃಹದಲ್ಲಿ ಹಲವಾರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಜಿಲ್ಲಾಧಿಕಾರಿ ದಿನೇಶ್ ಚಂದ್ರ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಐವರನ್ನು ಅಮಾನತುಗೊಳಿಸಿದ್ದಾರೆ. ಬಾಲಕಿಯರ ಗೃಹದ ಮ್ಯಾನೇಜರ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಆರೋಪಗಳು ಬೆಳಕಿಗೆ ಬಂದ ಬಳಿಕ, ತನಿಖೆ ನಡೆಸುವುದಕ್ಕಾಗಿ ಉಪವಿಭಾಗಾಧಿಕಾರಿ ಕೀರ್ತಿ ರಾಜ್ ಬಾಲಕಿಯರ ಗೃಹ ತಲುಪಿದ್ದಾರೆ. ತನಿಖೆ ಮುಗಿಯುವವರೆಗೆ ಯಾರಾದರೂ ಬಾಲಕಿಯರ ಗೃಹಕ್ಕೆ ಹೋಗುವುದನ್ನಾಗಲಿ, ಅಲ್ಲಿಂದ ಹೊರಬರುವುದನ್ನಾಗಲಿ ನಿಷೇಧಿಸಲಾಗಿದೆ.
‘‘ಬಾಲಕಿಯರ ಗೃಹದ ಕೆಲವು ಮಕ್ಕಳೊಂದಿಗೆ ಕೆಲವರು ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರುಗಳು ಬಂದಿವೆ. ತಕ್ಷಣ ಘಟನೆಯ ಬಗ್ಗೆ ತನಿಖೆಗಾಗಿ ಕೆಲವು ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗಿದೆ. ತನಿಖೆಯ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ’’ ಎಂದು ಜಿಲ್ಲಾಧಿಕಾರಿ ದಿನೇಶ್ ಚಂದ್ರ ಹೇಳಿದರು.
‘‘ಸರ್ಕಲ್ ಆಫಿಸರ್ ಮಟ್ಟದ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಅವರು ನುಡಿದರು.