West Bengal | ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯ; ಬೆಳಗಿನ ಅಸ್ಸೆಂಬ್ಲಿಯಲ್ಲಿ ಹಾಡಲು ಸರ್ಕಾರ ಆದೇಶ

ಸಾಂದರ್ಭಿಕ ಚಿತ್ರ (AI)
ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಮಾನ್ಯತೆ ಪಡೆದ ಮದರಸಾಗಳ ಬೆಳಗಿನ ಅಸ್ಸೆಂಬ್ಲಿಯಲ್ಲಿ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿದೆ.
ಮೇ 19ರಂದು ಮದರಸಾ ಶಿಕ್ಷಣ ನಿರ್ದೇಶಕರು ಹೊರಡಿಸಿದ ಆದೇಶದಲ್ಲಿ, ‘ಸರ್ಕಾರಿ ಮಾದರಿ ಮದರಸಾಗಳು, ಮಾನ್ಯತೆ ಪಡೆದ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಮದರಸಾಗಳಲ್ಲಿ ತರಗತಿಗಳು ಆರಂಭಕ್ಕೂ ಮುನ್ನ ನಡೆಯುವ ಅಸ್ಸೆಂಬ್ಲಿ–ಪ್ರಾರ್ಥನೆಯ ವೇಳೆ “ವಂದೇ ಮಾತರಂ” ಹಾಡಬೇಕು’ ಎಂದು ಸೂಚಿಸಲಾಗಿದೆ.
‘ಹಿಂದಿನ ಎಲ್ಲಾ ಆದೇಶಗಳು ಮತ್ತು ಪದ್ಧತಿಗಳನ್ನು ರದ್ದುಪಡಿಸಿ ಈ ನಿರ್ದೇಶನ ಜಾರಿಗೊಳಿಸಲಾಗಿದೆ’ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಜನವರಿಯಲ್ಲಿ ಕೇಂದ್ರ ಗೃಹ ಸಚಿವಾಲಯವು ‘ವಂದೇ ಮಾತರಂ’ಗೆ 150 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಗೀತೆಯನ್ನು ಹಾಡುವ ಮೂಲಕ ಆಚರಣೆ ನಡೆಸುವಂತೆ ರಾಜ್ಯಗಳಿಗೆ ಸೂಚಿಸಿತ್ತು. ಅದರ ಬೆನ್ನಲ್ಲೇ ಬಂಗಾಳ ಸರ್ಕಾರ ಈ ಕ್ರಮ ಕೈಗೊಂಡಿದೆ.
ಈ ಮೊದಲು ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳ ಬೆಳಗಿನ ಸಭೆಗಳಲ್ಲಿ ರವೀಂದ್ರನಾಥ ಟ್ಯಾಗೋರ್ ರಚನೆಯ ‘ಬಾಂಗ್ಲಾರ್ ಮತಿ ಬಾಂಗ್ಲಾರ್ ಜಲ’ ರಾಜ್ಯ ಗೀತೆಯನ್ನು ಕಡ್ಡಾಯಗೊಳಿಸಿತ್ತು. ಆದರೆ ಹೊಸ ಆದೇಶದಲ್ಲಿ ರಾಜ್ಯ ಗೀತೆಯ ಕುರಿತು ಯಾವುದೇ ಉಲ್ಲೇಖ ಇಲ್ಲ ಎಂದು ಕೆಲವು ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.
‘ರಾಷ್ಟ್ರಗೀತೆಯನ್ನು ಕೈಬಿಡಲು ಸಾಧ್ಯವಿಲ್ಲ. ಈಗ “ವಂದೇ ಮಾತರಂ” ಕೂಡ ಸೇರಿರುವುದರಿಂದ ಅಸ್ಸೆಂಬ್ಲಿಯ ಅವಧಿ ಹೆಚ್ಚಲಿದೆ. ಮೂರು ಹಾಡುಗಳಿಗೆ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವುದು ಕಷ್ಟ’ ಎಂದು ಶಾಲಾ ಮುಖ್ಯಸ್ಥರೊಬ್ಬರು ‘Times of India’ಗೆ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು, ಹೊಸ ಆದೇಶದಲ್ಲಿ ‘ವಂದೇ ಮಾತರಂ’ ಕುರಿತು ಮಾತ್ರ ಉಲ್ಲೇಖವಿದ್ದು, ರಾಜ್ಯ ಗೀತೆಯ ಬಗ್ಗೆ ಯಾವುದೇ ನಿರ್ದೇಶನ ಇಲ್ಲ ಎಂದು ಹೇಳಿದ್ದಾರೆ. ಕೆಲವು ಶಾಲೆಗಳು ಈಗಾಗಲೇ ಹೊಸ ನಿಯಮ ಜಾರಿಗೆ ತಂದಿವೆ ಎಂದೂ ತಿಳಿಸಿದ್ದಾರೆ.
ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬೆಳಗಿನ ಅಸ್ಸೆಂಬ್ಲಿಗಳಲ್ಲಿ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿತ್ತು.
ಕಳೆದ ವಾರ ರಾಜ್ಯ ಸರ್ಕಾರವು ಎಲ್ಲಾ ಶಾಲೆಗಳಲ್ಲಿ ‘ವಂದೇ ಮಾತರಂ’ನ ಆರು ಚರಣಗಳನ್ನು ಹಾಡುವುದನ್ನೂ ಕಡ್ಡಾಯಗೊಳಿಸಿ ಮತ್ತೊಂದು ಆದೇಶ ಹೊರಡಿಸಿತ್ತು.






